ಚಿತ್ರಗಳು : ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲಿಸಿದ ಡಿಕೆಶಿ
Recommended Video
ಹಾಸನ, ಜುಲೈ 09 : 'ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಸತತವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸಚಿವ ಡಿ.ಕೆ.ಶಿವಕುಮಾರ್ ಭಾನುವಾರ ಸಕಲೇಶಪುರಕ್ಕೆ ಭೇಟಿ ನೀಡಿದ್ದರು. ಎತ್ತಿನಹೊಳೆ ಯೋಜನೆಯ ವಿವಿಧ ಕಾಮಗಾರಿಗಳು ನಡೆಯುತ್ತಿರುವ ಸ್ಥಳವನ್ನು ಪರಿಶೀಲಿಸಿದರು. 'ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಯಾವುದೇ ಸಮಸ್ಯೆ ಎದುರಾದರೂ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ' ಎಂದರು.
ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ
'ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 29 ತಾಲೂಕಿನ ಸುಮಾರು 68 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದೆ' ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆಗೆ ಸರ್ಕಾರದ ಹಸಿರು ನಿಶಾನೆ
24.01 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವ ಯೋಜನೆ ಇದಾಗಿದೆ. 2014ರ ಫೆ.17ರಂದು ಎತ್ತಿನಹೊಳೆ ಯೋಜನೆಗೆ ಕರ್ನಾಟಕ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕರಾವಳಿ ಭಾಗದ ಜನರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಜವಾಬ್ದಾರಿ
ಯೋಜನೆಯ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು 'ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ. ಆ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ' ಎಂದು ಭರವಸೆ ನೀಡಿದರು.
'ಅಧಿಕಾರಿಗಳ ಪುಸ್ತಕ ಹಿಡಿದುಕೊಂಡು ಏನು ಹೇಳಿದರೂ ನನಗೆ ಕಣ್ಣಾರೆ ನೋಡಿದಾಗ ಮಾತ್ರ ಸಮಾಧಾ. ಆದ್ದರಿಂದ, ಸ್ಥಳಕ್ಕೆ ಬಂದೆ. ಭೂ ಸ್ವಾಧೀನ ಸೇರಿದಂತೆ ಏನೆಲ್ಲಾ ಸಮಸ್ಯೆಗಳು ಇವೆ. ಏನೆಲ್ಲಾ ಸಹಾಯ ಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸುವೆ' ಎಂದರು.
ಜನರು ಯೋಜನೆಗಾಗಿ ಕಾದು ಕುಳಿತಿದ್ದಾರೆ
'ಈ ಯೋಜನೆಗಾಗಿ ರಾಜ್ಯದ ಜನರು ಕಾದು ಕುಳಿತಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜನರಿಗೆ ಯೋಜನೆಯಿಂದ ಕುಡಿಯುವ ನೀರು ಸಿಗಲಿದೆ' ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
'ಎತ್ತಿನಹೊಳೆ ಯೋಜನೆ ಭಾಗದಲ್ಲಿ ಆರು ತಿಂಗಳು ಮಳೆಯಾಗುತ್ತದೆ. ಆ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಕಷ್ಟವಾಗುತ್ತದೆ. ಏನೇ ಸವಾಲುಗಳು ಬಂದರೂ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ' ಎಂದು ಸಚಿವರು ತಿಳಿಸಿದರು.
ಎತ್ತಿನ ಹೊಳೆ ಯೋಜನೆ
ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಎತ್ತಿನಹೊಳೆ 1ನೇ ಹಂತದ ಯೋಜನೆಗೆ 12912.36 ಕೋಟಿ ಪರಿಷ್ಕೃತ ಯೋಜನಾ ವರದಿಗೆ ಕರ್ನಾಟಕ ಸರ್ಕಾರ 2014ರ ಫೆ.14ರಂದು ಒಪ್ಪಿಗೆ ನೀಡಿದೆ.
ಯೋಜನೆಯಿಂದ 7 ಜಿಲ್ಲೆಯ 29 ತಾಲೂಕಿನ 6,557 ಗ್ರಾಮಗಳ 68.35 ಲಕ್ಷ ಜನರಿಗೆ ಪ್ರಯೋಜನ ಸಿಗಲಿದೆ. ಒಟ್ಟು 24.01 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ.
ವಾರ್ಷಿಕ 24 ಟಿಎಂಸಿ ನೀರು
ಪ್ರತಿ ವರ್ಷ ಜೂನ್ 15 ರಿಂದ ಅಕ್ಟೋಬರ್ 31ರ ತನಕ 135 ದಿನಗಳು ಮಾತ್ರ ಈ ಯೋಜನೆಯಿಂದ ನೀರು ಎತ್ತಲಾಗುತ್ತದೆ. 7 ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ 15.03 ಟಿಎಂಸಿ ನೀರಿನ ಅಗತ್ಯವಿದೆ. 527 ಕೆರೆಗಳನ್ನು ತುಂಬಿಸಲು 8.98 ಅಡಿ ಟಿಎಂಸಿ ಸೇರಿದಂತೆ 24.01 ಟಿಎಂಸಿ ನೀರು ಬೇಕಾಗುತ್ತದೆ.
ಯೋಜನೆ ಸಂಪೂರ್ಣಗೊಂಡ ಬಳಿಕ ಹಾಸನ ಜಿಲ್ಲೆಯ 34 ಕೆರೆ, ತುಮಕೂರಿನ 138 ಕೆರೆ, ಚಿಕ್ಕಬಳ್ಳಾಪುರದ 196 ಕೆರೆ, ಬೆಂಗಳೂರು ಗ್ರಾಮಾಂತರದ 46 ಕೆರೆಯನ್ನು ತುಂಬಿಸಲಾಗುತ್ತದೆ.
ಕರಾವಳಿ ಜನರ ವಿರೋಧ
ಎತ್ತಿನಹೊಳೆ ಯೋಜನೆಗೆ ಕರಾವಳಿ ಭಾಗದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೇತ್ರಾವತಿ ನದಿಯನ್ನು ತಿರುಗಿಸಲಾಗುತ್ತದೆ ಎಂಬುದು ವಿರೋಧಕ್ಕೆ ಕಾರಣವಾಗಿದೆ. ಸರ್ಕಾರ ಈ ಕುರಿತು ಹಲವು ಬಾರಿ ಸ್ಪಷ್ಟನೆಯನ್ನು ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಂದೆಯೂ ಯೋಜನೆಗೆ ಅವಕಾಶ ನೀಡಬಾರದು ಎಂದು ಅರ್ಜಿ ಹಾಕಲಾಗಿತ್ತು.
ತೀವ್ರ ಪ್ರತಿಭಟನೆ, ಬಂದ್, ಧಿಕ್ಕಾರ, ಬಂಧನ ಮುಂತಾದ ಗದ್ದಲದ ನಡುವೆಯೇ 2014ರ ಮಾರ್ಚ್ 3ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಮೊದಲ ಹಂತದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.