ಒಕ್ಕಲಿಗರ ಸಂಘಕ್ಕೆ ನಾಚಿಕೆಯಾಗಬೇಕು: ದೇವೇಗೌಡ ಗರಂ
ಹಾಸನ, ಫೆಬ್ರವರಿ 01: ಪ್ರಮುಖ ಒಕ್ಕಲಿಗರ ನಾಯಕ ದೇವೇಗೌಡ ಅವರು ಒಕ್ಕಲಿಗರ ಸಂಘದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಚುನಾವಣೆ ನಡೆಸುವ ಒಕ್ಕಲಿಗರ ಸಂಘಕ್ಕೆ ನಾಚಿಕೆ ಆಗಬೇಕು, ಕೆಎಲ್ಇ ಸೇರಿದಂತೆ ಲಿಂಗಾಯತ ಸಂಸ್ಥೆಗಳು ಹೇಗೆ ನಡೆಯುತ್ತಿವೆ ಎಂದು ಅವರೊಮ್ಮೆ ನೋಡಬೇಕು' ಎಂದು ದೇವೇಗೌಡ ಆಕ್ರೋಶದಿಂದ ಹೇಳಿದರು.
ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಅಶೋಕ್ ಅವರನ್ನು ವರ್ಗಾಯಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ ಅವರು, ಉತ್ತಮ ಕೆಲಸ ಮಾಡಿದ್ದ ಅಶೋಕ್ ಅವರ ಸ್ಥಾನಕ್ಕೆ ಶಂಕರಲಿಂಗೇಗೌಡ ಅವರನ್ನು ನೇಮಿಸಲಾಗಿದೆ. ಶಂಕರಲಿಂಗೇಗೌಡ ನೇಮಕಕ್ಕೆ ಅಸಮಾಧಾನವಿಲ್ಲ ಆದರೆ ಅಶೋಕ್ ಅವರನ್ನು ಬದಲಾಯಿಸಿದ್ದು ಏಕೆ? ಅವರ ವಿರುದ್ಧ ಇದ್ದ ದೂರು ಏನು? ದೂರು ಕೊಟ್ಟವರು ಯಾರು ಎಂದು ಬಹಿರಂಗಪಡಿಸಲಿ ಎಂದು ದೇವೇಗೌಡ ಒತ್ತಾಯ ಮಾಡಿದ್ದಾರೆ.
'ಸಂಘದಲ್ಲಿ ಏನೇನು ನಡೆಯುತ್ತದೆ ಎಂಬುದು ನನಗೆ ಗೊತ್ತು, ಒಂದು ವಿಧಾನಸಭೆ ಚುನಾವಣೆಗೆ ಖರ್ಚು ಮಾಡುವುದಕ್ಕಿಂತಲೂ ಹೆಚ್ಚಿನ ಹಣವನ್ನು ನಿರ್ದೇಶಕರ ಚುನಾವಣೆಗೆ ಖರ್ಚು ಮಾಡಲಾಗುತ್ತಿದೆ' ಎಂದು ದೇವೇಗೌಡ ಹೇಳಿದರು.
ಪ್ರಶಾಂತ್ ಕಿಶೋರ್ ಜೊತೆ ಮಾತನಾಡಿದ್ದು ನಿಜ: ದೇವೇಗೌಡ
ಜೆಡಿಎಸ್ ಪಕ್ಷವನ್ನು ಗಟ್ಟಿಗೊಳಿಸಲು ಕುಮಾರಸ್ವಾಮಿ ಈಗಾಗಲೇ ಪ್ರಶಾಂತ್ ಕಿಶೋರ್ ಬಳಿ ಮಾತನಾಡಿದ್ದಾರೆ. ಈ ಬಗ್ಗೆ ನನ್ನ ಬಳಿಯೂ ಚರ್ಚೆ ನಡೆಸಿದ್ದಾರೆ, ಪಕ್ಷವನ್ನು ಪುನಃ ಕಟ್ಟುತ್ತೇವೆ ಎಂದು ಹೇಳಿದರು.
1989 ರಲ್ಲಿ ಒಬ್ಬನೇ ಇದ್ದೆ, ಆಗಲೂ ಪಕ್ಷ ಕಟ್ಟಿದ್ದೆ: ದೇವೇಗೌಡ
1989 ರಲ್ಲಿ ನನ್ನನ್ನು ಎಲ್ಲರೂ ಒದ್ದರು, ನಾನು ಒಬ್ಬನೇ ಇದ್ದೆ. ಆಗ ನನ್ನೊಂದಿಗೆ ವೈ.ಎಸ್.ವಿ.ದತ್ತ, ಸಿಎಂ.ಉಗ್ರಪ್ಪ, ಬಿ.ಎಲ್.ಶಂಕರ್ ಕೆಲವೇ ನಾಯಕರುಗಳು ಇದ್ದರು. ಈಗಲೂ ಸಹ ಬಂಡೆಪ್ಪ ಕಾಶೆಂಪುರ, ಬಸವರಾಜ ಹೊರಟ್ಟಿ, ಹಾಸನದ ರಾಮಸ್ವಾಮಿ, ಸಕಲೇಶಪುರದ ಕುಮಾರಸ್ವಾಮಿ ಇದ್ದಾರೆ ಮತ್ತೆ ಪಕ್ಷ ಕಟ್ಟುತ್ತೇನೆ ಎಂದರು.
ಪ್ಯಾಸೆಂಜರ್ ರೈಲಿನಲ್ಲಿ ದೇವೇಗೌಡ ಪ್ರಯಾಣ
ದೇವೇಗೌಡ ಅವರು ಬೆಂಗಳೂರಿನಿಂದ ಹಾಸನಕ್ಕೆ ಪ್ಯಾಸೆಂಜರ್ ರೈಲಿನಲ್ಲಿ ಬಂದಿದ್ದು ವಿಶೇಷವಾಗಿತ್ತು. ದೇವೇಗೌಡ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಮಾಡಿದರು.
''ಎತ್ತಿನಹೊಳೆಯಲ್ಲಿ ಯಾರಿಗೂ ಅನ್ಯಾವಾಗಲು ಬಿಡಲ್ಲ''
ನೀರಾವರಿ ಬಗ್ಗೆಯೂ ಮಾತನಾಡಿದ ದೇವೇಗೌಡ, ಮಹದಾಯಿ ಕುರಿತ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಎತ್ತಿನ ಹೊಳೆ ಕುರಿತು ಮಾತನಾಡಿ, 'ಎತ್ತಿನಹೊಳೆ ಯೋಜನೆ ಮೂಲಕ ಯಾರಿಗೂ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ, ಮೊದಲು ಕೋಲಾರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಈ ವಿಷಯದಲ್ಲಿ ಹೋರಾಟ ಮಾಡುತ್ತೇನೆ' ಎಂದರು.