ಸುಮ್ಮನೆ ಕೂರೋರಲ್ಲ ದೇವೇಗೌಡ, ಕಾವೇರಿಗಾಗಿ ದೆಹಲಿಗೆ ಹೊಗ್ತಾರೆ
ಹೊಳೆನರಸೀಪುರ, ಮಾರ್ಚ್ 02: ನೀರಾವರಿ ವಿಚಾರವಾಗಿ ಅತೀವ ಆಸಕ್ತಿ ಮತ್ತು ಜ್ಞಾನ ಹೊಂದಿರುವ ಮಾಜಿ ಪ್ರಧಾನಿ ದೇವೇಗೌಡ ಅವರು ಕಾವೇರಿ ನದಿ ನೀರಿನ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಜಲಸಂಪನ್ಮೂಲ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಆಗಲಿದ್ದಾರೆ.
ಮಾರ್ಚ್ 5 ಮತ್ತು 6 ರಂದು ದೆಹಲಿಗೆ ತೆರಳಲಿರುವ ದೇವೇಗೌಡ ಅವರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯ ಅಪಾಯಗಳ ಬಗ್ಗೆ ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಅಷ್ಟೆ ಅಲ್ಲದೆ ಕರ್ನಾಟಕ ನೀರಾವರಿ ಕುರಿತು ಹಲವು ಉಪಯುಕ್ತ ಸಲಹೆಗಳನ್ನು ನೀಡಲಿದ್ದಾರೆ.
ಎಚ್ಡಿಕೆ ಸಿಎಂ ಮಾಡುವುದು ನನ್ನ ಗುರಿಯಲ್ಲ : ದೇವೇಗೌಡ
ಹಾಸನದ ಹೇಮಾವತಿ ಜಲಾಶಯಕ್ಕೆ ಭೇಟಿ ನೀಡಿದ ಸಮಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡ್ಕರಿ ಭೇಟಿ ವೇಳೆ ರಾಜ್ಯದ ನೀರಿನ ಸ್ಥಿತಿಗತಿ ವಿವರಿಸಲಾಗುವುದು. ಸಾಧ್ಯವಾದರೆ ಪ್ರಧಾನಿ ಭೇಟಿ ಮಾಡಲಾಗುವುದು. ಯಾವುದೇ ಸರ್ಕಾರದ ಮೇಲೆ ದೋಷಾರೋಪಣೆ ಮಾಡುವುದಿಲ್ಲ. ರಾಜ್ಯದ ಹಿತ ಮುಖ್ಯ ಎಂದರು.
ಹೇಮಾವತಿ ಜಲಾಶಯದ ನೀರು ಸಂಗ್ರಹದ ಮಾಹಿತಿ ಪಡೆದ ದೇವೇಗೌಡ ಅವರು ಅಂತರರಾಜ್ಯ ನದಿ ನೀರು ಸಮಸ್ಯೆಗಳ ಪರಿಹಾರಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
ಗೊರೂರಿನಲ್ಲಿ ಲಕ್ಷ್ಮಿ ರಥೋತ್ಸವ ವೇಳೆ ನೂಕು ನುಗ್ಗಲು ಸಂಭವಿಸಿದ ಬಗ್ಗೆ ಮಾತನಾಡಿದ ಅವರು 'ಭಯ ಪಡುವಂಥ ಯಾವುದೇ ಘಟನೆ ನಡೆದಿಲ್ಲ, ನಮಗೆ ಏನು ಆಗಿಲ್ಲ, ನನ್ನ ಪತ್ನಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಳೆ, ನಾನು ತಿಂಡಿ ತಿಂದು ಗೊರೂರಿಗೆ ಬಂದಿದ್ದೇನೆ, ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ನಗುತ್ತಲೇ ಪ್ರತಿಕ್ರಿಯೆ ನೀಡಿದರು.
ಮೈತ್ರಿ ಮಾತುಕತೆ, ಜೆಡಿಎಸ್ ಚಿತ್ತ ಎಡಪಕ್ಷಗಳತ್ತ!