ಈಶ್ವರಪ್ಪ ರಾಜಕೀಯ ರಂಗದ ಅತ್ಯಂತ ಸಂಸ್ಕೃತಿಹೀನ ಮನುಷ್ಯ: ಸಿದ್ದರಾಮಯ್ಯ
ಹಾಸನ, ಮೇ 29: ಲಂಚ ಪಡೆದು ಮಂತ್ರಿಸ್ಥಾನ ಕಳೆದುಕೊಂಡಿರುವ ಈಶ್ವರಪ್ಪ ನನ್ನನ್ನು ಆಯೋಗ್ಯ ಅಂತಾನೆ, ಅವನೊಬ್ಬ ಸಂಸ್ಕೃತಿ ಹೀನ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಏಕವಚನದಲ್ಲೇ ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Recommended Video
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ, ಈಶ್ವರಪ್ಪ ನನ್ನ ಅಯೋಗ್ಯ ಅಂತಾನೆ, ಲಂಚ ಪಡೆದು ಸಚಿವ ಸ್ಥಾನ ಕಳೆದುಕೊಂಡಿದ್ದಾನೆ. ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ. ಅವನೊಬ್ಬ ಸಂಸ್ಕೃತಿಹೀನ ಮನುಷ್ಯ. ರಾಜಕಾರಣದಲ್ಲಿ ಮಾತನಾಡುವಾಗ ಸಂಸದೀಯ ಭಾಷೆ ಇರಬೇಕು, ಮಾತಿನಲ್ಲಿ ಸಭ್ಯತೆ ಇರಬೇಕು. ಇದು ಯಾವುದೂ ಇಲ್ಲದ ಈಶ್ವರಪ್ಪ ಪ್ರಾಣಿಗೆ ಸಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ, ಭಗವಾ ಧ್ವಜಕ್ಕೋ?- ಆರ್ಎಸ್ಎಸ್ ನಾಯಕರಿಗೆ ಸಿದ್ದರಾಮಯ್ಯ ಸವಾಲು
ಕಾಂಗ್ರೆಸ್ ಸಿದ್ದರಾಮಯ್ಯನವರಿಗೆ ಬೆಂಬಲಿಸಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ರಾಷ್ಟ್ರೀಯ ನಾಯಕರು ನನಗೆ ಹತ್ತಿರ ಇರೋದಿಂದಲೇ ನನ್ನನ್ನು ಮುಖ್ಯಮಂತ್ರಿ ಮಾಡಿದ್ದರು. ಜೋಶಿ ಅವರಿಗೆ ಇದೆಲ್ಲ ಎಲ್ಲಿ ಗೊತ್ತಾಗ್ಬೇಕು ಪಾಪ. ಒಬ್ಬ ವ್ಯಕ್ತಿ ಲೀಡರ್ ಆಗೋದು ಜನರಿಂದ, ಜೋಶಿ ಹೇಳಿದ್ರೆ ಯಾರೂ ಅಸಲಿ ಲೀಡರ್ ಅಥವಾ ನಕಲಿ ಲೀಡರ್ ಆಗಲ್ಲ. ಜನ ಯಾರನ್ನು ಲೀಡರ್ ಎಂದು ಒಪ್ಪಿಕೊಳ್ತಾರೆ ಅವರು ನಿಜವಾದ ಲೀಡರ್,'' ಎಂದು ತಿಳಿಸಿದರು.
ಸೋಮಶೇಖರ್ ಆರ್ಎಸ್ಎಸ್ ನಾಯಕನಲ್ಲ
ಎಸ್.ಟಿ ಸೋಮಶೇಖರ್ ತಮ್ಮ ವಿರುದ್ಧ ವಾಗ್ದಾಳಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಎಸ್ಟಿ ಸೋಮಶೇಖರ್ ಮೊನ್ನೆ ಮೊನ್ನೆವರೆಗೂ ಕಾಂಗ್ರೆಸ್ನಲ್ಲಿ ನಮ್ಮ ಜೊತೆಗಿದ್ದವರು. ಈಗ ಬಿಜೆಪಿ ಹೋಗಿ ಏನೇನೋ ಮಾತನಾಡುತ್ತಿದ್ದಾರೆ. ಹೊಸದಾಗಿ ಮಡಿವಾಳ ಕೆಲಸ ಮಾಡೋರು ಗೋಣಿಚೀಲವನ್ನೂ ಒಗಿತಾರಂತೆ, ಹೋಗ್ತಾ ಹೋಗ್ತಾ ಅದನ್ನು ಬಿಡ್ತಾರೆ. ಹಾಗೆ ಸೋಮಶೇಖರ್ ಕಥೆ. ಅವರು ಆರ್.ಎಸ್.ಎಸ್ ಅಲ್ಲ, ಏನೂ ಅಲ್ಲ. ಆರ್.ಎಸ್.ಎಸ್ ಹೊಗಳೋಕೆ ಶುರು ಮಾಡಿದ್ದಾರೆ. ಇದು ಎಷ್ಟು ದಿನವೋ ಗೊತ್ತಿಲ್ಲ. ಸೋಮಶೇಖರ್ ಒಬ್ಬ ಮೂಲ ಕಾಂಗ್ರೆಸಿಗ, ಮೂಲ ಆರ್.ಎಸ್.ಎಸ್ ನವರಲ್ಲ. ಮಂತ್ರಿ ಆಗೋಕೆ ಪಕ್ಷ ಬಿಟ್ಟು ಬಿಜೆಪಿ ಸೇರಿದ ಸೋಮಶೇಖರ್ ಯಾವ ರೀತಿ ಆರ್.ಎಸ್.ಎಸ್ ನಾಯಕ ಆಗ್ತಾರೆ? ಎಂದು ಪ್ರಶ್ನಿಸಿದರು.
ಬಿಜೆಪಿಗೆ ಕುರುಬರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅವರನ್ನು ಎಸ್.ಟಿ ಗೆ ಸೇರಿಸಲಿ: ಸಿದ್ದರಾಮಯ್ಯ
ಬೂಟಾಟಿಕೆ ಬಿಟ್ಟು ಕುರುಬರನ್ನು ಎಸ್ಟಿ ಸೇರಿಸಿ
ನಾನು ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸಮುದಾಯದವರು ತಮ್ಮನ್ನು ಎಸ್.ಟಿ ಗೆ ಸೇರಿಸುವಂತೆ ಅರ್ಜಿ ಕೊಟ್ಟಿದ್ದರು. ಎಸ್.ಟಿ ಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ಮಾಡಲು ಮೈಸೂರಿನ ಸಂಸ್ಥೆಗೆ ನೀಡಿದ್ದೆ, ಆ ವರದಿ ಇನ್ನು ಬಂದಿಲ್ಲ. ಈ ಮಧ್ಯೆ ಈಶ್ವರಪ್ಪ ಕುರುಬರನ್ನು ಎಸ್.ಟಿಗೆ ಸೇರಿಸಿ ಎಂದು ಪಾದಯಾತ್ರೆ ಮಾಡಿದ್ದರು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರ್ಕಾರ ಇದೆ. ಪಾದಯಾತ್ರೆಯ ಬೂಟಾಟಿಕೆ ಬಿಟ್ಟು ಕೂಡಲೇ ಸೇರಿಸಿ ಎಂದು ಹೇಳಿದೆ.
ಮಧು ಮಾದೇಗೌಡಗೆ ಬೆಂಬಲಿಸಿ
ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಮಧು ಮಾದೇಗೌಡ ಸ್ಪರ್ಧೆಗೆ ಇಳಿಸಿದ್ದೇವೆ. ಅವರ ಪರವಾಗಿ ಸಭೆ ಮಾಡಿದ್ದೇವೆ, ಹಾಸನ ಜಿಲ್ಲೆಯ ಪಕ್ಷದ ಎಲ್ಲಾ ಮಾಜಿ ಶಾಸಕರು, ಮಾಜಿ ಸಚಿವರು, ನಾಯಕರು, ಕಾರ್ಯಕರ್ತರ ಜೊತೆ ಸಭೆ ಮಾಡಿ ತಾವೆಲ್ಲಾ ನಮ್ಮ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ. ಕಾಂಗ್ರೆಸ್ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಮಧು ಮಾದೇಗೌಡ ತಂದೆ ಶಾಸಕರು, ಸಂಸದರು, ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಶಿಕ್ಷಣ ಪ್ರೇಮಿ, ರೈತ ಹೋರಾಟಗಾರರಾಗಿದ್ದು, ಕೊನೆಯುಸಿರಿರುವ ವರೆಗೆ ಹೋರಾಟ ಮಾಡಿದ್ದವರು, ಅಂತಹವರ ಮಗನನ್ನು ಗೆಲ್ಲಿಸಿದರೆ ಪದವೀದರರ ಸಮಸ್ಯೆ ಬಗೆಹರಿಯುತ್ತೆ ಎಂದರು.
ನಾನು ದ್ರಾವಿಡ, ದೇಶದ ಮೂಲ ನಿವಾಸಿ
''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಆರ್ಯನೋ ಅಥವಾ ದ್ರಾವಿಡನೋ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ದ್ರಾವಿಡ, ಈ ದೇಶದ ಮೂಲ ನಿವಾಸಿಗ. ಆರ್ಯರು ಸಾವಿರಾರು ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಬಂದವರು, ಎಂದು ನಾವೆಲ್ಲ ಚರಿತ್ರೆಯಲ್ಲಿ ಓದಿದ್ದೇವೆ. ಈಗ ಅವರೆಲ್ಲ ಇಲ್ಲಿ ನೆಲೆಸಿ ಭಾರತೀಯರಾಗಿದ್ದಾರೆ. ಅದಕ್ಕೆ ನನ್ನ ತಕರಾರು ಇಲ್ಲ. ಅವರಂತೆ ನೀವು ಭಾರತೀಯರಲ್ಲ, ದೇಶಬಿಟ್ಟು ಹೋಗಿ" ಎಂದು ನಾನು ಅವರಿಗೆ ಹೇಳುವುದಿಲ್ಲ ಎಂದು ತಿರುಗೇಟು ನೀಡಿದರು.