ಹಾಸನ : ಬಿಜೆಪಿ ಶಾಸಕರ ದೂರು, ಎಸ್ಪಿ ಎತ್ತಂಗಡಿ ಮಾಡಿದ ಆಯೋಗ
ಹಾಸನ, ಏಪ್ರಿಲ್ 04: ಹಾಸನದ ಎಸ್ಪಿ ಡಾ. ಎ. ಎ ಪ್ರಕಾಶ್ ಗೌಡ ಅವರನ್ನು ಗುರುವಾರದಂದು ಚುನಾವಣಾ ಆಯೋಗವು ಎತ್ತಂಗಡಿ ಮಾಡಿದೆ. ಹಾಸನದ ಸೂಪರಿಂಟೆಂಡ್ ಆಫ್ ಪೊಲೀಸ್ ಆಗಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿದ್ದ ಚೇತನ್ ಸಿಂಗ್ ಅವರನ್ನು ತಕ್ಷಣವೇ ಹಾಸನದ ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಆಯೋಗವು ಸೂಚಿಸಿದೆ.
ಹಾಸನ ಜಿಲ್ಲಾಧಿಕಾರಿ ಧಿಡೀರ್ ವರ್ಗಾವಣೆ: ರಾಜಕೀಯ ಲೆಕ್ಕಾಚಾರ ಏನು?
ಜೆಡಿಎಸ್ ಪಕ್ಷದ ಪರವಾಗಿ ಎಸ್ಪಿ ಪ್ರಕಾಶ್ ಗೌಡ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು. ಈ ದೂರಿನ ಮೇರೆಗೆ ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿಯೂ ಇದೆ.
ಮೈಸೂರಿನ ಎಸಿಪಿಯಾಗಿದ್ದ ಡಾ. ಎಎನ್ ಪ್ರಕಾಶ್ ಗೌಡ ಅವರು ಕಳೆದ ಏಳು ತಿಂಗಳ ಹಿಂದೆ ಹಾಸನದ ಎಸ್ಪಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಕಳೆದ ವಾರದ ಹಾಸನದ ಜಿಲ್ಲಾಧಿಕಾರಿ ಅಕ್ರಂ ಪಾಶಾ ಅವರನ್ನು ಬದಲಾಯಿಸಿ, ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ರನ್ನು ನೇಮಿಸಲಾಗಿತ್ತು.
'ಎಎನ್ ಪ್ರಕಾಶ್ ಗೌಡ ಹಾಗೂ ಮಂಡ್ಯ ಚುನಾವಣಾ ಪರಿವೀಕ್ಷಕರಾಗಿದ್ದ ರಂಜಿತ್ ಕುಮಾರ್ ಅವರನ್ನು ಬದಲಾಯಿಸಲಾಗಿದೆ' ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಿದ ಹಾಸನ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್!
ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಶಾಸಕ ಎಸ್ ಸುರೇಶ್ ಕುಮಾರ್ ಅವರು ಮಾರ್ಚ್ 28ರಂದು 13 ಅಧಿಕಾರಿಗಳ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಿ, ಚುನಾವಣಾ ಅಕ್ರಮ ತಡೆಗಟ್ಟುವಲ್ಲಿ ಈ ಅಧಿಕಾರಿಗಳು ವಿಫಲರಾಗಿದ್ದಾರೆ. ಆಡಳಿತ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುತ್ತಿದಾರೆ ಎಂದು ದೂರಿದ್ದರು.
ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಹಾಗೂ ಹಾಸನದಲ್ಲಿ ಸಚಿವ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಕಣದಲ್ಲಿದ್ದಾರೆ. ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಹಾಸನ ಹಾಗೂ ಮಂಡ್ಯದಲ್ಲಿ ಏಪ್ರಿಲ್ 18ರಂದು ಮತದಾನ ನಿಗದಿಯಾಗಿದೆ. ಮೇ 23ರಂದು ಫಲಿತಾಂಶ ಹೊರ ಬರಲಿದೆ.