'ಕಲ್ಪಾಮೃತ' ತೆಂಗು ಉತ್ಪನ್ನ ಮಾರಾಟ ವ್ಯವಸ್ಥೆಗೆ ಹೊಸ ಹೆಜ್ಜೆ
ಹಾಸನ, ಆಗಸ್ಟ್ 30 : ಮಹಾಮಸ್ತಕಾಭಿಷೇಕದಲ್ಲಿ ತೆಂಗಿನ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಎಳನೀರು ಮತ್ತು ತೆಂಗಿನ ಉತ್ಪನ್ನಗಳ ವ್ಯಾಪಾರಿ ಮಳಿಗೆಗಳಿಗೆ ವಿನ್ಯಾಸವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಇದಕ್ಕೆ 'ಕಲ್ಪಾಮೃತ' ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಶ್ರವಣಬೆಳಗೊಳ : ಮಸ್ತಕಾಭಿಷೇಕದಲ್ಲಿ ಪ್ರವಾಸಿಗರಿಗೆ ಎಳನೀರು ಭಾಗ್ಯ
ತೆಂಗು ಉತ್ಪನ್ನಗಳ ಮಾರಾಟಕ್ಕೆ ಹೊಸ ರೂಪ ಕೊಡಲು ಹಾಸನ ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ರೈತರಿಗೆ ನೆರವಾಗಲು ಜಿಲ್ಲಾಡಳಿತ ಮುಂದಾಗಿದೆ. ರಾಜ್ಯ ನಾರು ಅಭಿವೃದ್ಧಿ ಉತ್ಪನ್ನ ಸಹಕಾರಿ ಮಂಡಳಿ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ತೆಂಗು ಉತ್ಪಾದಕರ ಸಹಕಾರ ಸಂಘಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಹಾಸನ ಜಿಲ್ಲೆಯಲ್ಲಿ ವಿನೂತನ ತೆಂಗು ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿಯವರು ಆಸಕ್ತಿ ವಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ತೆಂಗು ಬೆಳೆಗಾರರ ಪ್ರತಿನಿಧಿಗಳ ಸಭೆ ನಡೆಸಿರುವ ಅವರು, ನಾರು ಅಭಿವೃದ್ಧಿ ಸಹಕಾರಿ ಮಂಡಳಿ ಸಿದ್ಧಪಡಿಸಿದ್ದ ಹೆಸರುಗಳನ್ನು ಪರಿಶೀಲಿಸಿ ಅಂತಿಮವಾಗಿ 'ಕಲ್ಪಾಮೃತ' ಎಂಬ ಹೆಸರನ್ನು ಆಯ್ಕೆ ಮಾಡಿದ್ದಾರೆ.
ಮಾರಾಟ ಮಳಿಗೆಗಳ ವಿನ್ಯಾಸದ ಬಗ್ಗೆ ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನು ಇನ್ನಷ್ಟು ಉತ್ತಮಪಡಿಸಲು ಅವಕಾಶವಿದ್ದು ಹಳ್ಳಿಸೊಗಡು ಹೆಚ್ಚಾಗಿ ಕಾಣುವಂತೆ ವಿನ್ಯಾಸ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಎಳನೀರಿನ ವಹಿವಾಟಿಗೆ ಆಧ್ಯತೆ : ತೆಂಗು ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಇಬ್ಬರಿಗೂ ಲಾಭವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಮಧ್ಯವರ್ತಿಗಳ ಹಾವಳಿ ಇರದೆ ಮಾರಾಟ ಮಳಿಗೆಯೂ ಉಚಿತವಾಗಿ ದೊರೆಯುವುದರಿಂದ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ.
ರೈತರೇ ಮಳಿಗೆ ನಿರ್ವಹಣೆ ಮಾಡುವುದರಿಂದ ಉತ್ತಮ ವಾತಾವರಣದಲ್ಲಿ ಎಳನೀರು ಸವಿಯಬಹುದಾಗಿದೆ. ಎಳನೀರು ವ್ಯಾಪಾರ ಮೊದಲ ಆಧ್ಯತೆಯಾದರೂ, ಕಲ್ಪಾಮೃತದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ನಾರಿನ ಉತ್ಪನ್ನಗಳು, ತೆಂಗಿನ ತಿನಿಸುಗಳನ್ನು ಪ್ರದರ್ಶಿಸಿ ಮಾರಾಟಕ್ಕಿಡಲು ನಿರ್ಧರಿಸಲಾಗಿದೆ.