ಅಪ್ಪ ಮಕ್ಕಳ ಜತೆ ಹೋದರೆ ಉಳಿಗಾಲವಿಲ್ಲ ಎಂದಿದ್ದೆ: ಎ.ಮಂಜು
ಹಾಸನ, ಜುಲೈ 16: ಮೈತ್ರಿ ಸರ್ಕಾರ ಡೋಲಾಯಮಾನ ಸ್ಥಿತಿಯಲ್ಲಿದೆ. ವಿಶ್ವಾಸಮತ ಸಾಬೀತುಗೊಳಿಸುವ ಯತ್ನ ಸದ್ಯ ಸರ್ಕಾರದ ಮುಂದಿದೆ. ಈ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಸೋತಿರುವ, ಮಾಜಿ ಸಚಿವ ಎ.ಮಂಜು ಮತ್ತೊಮ್ಮೆ ದೇವೇಗೌಡರು ಮತ್ತು ಅವರ ಮಕ್ಕಳ ವಿರುದ್ಧ ಮಾತನಾಡಿದ್ದಾರೆ. ಇಂದಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ವ್ಯಂಗ್ಯದ ಚಾಟಿ ಬೀಸಿದ್ದಾರೆ.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಎ.ಮಂಜು, "ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸಭೆಯಲ್ಲಿ ಹೇಳಿದ ರೀತಿಯಲ್ಲೇ ಅಪ್ಪ ಮಕ್ಕಳು (ಮಾಜಿ ಪ್ರಧಾನಿ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ) ಬೀದಿಗೆ ತಂದು ನಿಲ್ಲಿಸಿದ್ದಾರೆ" ಎಂದು ಚುಚ್ಚಿದ್ದಾರೆ.
ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
"ಅಪ್ಪ-ಮಕ್ಕಳ ಜತೆಗೆ ಹೋದರೆ ಕಾಂಗ್ರೆಸ್ ಗೆ ಉಳಿಗಾಲ ಇಲ್ಲ ಅನ್ನೋದನ್ನು ಯಾವುದೋ ಕಾಲದಿಂದಲೂ ಹೇಳುತ್ತಿದ್ದೆ. ಸಿದ್ದರಾಮಯ್ಯ ಅವರಿಗೂ ಈ ಮಾತನ್ನು ಹೇಳಿದ್ದೆ. ಈಗ ನನ್ನ ಮಾತಿನ ಅರ್ಥ ಅವರಿಗೆ ಆಗಿರಬೇಕು. ಆದರೆ ಇಂದಿನ ರಾಜಕೀಯ ಪರಿಸ್ಥಿತಿಗೆ ಸಿದ್ದರಾಮಯ್ಯ ಅವರನ್ನೇ ದೂರಲಾಗುತ್ತಿದೆ. ಜೆಡಿಎಸ್ ನ ಅತೃಪ್ತ ಶಾಸಕರು ಇದ್ದರೂ ಆ ಬಗ್ಗೆ ಮಾತನಾಡುತ್ತಿಲ್ಲ" ಎಂದು ಎ.ಮಂಜು ಹೇಳಿದ್ದಾರೆ.
ರೆಬೆಲ್ ಶಾಸಕರ ರಾಜೀನಾಮೆ ವಿಚಾರಣೆ, ಉಮೇಶ್ ಜಾಧವ್ ಕೇಸ್ ಉಲ್ಲೇಖ
ಸಚಿವ ರೇವಣ್ಣ ಅವರನ್ನು 'ವರ್ಗಾವಣೆ ಮಂತ್ರಿ' ಎಂದು ಗೇಲಿ ಮಾಡಿದ ಮಂಜು, "ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈಗಿನ ಸಮ್ಮಿಶ್ರ ಸರಕಾರದಿಂದ ಯಾವ ಅಭಿವೃದ್ಧಿಯೂ ಆಗಲ್ಲ ಎಂಬುದು ಜನರಿಗೂ ಗೊತ್ತಾಗಿದೆ. ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಉತ್ತಮ ಕೆಲಸ ಮಾಡುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.