ಮನೆಮುಂದೆ ಬಂದು ಕಿಟಕಿ ಗಾಜು ಒಡೆದುಹಾಕಿದ ಆನೆ: ಗ್ರಾಮಸ್ಥರು ಹೈರಾಣ
ಹಾಸನ, ಜೂ. 27: ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ಗೋಳು ಹೇಳತೀರದಂತಾಗಿದ್ದು, ದಿನನಿತ್ಯ ಜೀವವನ್ನು ಹಿಡಿದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾವಳಿಯಿಂದ ಮಲೆನಾಡಿನ ಜನರು ಬಳಲಿ ಬೆಂಡಾಗಿದ್ದಾರೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಮನೆಯ ಮುಂದೆ ಸುತ್ತಾಡಿದ ಆನೆ, ಕಿಟಕಿ ಗಾಜುಗಳನ್ನು ಒಡೆದು ಹಾಕಿದೆ. ಆನೆಯಿಂದ ಬೆದರಿದ ಮನೆಯ ಸದಸ್ಯರು ಹೊರಗೆ ಬರದೇ ಭಯದಲಲ್ಲೇ ಅಡಗಿಕುಳಿದ್ದರು. ಶೇಖರ್ ಎಂಬುವವರ ಮನೆ ಸುತ್ತ ಓಡಾಡಿದ ಆನೆ ಕಿಟಕಿ ಗಾಜು ಹಾಗೂ ಪಾಟ್ ಗಳನ್ನು ಒಡೆದುಹಾಕಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಅಧಿಕಾರಿಗಳು ಗ್ರಾಮಕ್ಕೆ ಬಂದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕಾಡಾನೆಗಳು ಗ್ರಾಮದ ಸುತ್ತಮುತ್ತ ಇರುವುದರಿಂದ ಮೈಕ್ ನಲ್ಲಿ ಅನೌನ್ಸ್ ಮಾಡಿದ ಅಧಿಕಾರಿಗಳು ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚಿಸಿದ್ದಾರೆ. ಸದ್ಯ ಕಾಡಾನೆಗಳು ಎಲ್ಲಿ ಅಡಗಿವೆ ಎಂಬ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದು, ಆನೆಗಳು ಇರುವುದು ಖಚಿತಪಡಿಸಿ, ಕಾಡುಗಳಿಗೆ ಹಿಮ್ಮೆಟ್ಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆ ಮನೆ ಬಾಗಿಲಲ್ಲಿ ನಿಂತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ ಹೈದೂರು ಗ್ರಾಮದಲ್ಲಿ ಹರೀಶ್ ಎಂಬುವವರ ಮನೆಯ ಬಾಗಿಲಿಗೆ ಬಂದು ಆತಂಕ ಸೃಷ್ಟಿಸಿದ ಕಾಡಾನೆ. ಇದ್ದರಿಂದ ಗ್ರಾಮದ ಹರೀಶ್ ಎಂಬುವವರ ಮನೆ ಬಾಗಿಲಿಗೆ ಬಂದು ಹೂವಿನ ಗಿಡ ತಿಂದಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಕಲೇಶಪುರ, ಆಲೂರು ತಾಲೂಕಿನಲ್ಲಿ ಕಾಡಾನೆಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಪಾರ ಪ್ರಮಾಣದ ನಾಶವಾಗುತ್ತಿದೆ. ದಶಕಗಳಿಂದ ಕಾಡಾನೆ ಸಮಸ್ಯೆ ಎದುರಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಮೀತಿ ಮೀರಿದೆ. ರೈತರು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡನ್ನು ಸ್ಥಳಾಂತರಿಸುವಂತೆ ಎಷ್ಟು ಪ್ರತಿಭಟನೆ ನಡೆಸಿದರೂ ಫಲಕಾರಿಯಾಗಿಲ್ಲ. ಪ್ರತಿನಿತ್ಯ ಜೀವದ ಹಂಗು ತೊರೆದು ಕಾಡಾನೆಗಳ ಚಲನವಲನಗಳ ಬಗ್ಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಇತ್ತೀಚಿಗೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲು ಹೊತ್ತಿನಲ್ಲೂ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಇಲ್ಲಿನ ಜನರು ಭಯದಿಂದಲೇ ಕಾಲ ಕಳೆಯುತ್ತಿದ್ದಾರೆ.
ಇತ್ತ ಗಮನಹರಿಸದ ಅಧಿಕಾರಗಳ ನಡೆಗೆ ಗ್ರಾಮಸ್ಥರ ಆಕ್ರೋಶ
ಅರಣ್ಯ ಸಚಿವ ಉಮೇಶ್ ಕತ್ತಿ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾಡಾನೆಗಳ ಬಗ್ಗೆ ಸಾಕಷ್ಟು ದೂರುಗಳು ಇದ್ದರೂ ಒಮ್ಮೆಯು ಇತ್ತ ತಲೆ ಹಾಕದ ಅರಣ್ಯ ಸಚಿವ ಉಮೇಶ್ ಕತ್ತಿ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಮಲೆನಾಡು ಭಾಗದ ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಕಾಡಾನೆಗಳಿಂದ ಭಯದಲ್ಲೇ ಮಲೆನಾಡಿನ ಜನರು ಬದುಕುತ್ತಿದ್ದಾರೆ. ಸಂಬಂಧಪಟ್ಟ ಸಚಿವರುಗಳು ಇತ್ತ ಗಮನವನನ್ನು ಹರಿಸುತ್ತಿಲ್ಲ. ಪದೇ ಪದೇ ಸಚಿವರುಗಳ ಈ ಭಾಗದ ಜನರ ಕಷ್ಟ ಕೂಡ ಅವರಿಗೆ ಅರ್ಥವಾಗುತ್ತಿಲ್ಲ. ನಾವು ಎಲ್ಲಾ ಹೋರಾಟವನ್ನೂ ಮಾಡಿದ್ದೇವೆ. ನಮ್ಮ ಬದುಕು ದುಸ್ತರವಾಗಿದೆ. ಮಕ್ಕಳನ್ನು ಶಾಲೆ- ಕಾಲೇಜಿಗೂ ಕಳಿಸಲೂ ಆಗುತ್ತಿಲ್ಲ ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳೆ ಹಾನಿ: ಸ್ಥಳೀಯರ ಆಕ್ರೋಶ
ಒಮ್ಮೊಮ್ಮೆಗೆ ಗುಂಪಾಗಿ ಕಾಣಿಸುವ ಆನೆಗಳು, ಕೆಲವು ಭಾರಿ ಒಂಟಿಯಾಗಿ ಪ್ರತ್ಯಕ್ಷವಾಗುತ್ತಿವೆ. ಹಾಗಾಗಿ ಆನೆಗಳ ಸಂಖ್ಯೆಯ ಕುರಿತು ಸ್ಪಷ್ಟತೆ ಇಲ್ಲವಾಗಿದೆ. ಪದೇ ಪದೆ ಕಾಡಾನೆಗಳು ಪ್ರತ್ಯಕ್ಷವಾಗುತ್ತಿರುವುದು, ಬೆಳೆ ಹಾನಿ ಉಂಟು ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯವರು ಆನೆಗಳ ಉಪಟಳ ತಪ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಈಚೆಗೆ ಆನೆಗಳ ಉಪಟಳ ಹೆಚ್ಚಾಗಿದೆ. ಆರಂಭದಲ್ಲಿ ಊರಿನ ಒಂದು ಭಾಗದಲ್ಲಿ ಮಾತ್ರ ಆನೆಗಳು ಕಾಣಿಸಿಕೊಂಡಿದ್ದವು. ಈಗ ಊರಿನ ಹಲವು ಕಡೆಗಳಲ್ಲಿ ಕಾಡಾನೆಗಳು ಓಡಾಡುತ್ತಿವೆ. ಹಾಗಾಗಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುವಂತಾಗಿದೆ.
ಮುಖ್ಯರಸ್ತೆಯಲ್ಲಿ ಓಡಾಡುವುದೂ ಕಷ್ಟ
ಕಾಡಾನೆಗಳು ಮನೆಗಳಿಗೆ ಹಾವಳಿ ಇಡುವುದರ ಜೊತೆಗೆ ಹೊಲ, ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿದ್ದ ಆನೆಗಳು ಈಗ ಊರಿನ ಮುಖ್ಯ ರಸ್ತೆಯಲ್ಲಿ ಓಡಾಡಲು ಆರಂಭವಿಸಿವೆ. ಇದರಿಂದ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ. ಮೂರ್ನಾಲ್ಕು ದಿನದ ಹಿಂದೆ ಕಾಡಾನೆಯೊಂದು ಉಂಬ್ಳೆಬೈಲು ಮುಖ್ಯ ರಸ್ತೆಯಲ್ಲಿ ಸಂಚರಿಸಿದೆ. ಬೆಳಗಿನ ಹೊತ್ತಿನಲ್ಲೆ ಆನೆಯೊಂದು ಈ ರೀತಿ ಓಡಾಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.