ಹಾಸನದ ಸರ್ಕಾರಿ ಶಿಕ್ಷಕರಿಗೆ ಪರೀಕ್ಷೆ ಹಮ್ಮಿಕೊಂಡ ರೋಹಿಣಿ ಸಿಂಧೂರಿ
ಹಾಸನ, ಜೂನ್.29: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ರಾಜ್ಯದಲ್ಲೇ ಮೂರನೇ ಸ್ಥಾನಕ್ಕೇರಿಸುವ ಮಹತ್ವಾಕಾಂಕ್ಷೆಯೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊಸ ಉಪಕ್ರಮವೊಂದಕ್ಕೆ ಕೈ ಹಾಕಿದ್ದಾರೆ.
ಗಣಿತ, ವಿಜ್ಞಾನ ಹಾಗೂ ಸಮಾಜ-ವಿಜ್ಞಾನ ಬೋಧಿಸುವ 6ರಿಂದ 10ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಶಿಕ್ಷಕರು ತಮ್ಮ ವಿಷಯದ ಮೇಲೆ ಜುಲೈ 28ರಂದು ಪರೀಕ್ಷೆಯೊಂದನ್ನು ಬರೆಯಬೇಕಿದೆ. ಡಿಸಿ ರೋಹಿಣಿ ಸಿಂಧೂರಿಯವರೇ ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ರೂಪಿಸಲಿದ್ದಾರೆ.
ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ?
ಗುರುವಾರ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂರು ವಿಷಯಗಳಲ್ಲಿ ರಾಜ್ಯಪಠ್ಯ ಕ್ರಮವನ್ನು ಕೇಂದ್ರ ಪಠ್ಯಕ್ರಮಕ್ಕೆ ಉನ್ನತೀಕರಿಸಲಾಗಿದೆ. ಕೇವಲ ಕೆಲವೇ ಕೆಲವು ಶಿಕ್ಷಕರು ಪರಿಷ್ಕೃತ ಪಠ್ಯಕ್ರಮಕ್ಕೆ ಹೊಂದಿಕೊಂಡಿದ್ದಾರೆ.
ಉಳಿದವರು ಇನ್ನೂ ತಮ್ಮನ್ನು ಅಪ್ ಡೇಟ್ ಮಾಡಿಕೊಂಡಿಲ್ಲ. ಇದು ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಶಿಕ್ಷಕರಿಗೆ ಒಂದು ಪರೀಕ್ಷೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಎಲ್ಲಾ ಶಿಕ್ಷಕರಿಗೆ ನೂತನ ಪಠ್ಯಕ್ರಮವನ್ನು ಮನನ ಮಾಡಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಜುಲೈ 28ರಂದು ಪರೀಕ್ಷೆ ನಡೆಯಲಿದ್ದು, ಜಿಲ್ಲಾಧಿಕಾರಿ ಸ್ವತಃ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವುದಾಗಿ ತಿಳಿಸಿದ್ದಾರೆ.
"ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆಯಲೇಬೇಕು. ಕರಾವಳಿ ಜಿಲ್ಲೆಗಳಂತೆ ನಮ್ಮ ಜಿಲ್ಲೆ ಕೂಡ ಎಸ್ಎಸ್ಎಲ್ಸಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದೊಳಗಿರಬೇಕು. ಇದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಆರಂಭದಿಂದಲೇ ಪ್ರಯತ್ನ ಆರಂಭಿಸುತ್ತಿದ್ದೇವೆ," ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.