ಕಾಂಗ್ರೆಸ್ ಪ್ರತಿಭಟಿಸುತ್ತಿರುವುದೇ? ಗಾಂಧಿ ಕುಟುಂಬಕ್ಕೆ ಪ್ರತ್ಯೇಕ ಕಾನೂನು ಇಲ್ಲ- ಆರಗ ಜ್ಞಾನೇಂದ್ರ
ಹಾಸನ, ಜೂ. 21: ರಾಹುಲ್ಗಾಂಧಿ ಇಡಿ ವಿಚಾರಣೆ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ, ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನು ಎಂಬುದಿಲ್ಲ, ಎಲ್ಲರಿಗೂ ಒಂದೇ ಕಾನೂನು ಇದೆ ಎಂದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಇಡಿ ತನಿಖೆ ಹಿಂದೆ ಯಾರ ಕೈವಾಡವು ಇಲ್ಲ. ಯಾರು ತಪ್ಪು ಮಾಡಿದ್ದಾರೆ, ಯಾರೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಅವರನ್ನು ಇಡಿ ವಿಚಾರಣೆಗೆ ಕರಿತಾರೆ. ಕರಿಬೇಡಿ ಅಂತ ಹೇಳಕಾಗುತ್ತಾ ಎಂದು ಮಾಧ್ಯಮಗಳಿಗೆ ಮರುಪ್ರಶ್ನಿಸಿದರು.
ದೇಶದಲ್ಲಿ ಎಲ್ಲರೂ ಕಾನೂನನ್ನು ಗೌರವಿಸಬೇಕು. ಇಡೀ ದೇಶದಾದ್ಯಂತ ಕಾಂಗ್ರೆಸ್ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಬೇಕು, ಕಾನೂನು, ಕಾಯ್ದೆ ಇವರು ಗೌರವಿಸದಿದ್ದರೆ, ಇನ್ಯಾರನ್ನು ಗೌರವಿಸುತ್ತಾರೆ, ಇಡಿ ವಿಚಾರಣೆಯಲ್ಲಿ ತಪ್ಪು ಮಾಡದಿದ್ದರೆ ಹೊರಗೆ ಬರ್ತಾರೆ, ಇಲ್ಲ ಶಿಕ್ಷೆ ಅನುಭವಿಸುತ್ತಾರೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಸವಾಲಿಗೆ ಗೃಹಸಚಿವ ಕಿಡಿ:
ಪಿಎಸ್ಐ ಆಕ್ರಮದ ಕಿಂಗ್ಪಿನ್ ಟಚ್ ಮಾಡಿದರೆ ಸರ್ಕಾರ ಬಿದ್ದು ಹೋಗುತ್ತೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ವಿಚಾರದ ಕುರಿತು ಮಾತನಾಡಿ ಅವರು, "ಅಂತಹ ಮಾಹಿತಿಗಳಿದ್ದರೆ ಕೊಡಿ ಸರ್ಕಾರ ಹೋದರೆ ಹೋಗಲಿ ಅಂತ ನಾನೇ ಹೇಳಿದ್ದೀನಿ. ಅವರು ಇದುವರೆಗೂ ಕೂಡ ಮಾಹಿತಿ ಕೊಡಲಿಲ್ಲ, ಬರೀ ಹೇಳುತ್ತಿದ್ದಾರೆ. ನಮಗೆ ಸಿಕ್ಕ ಮಾಹಿತಿ, ಸತ್ಯ ನೋಡಿ ಯಾರನ್ನೂ ಸೇವ್ ಮಾಡಲ್ಲ, ಎಲ್ಲರನ್ನೂ ಕೂಡ ಕಷ್ಟಪಟ್ಟು ಜೈಲಿಗೆ ಸೇರಿಸುತ್ತಿದ್ದೇವೆ," ಎಂದು ಹೇಳಿದರು.
ತನಿಖೆ ಮುಗಿದ ಮೇಲೆ ಪಿಎಸ್ಐ ಮರುಪರೀಕ್ಷೆ
ಪಿಎಸ್ಐ ನೇಮಕಾತಿ ಹಗರಣದ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, "ಸಂಪೂರ್ಣ ತನಿಖೆಗೆ ಆದೇಶ ಕೊಟ್ಟಿದ್ದೇವೆ, ಯಾರು ಕೂಡ ಮಧ್ಯೆ ಪ್ರವೇಶ ಮಾಡುವುದಿಲ್ಲ.ಒಳ್ಳೆಯ ಸಿಐಡಿ ಬ್ಯಾಚ್ ಮಾಡಿ ತನಿಖೆಗೆ ಬಿಟ್ಟಿದ್ದೇವೆ. ಪೊಲೀಸ್ ಅಧಿಕಾರಿಗಳು, ಬ್ರೋಕರ್ಗಳು ಯಾರೇ ಆಗಲಿ ವಂಚಿಸುವವರನ್ನು ಜೈಲಿಗೆ ಕಳುಹಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು. ಪಿಎಸ್ಐ ಹಗರಣದಿಂದ ಕಷ್ಟಪಟ್ಟು ಓದಿದ ಮಕ್ಕಳಿಗೆ ತುಂಬಾ ದು:ಖ ಆಗಿದೆ ಇದೆಲ್ಲ ಮುಗಿದ ಮೇಲೆ ಮರುಪರೀಕ್ಷೆ ಮಾಡುತ್ತೇವೆ ಎಂದು ತಿಳಿಸಿದರು.