ಅರಸೀಕೆರೆ ಕ್ಷೇತ್ರದ ಗೊಂದಲ ನಿವಾರಣೆ, ಮರಿಸ್ವಾಮಿಗೆ ಟಿಕೆಟ್
ಹಾಸನ, ಏಪ್ರಿಲ್ 22: ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗೊಂದಲ ಬಹುತೇಕ ನಿವಾರಣೆಯಾಗಿದೆ. ಮಾಜಿ ಸಚಿವ ವಿ ಸೋಮಣ್ಣ ಅವರ ಪುತ್ರ ಅರುಣ ಅವರು ಟಿಕೆಟ್ ನಿರಾಕರಣೆ ಮಾಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪರಮಾಪ್ತ ಮರಿಸ್ವಾಮಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಈ ಹಿಂದೆ ಎರಡನೇ ಪಟ್ಟಿಯಲ್ಲಿ ಅರಸೀಕೆರೆಯಿಂದ ಮಾಜಿ ಸಚಿವ ವಿ.ಸೋಮಣ್ಣನವರ ಪುತ್ರ ಡಾ.ಅರುಣ್ ಸೋಮಣ್ಣನವರಿಗೆ ಟಿಕೆಟ್ ನೀಡಲಾಗಿತ್ತು.
ಆದರೆ, ಕೊನೆ ಕ್ಷಣದಲ್ಲಿ ತಮಗೆ ಟಿಕೆಟ್ ನೀಡಿರುವುದು, ತಮ್ಮ ತಂದೆಯವರು ಕೇಳಿದ ಕ್ಷೇತ್ರದಲ್ಲಿ ಟಿಕೆಟ್ ನೀಡದ ಕಾರಣ, ಮುನಿಸಿಕೊಂಡಿರುವ ಅರುಣ್ ಸೋಮಣ್ಣ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು, ಗೊಂದಲಕ್ಕೆ ಕಾರಣವಾಗಿತ್ತು.
ಟಿಕೆಟ್ ಘೋಷಣೆಯಾಗಿ ನಾಲ್ಕು ದಿನವಾದರೂ ಅವರು ಬಿ ಫಾರಂ ಪಡೆದಿರಲಿಲ್ಲ. ಸಮಯ ಬರಲಿ ತೆಗೆದುಕೊಳ್ಳುತ್ತೇನೆ ಎಂದು ಸಬೂಬು ಹೇಳಿದ್ದರು. ಮಂಗಳವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಮರಿಸ್ವಾಮಿಗೆ ಟಿಕೆಟ್ ನೀಡಿ ನಾಮಪತ್ರ ಸಲ್ಲಿಸಲು ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
ಈಗಾಗಲೇ ಯಡಿಯೂರಪ್ಪ ಮರಿಸ್ವಾಮಿ ಜೊತೆ ಮಾತುಕತೆ ನಡೆಸಿದ್ದು, ಮರಿಸ್ವಾಮಿ ಸ್ಪರ್ಧೆಗೆ ಒಲವು ತೋರಿದ್ದಾರೆ. ನಾಳೆ ಯಡಿಯೂರಪ್ಪ ಅವರಿಗೆ ಬಿ ಫಾರಂ ನೀಡಲಿದ್ದು, ನಂತರ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಕೊನೆಯ ಕ್ಷಣದವರೆಗೂ ಅರುಣ್ ಸೋಮಣ್ಣಗೆ ಟಿಕೆಟ್ ನೀಡುವ ಪ್ರಯತ್ನವನ್ನು ಪಕ್ಷದ ವರಿಷ್ಠರು ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.