ಕೆಎಸ್ ಈಶ್ವರಪ್ಪ ಮುಂದಿನ ಮುಖ್ಯಮಂತ್ರಿ, ರಾಯಣ್ಣ ಬ್ರಿಗೇಡ್ ಘೋಷಣೆ!
ಈಶ್ವರಪ್ಪ ಮುಂದಿನ ಮುಖ್ಯಮಂತ್ರಿ ಎಂಬ ಒಕ್ಕಣೆಯಿರುವ ಕರಪತ್ರಗಳನ್ನು ರಾಯಣ್ಣ ಬ್ರಿಗೇಡ್ ನಿಂದ ಹಾಸನದ ಅರಸೀಕೆರೆಯಲ್ಲಿ ಹಂಚಲಾಗಿದೆ. ಹೌದಾ, ಈಶ್ವರಪ್ಪ ಮುಖ್ಯಮಂತ್ರಿ ಆಗೋದಿಕ್ಕೆ ಅಂತಲೇ ರಾಯಣ್ಣ ಬ್ರಿಗೇಡ್ ಶುರು ಮಾಡಿದರಾ?
ಹಾಸನ, ಜನವರಿ 7: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಬಹಳ ಸಮಯ ಇದೆ. ಆದರೆ ಬಿಜೆಪಿಯ ವರ್ತನೆ ಹಾಗೂ ಅದರ ನಾಯಕರ ಬಗೆಗಿನ ಹೇಳಿಕೆ ಗಮನಿಸಿದರೆ ಸ್ಪಷ್ಟ ಜನಾದೇಶ ಸಿಕ್ಕಿ, ಯಾರು ಮುಖ್ಯಮಂತ್ರಿ ಎಂಬುದಷ್ಟೇ ಆಖೈರಾಗಬೇಕೇನೋ ಎನ್ನುವಂತಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಪ್ರಕಾರ ಕೆ.ಎಸ್.ಈಶ್ವರಪ್ಪ ಮುಂದಿನ ಮುಖ್ಯಮಂತ್ರಿಯಂತೆ.
ಆದರೆ, ಸ್ವತಃ ಈಶ್ವರಪ್ಪನವರೂ ಸೇರಿದ ಹಾಗೆ ಬಿಜೆಪಿಯ ವರಿಷ್ಠರು ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದ್ದೇ ಹೇಳಿದ್ದು. ಆದರೆ ಅರಸೀಕೆರೆಯಲ್ಲಿ ಈಶ್ವರಪ್ಪ ಬೆಂಬಲಿಗರು ಹಂಚಿದ ಕರಪತ್ರದಲ್ಲಿ ಈಶ್ವರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಲಾಗಿದೆ.[ನಾನ್ಯಾಕೆ ಸಿಎಂ ಆಗಬಾರದು: ಬಿಎಸ್ವೈ, ಈಶ್ವರಪ್ಪ ಭಿನ್ನಮತ ಜೋರು]
ರಾಯಣ್ಣ ಬ್ರಿಗೇಡ್ ಜತೆ ಗುರುತಿಸಿಕೊಂಡ ಕಾರಣಕ್ಕೆ ಈಶ್ವರಪ್ಪ ವಿರುದ್ಧ ಬಿಎಸ್ ವೈ ಮೊದಲೇ ಧುಮುಧುಮು ಅಂತಿದ್ದಾರೆ. ಅದರ ಮಧ್ಯೆ ಈ ರೀತಿ ಘೋಷಣೆಗಳ ಕರಪತ್ರ ಹಂಚಿದರೆ ಮುಂದೇನು ಅಂತ ಕಾದುನೋಡಬೇಕಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಯಡಿಯೂರಪ್ಪನವರು ಇಂಥ ಘಟನೆಗಳನ್ನು ಹೇಗೆ ಪರಿಗಣಿಸುತ್ತಾರೋ?
ಇಲ್ಲಿ ಇನ್ನೊಂದು ವಿಷಯ. ನಿಮಗೆ ಮುಖ್ಯಮಂತ್ರಿ ಆಗುವ ಆಸೆ ಇದೆಯಾ ಎಂದು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಕೇಳಲಾಗಿತ್ತು. ಅವಕಾಶ ಸಿಕ್ಕರೆ ಯಾಕಾಗಬಾರದು? ನಾನೇನು ಸನ್ಯಾಸಿಯಲ್ಲ. ಪಕ್ಷ ಆ ಜವಾಬ್ದಾರಿ ವಹಿಸಿಕೋ ಎಂದರೆ ನಾನು ಸಿದ್ಧ ಎಂದಿದ್ದರು ಈಶ್ವರಪ್ಪ. ಸದ್ಯಕ್ಕೆ ಸಣ್ಣದೊಂದು ಬೆಂಕಿ ಕಿಡಿ ಕಾಣಿಸಿಕೊಂಡಿದೆ ಬಿಜೆಪಿಯಲ್ಲಿ. ಅದು ಇನ್ಯಾವ ಹಂತ ತಲುಪುತ್ತದೋ?