ಅಕ್ರಮ ಮತದಾನ ಮಾಡಿಸಿದ ಆರೋಪ: ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ
ಹಾಸನ, ಏಪ್ರಿಲ್ 25: ಸಚಿವ ರೇವಣ್ಣ ಅವರು ಲೋಕಸಭೆ ಚುನಾವಣೆ ವೇಳೆ ಅಕ್ರಮ ಮತದಾನ ಮಾಡಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಾಸನ ಚುನಾವಣಾ ಅಧಿಕಾರಿಗೆ ದೂರು ನೀಡಲಾಗಿದೆ.
ಏಪ್ರಿಲ್ 18ರಂದು ಪಡವಲಹಿಪ್ಪೆಯ ಮತಗಟ್ಟೆಯಲ್ಲಿ ರೇವಣ್ಣ ಅವರು ಕುಟುಂಬ ಸಮೇತರಾಗಿ ಬಂದು ಮತಚಲಾಯಿಸಿದರು, ಮತಚಲಾಯಿಸಿದ ಬಳಿಕ ಹೊರಗೆ ಬರದೇ ಅಲ್ಲೇ ಉಳಿದು ತಮ್ಮ ಬೆಂಬಲಿಗರನ್ನು ಒಳಗೆ ಕರೆದು ಅವರು ಮತಚಲಾಯಿಸುವಂತೆ ಸೂಚಿಸಿ, ತಾವೇ ನಿಂತು ಅವರು ಮತಚಲಾಯಿಸುವುದನ್ನು ಖಾತ್ರಿ ಮಾಡಿಕೊಂಡರು ಎಂದು ದೂರು ನೀಡಲಾಗಿದೆ.
ರೇವಣ್ಣ ಬೆಂಗಾವಲು ವಾಹನದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಭರ್ಜರಿ ತಿರುವು
ಪಡವಲಹಿಪ್ಪೆಯ ಮತಗಟ್ಟೆ ಏಜೆಂಟ್ ಆಗಿದ್ದ ರಾಜು ಎಂಬುವರು ಈ ಬಗ್ಗೆ ಹಾಸನದ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ದೂರು ನೀಡಿದ್ದಾರೆ.
ರವಿಕುಮಾರ್, ಪಿ.ಟಿ.ಪರಮೇಶ್ವರ್, ನಿಸಾರ್ ಅಹ್ಮದ್ ಅವರುಗಳು ಪಡವಲಹಿಪ್ಪೆಯ ಮತಗಟ್ಟೆಯ ಮತದಾರರು ಅಲ್ಲದಿದ್ದರೂ ಸಹ ರೇವಣ್ಣ ಅವರ ಕುಮ್ಮಕ್ಕಿನಿಂದ ಅವರು ಪಡವಲಹಿಪ್ಪೆಯಲ್ಲಿಯೇ ಮತಚಲಾಯಿಸಿದ್ದಾರೆ ಎಂದು ರಾಜು ದೂರಿನಲ್ಲಿ ಹೇಳಿದ್ದಾರೆ.
ರೇವಣ್ಣ, ಪುಟ್ಟರಾಜುಗೆ ಐಟಿ ಶಾಕ್: ಆಪ್ತರ ಮನೆ ಮೇಲೆ ದಾಳಿ
ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಮತಗಟ್ಟೆ ಅಧಿಕಾರಿಯು ಏನೆಂದೂ ಕೇಳದೆ ಮೂಕರಾಗಿ ಉಳಿದಿದ್ದರು. ಇದೆಲ್ಲಾ ಮತಗಟ್ಟೆಯ ವಿಡಿಯೋ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಅದನ್ನು ವೀಕ್ಷಿಸಿ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜು ದೂರು ನೀಡಿದ್ದಾರೆ.