Breaking: ಹಾಸನ ಜಿಲ್ಲೆಯ ಹಲವಡೆ ಕಂಪಿಸಿದ ಭೂಮಿ, ಭೀತಿಯಲ್ಲಿ ಮನೆ ಹೊರಬಂದ ಜನರು
ಹಾಸನ, ಜೂನ್ 23: ಗುರುವಾರ ಹಾಸನ ಜಿಲ್ಲೆಯಲ್ಲಿ ಹಲವೆಡೆ ಲಘುವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹನೆಮರನಹಳ್ಳಿ, ಕಾರಹಳ್ಳಿ ಸೇರಿ ಕೆಲವು ಗ್ರಾಮಗಳಲ್ಲಿ ಹಾಗೂ ಹಾಸನದ ಶಾಂತಿನಗತ, ಹೇಮಾವತಿ ನಗರ, ತಮ್ಲಾಪುರ ಭಾಗಗಳಲ್ಲೂ ಲಘು ಭೂಕಂಪನವಾಗಿದ್ದು ಮಲಗಿದ್ದ ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಗುರುವಾರ ಬೆಳಗಿನ ಜಾವ 4 :38ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸುವ ಮೊದಲು ದೊಡ್ಡದಾದ ಶಬ್ಧ ಕೇಳಿಸಿತು, ಕೆಲವು ಮನೆಗಳಲ್ಲಿ ವಸ್ತುಗಳ ಚೆಲ್ಲಾಪಿಲ್ಲಿಯಾಗಿರುವ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ.
ಅಫ್ಘಾನಿಸ್ತಾನ ಭೂಕಂಪ: ಸಾವಿರ ದಾಟಿದ ಸಾವಿನ ಸಂಖ್ಯೆ
ಅರಕಲಗೂಡು ತಾಲ್ಲೂಕಿನಲ್ಲಿ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ, ಕಾರಳ್ಳಿ ಗ್ರಾಮಗಳಲ್ಲಿ ಹಾಗೂ ಹೊಳೆನರಸೀಪುರ ತಾಲ್ಲೂಕಿನ ಪಟ್ಟಣದ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂಮಿ ಕಂಪಿಸಿ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಬುಧವಾರ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ ಸಂಭವಿಸದ ಬೆನ್ನಲ್ಲೇ ಹಾಸನ ಜಿಲ್ಲೆಯಲ್ಲಿ ಲಘುವಾಗಿ ಭೂಮಿ ಕಂಪಿಸಿದ್ದರಿಂದ ಜಿಲ್ಲೆಯ ನಿವಾಸಿಗಳು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿರುವ ಭೂಕಂಪದಲ್ಲಿ 1000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಮತ್ತು 600 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಶಕದಲ್ಲೇ ಅಫ್ಘಾನಿಸ್ತಾನ ದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಎನಿಸಿದೆ. ಸಾವಿನ ಸಂಖ್ಯೆ ದೃಷ್ಟಿಯಲ್ಲಿ ಭೂಕಂಪ ಹೆಚ್ಚು ಘೋರವಾಗಿದೆ.