ಮಾಜಿ ಪ್ರಧಾನಿಗಳ ಕರ್ಮಭೂಮಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರು!
ಬೆಂಗಳೂರು, ಮೇ 20: ಮೊನ್ನೆಯಷ್ಟೇ 88ನೇ ವಸಂತಕ್ಕೆ ಕಾಟಲಿಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು, ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಆತಂಕ ಮೂಡಿಸಿದೆ ಎಂದಿದ್ದರು. ಇದೀಗ ಅವರ ಕರ್ಮಭೂಮಿ ಹಾಸನ ಜಿಲ್ಲೆಯಲ್ಲಿಯೆ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈಗ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕ್ಷೇತ್ರದಾದ್ಯಂತ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ವರದಿಯಾಗಿತ್ತು.
'ಸ್ವಂತ ತಂಗಿ ಮಗನನ್ನೇ ನಾನು ಊರಿಗೆ ಕರೆಸಿಲ್ಲ' ಸಚಿವರ ಹೇಳಿಕೆ
ಸದಾ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿರುತ್ತಿದ್ದ ಹಾಸನ ಜಿಲ್ಲೆಗೆ ಕೊರೊನಾ ವೈರಸ್ ತಡವಾಗಿಯೆ ಎಂಟ್ರಿ ಕೊಟ್ಟಿತ್ತು. ಆದರೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇವತ್ತು (ಮೇ 20) ರಾಜ್ಯದಲ್ಲಿ ವರದಿಯಾದ ಪ್ರಕರಣಗಳ ಪೈಕಿ ಅತಿಹೆಚ್ಚು ಸೋಂಕಿತರು ಹಾಸನ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.
ಇಂದು ಒಟ್ಟು 67 ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ 21 ಜನರು ಹಾಸನ ಜಿಲ್ಲೆಯವರಾಗಿದ್ದಾರೆ. ಇದಿರಿಂದಾಗಿ ಹಾಸನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾದಂತಾಗಿದೆ.
ವಿಪರ್ಯಾಸ ಎಂದರೆ ಮೇ 11ರ ವರೆಗೆ ಹಾಸನ ಜಿಲ್ಲೆಯಲ್ಲಿ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಮೇ 12ರಂದು ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದ 5 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ ಬೇರೆ ರಾಜ್ಯಗಳಿಂದ ಬಂದವರಲ್ಲಿಯೆ ಸೋಂಕು ದೃಢಪಟ್ಟಿದ್ದು ಒಟ್ಟು 53 ಸೋಂಕಿತರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನೂ 55 ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶ ಬರಬೇಕಾಗಿದೆ. ಸೋಂಕಿತರಲ್ಲಿ ಈ ವರೆಗೆ ಗುಣಮುಖರಾಗಿ ಯಾರು ಆಸ್ಪತ್ರೆಯಿಂದ ಬಿಡುಗಡೆ ಆಗಿಲ್ಲ.