ವಲಸಿಗರಿಗೆ ಅರಕಲಗೂಡು ಬಿಜೆಪಿ ಮುಚ್ಚಿದ ಬಾಗಿಲು: ಯೋಗ ರಮೇಶ್
ಹಾಸನ, ಡಿಸೆಂಬರ್ 26: ಮುಂಬರುವ ಚುನಾವಣೆಯಲ್ಲಿ ಹಾಸನದ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಭಾರಿ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡು ಬಂದಿದೆ. ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳ ಪ್ರಾಬಲ್ಯ ಮುರಿಯಲು ಕಾಂಗ್ರೆಸ್ ಯತ್ನಿಸುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸಮರದ ಲಾಭವನ್ನು ಬಿಜೆಪಿ ಪಡೆಯಲು ಯತ್ನಿಸುತ್ತಿದೆ. ಆದರೆ, ಯುದ್ಧಕ್ಕೆ ಮುಂಚಿತವಾಗಿಯೇ ಬಿಜೆಪಿ ಮುಗ್ಗರಿಸುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.
ಇದಕ್ಕೆ ಕಾರಣ ಜಿಲ್ಲಾಧ್ಯಕ್ಷ ಯೋಗ ರಮೇಶ್ ಇತ್ತೀಚಿಗೆ ನೀಡಿದ ಹೇಳಿಕೆ: 'ವಲಸಿಗರಿಗೆ ಅರಕಲಗೂಡು ಬಿಜೆಪಿ ಮುಚ್ಚಿದ ಬಾಗಿಲು 'ಎಂದು ರಮೇಶ್ ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಅಘೋಷಿತ ಮೈತ್ರಿ ಸಾಧ್ಯತೆ ಸಾಧ್ಯವಿಲ್ಲ ಎನ್ನಬಹುದು.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಶುಸಂಗೋಪನಾ ಸಚಿವ ಅರಕಲಗೂಡು ಮಂಜು ಅವರು ಈ ಬಾರಿ ಕೂಡಾ ಜಯಭೇರಿ ಬಾರಿಸುವ ಉತ್ಸಾಹದಲ್ಲಿದ್ದಾರೆ. ಆದರೆ, ಅವರ ಉತ್ಸಾಹಕ್ಕೆ ಭಂಗ ತರಲು ಬಿಜೆಪಿ ನಡೆಸಿರುವ ಯತ್ನಗಳು ವಿಫಲವಾಗುತ್ತಾ ಬಂದಿವೆ. ಈಗಲೇ ಎಚ್ಚೆತ್ತುಕೊಳ್ಳಲಿದ್ದರೆ, ಅಪಾಯ ಕಟ್ಟಿಟ್ಟಬುತ್ತಿ ಎಂಬ ಮಾತು ಕಾರ್ಯಕರ್ತರಿಂದ ಕಾರ್ಯಕರ್ತರಿಗೆ ಹರಡುತ್ತಿದೆ.
ಕ್ಷೇತ್ರವಾರು ತಂತ್ರಗಾರಿಕೆ ರೂಪಿಸುವಲ್ಲಿ ವಿಳಂಬ
ಕ್ಷೇತ್ರವಾರು ತಂತ್ರಗಾರಿಕೆ ರೂಪಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ನವ ಕರ್ನಾಟಕ ಪರಿವರ್ತನಾ ಮೆರವಣಿಗೆ ನೆಚ್ಚಿಕೊಂಡಿರುವ ಬಿಜೆಪಿಗೆ ಒಳಜಗಳ ಒಳಸುಳಿವು ಅರ್ಥವಾಗದಿರುವುದು ಅಚ್ಚರಿಯೆ ಸರಿ. ಸದ್ಯಕ್ಕೆ ಅರಕಲಗೂಡು ಕ್ಷೇತ್ರದಲ್ಲಿ ಬಿಜೆಪಿಯ ಬೆಳವಣಿಗೆಗಳತ್ತ ವಾರೆನೋಟ ಇಲ್ಲಿದೆ...ಹಾಲಿ ಸಚಿವ ಅರಕಲಗೂಡು ಮಂಜು, ಭೂಗಳ್ಳರ ವಿರುದ್ಧ ಹೋರಾಟ ನಡೆಸಿರುವ ಮಾಜಿ ಶಾಸಕ ಎ.ಟಿ ರಾಮಸ್ವಾಮಿ, ತ್ವರಿತಗತಿಯಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್ ನಡುವಿನ ಕದನ ಕುತೂಹಲ ಇಲ್ಲಿದೆ.
ಕಳೆದ ಬಾರಿಯ ಫಲಿತಾಂಶ
ಕಳೆದ ಬಾರಿ ಎ. ಟಿ ರಾಮಸ್ವಾಮಿ ಅವರು ದೇವೇಗೌಡರ ಕುಟುಂಬದ ವಿರುದ್ಧ ಭಾರಿ ವಿರೋಧ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಕಳೆದ ಬಾರಿ ಎ. ಮಂಜು(61369) ಅವರು ಜೆಡಿಎಸ್ ನ ಎ.ಟಿ ರಾಮಸ್ವಾಮಿ (48802) ಅವರನ್ನು 8 ಸಾವಿರ ಅಂತರದಿಂದ ಸೋಲಿಸಿದ್ದರು.
ಆದರೆ, ಬಿಜೆಪಿ ಈ ಬಾರಿ ಹೇಗಾದರೂ ಅರಕಲಗೂಡು ಕ್ಷೇತ್ರ ಪಡೆಯಬೇಕು ಎಂಬ ನಿಟ್ಟಿನಲ್ಲಿ ತನ್ನ ಕಾರ್ಯತಂತ್ರ ರೂಪಿಸುತ್ತಿದೆ.
ಗಾಳಿಸುದ್ದಿಗೆ ರಮೇಶ್ ಗುದ್ದು
ಮಾಜಿ ಶಾಸಕ ಎಟಿ ರಾಮಸ್ವಾಮಿ ಹಾಗೂ ವಿಶ್ರಾಂತ ಜಿಲ್ಲಾಧಿಕಾರಿ, ಹೆಮ್ಮೆಯ ಐಎಎಸ್ ಅಧಿಕಾರಿ ರಾಮೇಗೌಡ ಅವರನ್ನು ಬಿಜೆಪಿಗೆ ಕರೆತರುವ ಸುದ್ದಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಅಲ್ಲಗೆಳೆದಿದ್ದಾರೆ. ಚಿತ್ರದಲ್ಲಿ :ಐಎಎಸ್ ಅಧಿಕಾರಿ ರಾಮೇಗೌಡ.
ಪಕ್ಷದಲ್ಲಿ ಕೆಲವು ಕಿಡಿಗೇಡಿಗಳಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಸುದ್ದಿಗಳನ್ನು ಆಗಾಗ ಹಬ್ಬಿಸುತ್ತಿರುತ್ತಾರೆ. ಇದೆಲ್ಲ ಕೇವಲ ವದಂತಿ ಎಂದು ರಮೇಶ್ ಹೇಳಿದ್ದಾರೆ.
ಜನಮನ್ನಣೆ ಗಳಿಸಿರುವ ಯೋಗ ರಮೇಶ್
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 32 ಸಾವಿರ ಮತ ಪಡೆದಿದ್ದ ಯೋಗಾ ರಮೇಶ್ ಅವರು 2014ರಲ್ಲಿ ಬಿಜೆಪಿ ಸೇರಿದರು. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡಿ, ಜನಮನ್ನಣೆ ಗಳಿಸಿ 2016ರಲ್ಲಿ ಜಿಲ್ಲಾಧ್ಯಕ್ಷರಾದರು. ಲಕ್ಷಾಂತರ ಮಂದಿ ಸದಸ್ಯರನ್ನು ಬಿಜೆಪಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆತ್ಮವಿಶ್ವಾಸದಿಂದಲೇ ಎ. ಮಂಜು ವಿರುದ್ಧ ಬಿಜೆಪಿ ಏಕಾಂಗಿ ಸ್ಪರ್ಧೆ ಸಾಕು ಎನ್ನುತ್ತಿದ್ದಾರೆ.
ರೈತ ಸಂಘದ ಬೆಂಬಲದ ನಿರೀಕ್ಷೆ
ರೈತ ಸಂಘದ ಮುಖಂಡ ಹೊ. ತಿ. ಹುಚ್ಚಪ್ಪ ಅವರ ಮಗ ಯೋಗ ರಮೇಶ್ ಅವರು 21 ವರ್ಷಗಳ ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದು, 2012ರ ನಂತರ ರಾಜಕೀಯದಲ್ಲಿ ಸಕ್ರಿಯರಾದವರು. 2008ರಲ್ಲಿ ಆರಂಭಿಸಿದ ಆಲೂಗೆಡ್ಡೆ ಕ್ಲಬ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಈಗ ಬಿಜೆಪಿಯನ್ನು ಏಕಾಂಗಿಯಾಗಿ ಜಯದ ಹಾದಿಗೆ ಕರೆದೊಯ್ಯುವ ಹುಮ್ಮಸ್ಸಿನಲ್ಲಿದ್ದಾರೆ.