ಪಾಪ ತೊಳೆದುಕೊಳ್ಳಲು ಕಾಂಗ್ರೆಸ್ ಭಾರತ್ ಜೋಡೋ ಮಾಡುತ್ತಿದೆ: ಕಟೀಲ್ ವ್ಯಂಗ್ಯ
ಹಾಸನ, ಸೆಪ್ಟೆಂಬರ್ 21: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಾರತ ಪಾಕಿಸ್ತಾನ ವಿಭಜನೆ ಮಾಡಿದ ಕಾಂಗ್ರೆಸ್ ಪಕ್ಷ, ನಂತರ ವಂದೇ ಮಾತರಂ ವಿಭಜನೆ ಮಾಡಿದರೆ, ಕಾಶ್ಮೀರವನ್ನು ದೇಶದಿಂದ ಪ್ರತ್ಯೇಕಿಸಲು ಪ್ರಯತ್ನವನ್ನೂ ಮಾಡಿದರು. ಅಂದು ದೇಶವನ್ನು ವಿಭಜನೆ ಮಾಡಲು ಕಾರಣವಾದ ಕಾಂಗ್ರೆಸ್ ತನ್ನ ಪಾಪದ ಕೈ ತೊಳೆದುಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ದಿವಂಗತ ಬಿಬಿ ಶಿವಪ್ಪ ಪತ್ನಿ ಸುಶೀಲಮ್ಮ ಅನಾರೋಗ್ಯ ಹಿನ್ನಲೆ ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ಕಾಂಗ್ರೆಸ್ ಕಾಲೆಳೆದರು. ಕಾಂಗ್ರೆಸ್ ತನ್ನ ಪಾಪದ ಕೈ ತೊಳೆದುಕೊಳ್ಳಲು ಈ ಯಾತ್ರೆ ಮಾಡುತ್ತಿದೆ. ಅದರ ಬದಲು ಅವರು ಕಾಂಗ್ರೆಸ್ ಜೊಡೋ ಯಾತ್ರೆ ಮಾಡಬೇಕು. ಈಗಾಗಲೇ ಕಾಂಗ್ರೆಸ್ ನಾಯಕರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ಎಎಪಿ!
ರಾಜ್ಯ ಕಾಂಗ್ರೆಸ್ನಲ್ಲಿ ಅದ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ನ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಕಾಂಗ್ರೆಸ್ನಲ್ಲಿರುವ ಎಲ್ಲಾ ಪ್ರಮುಖ ನಾಯಕರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ಕಾಂಗ್ರೆಸ್ ಒಂದು ವಿರೋಧ ಪಕ್ಷ ಆಗಿರಲು ನಾಲಾಯಕ್ ಆಗುವ ಸ್ಥಿತಿಗೆ ಬಂದಿದೆ. ಕಾಂಗ್ರೆಸ್ ಸ್ಥಿರ ಮಾಡೋ ಬದಲು ಜನರ ದಾರಿ ತಪ್ಪಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದರು.
ಕರ್ನಾಟಕದಲ್ಲಿ ಒಂದಾಗಬೇಕಾದ ಕಾಂಗ್ರೆಸ್ ಈ ಜೋಡೊ ಹೆಸರಿನಲ್ಲಿ ಎರಡು ತುಂಡಾಗಿದೆ. ಸಿದ್ದರಾಮಯ್ಯ ಈ ಯಾವುದೇ ಕಾರ್ಯಕ್ರಮದಲ್ಲಿ ಬಾಗಿಯಾಗದೆ ನಿರಾಸಕ್ತಿ ತೋರಿದ್ದಾರೆ. ಡಿಕೆ ಶಿವಕುಮಾರ್ ಹೋದಲ್ಲೆಲ್ಲಾ ಕಾರ್ಯಕರ್ತರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಅವರ ಹೇಳಿಕೆಗಳು ಆಂತರಿಕ ಗೊಂದಲ ಸೃಷ್ಟಿ ಮಾಡಿದೆ. ಇದರ ಜೊತೆ ಐಟಿ ನೋಟಿಸ್, ಭ್ರಷ್ಟಾಚಾರದಿಂದ ಯಾರು ಯಾವಾಗ ಜೈಲಿಗೆ ಹೋಗ್ತಾರೊ ಎನ್ನುವ ಆತಂಕ ಕಾಡುತ್ತಿದೆ. ಹಾಗಾಗಿ ಕಾಂಗ್ರೆಸ್ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಈ ಯಾತ್ರೆಯಿಂದ ಕಾಂಗ್ರೆಸ್ಗೆ ಲಾಭ ಇಲ್ಲ, ಬಿಜೆಪಿಗೆ ನಷ್ಟವೂ ಅಲ್ಲ ನಳಿನ್ ಹೇಳಿದ್ದಾರೆ.
ಭ್ರಷ್ಟಾಚಾರ ಮುಚ್ಚಿಹಾಕಿಕೊಳ್ಳಲು ಸರಕಾರದ ಟೀಕೆ
ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ಇಡಿ , ಐಟಿ ದಾಳಿ ಮಾಡಿಸಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, "ಇಡಿ ಮತ್ತು ಐಟಿ ಸ್ವತಂತ್ರವಾಗಿ ತನಿಖೆ ಮಾಡುವ ಸಂಸ್ಥೆಗಳು, ಅದಕ್ಕೆ ಪೂರ್ಣವಾದ ಸಹಕಾರ ಕೊಡಬೇಕು, ಎಲ್ಲರನ್ನು ತನಿಖೆ ಮಾಡುತ್ತಾರೆ. ನಾಲ್ಕು ವರ್ಷದ ಹಿಂದೆ ಡಿಕೆಶಿ ಮೇಲೆ ದಾಳಿ ಆಗಿತ್ತು, ಒಂದು ವರ್ಷದ ಹಿಂದೆಯೂ ಆಗಿತ್ತು, ಆಗ ಯಾರು ದಾಳಿ ಮಾಡಿಸಿದ್ದರು. ಆದರೆ ಇವತ್ತು ಅವರ ಭ್ರಷ್ಟಾಚಾರದ ವ್ಯವಸ್ಥೆಯನ್ನು ಮುಚ್ಚಿಹಾಕಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ'' ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಕಮಿಷನ್ ಸರ್ಕಾರ ಅದಿಕಾರದಲ್ಲಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್, "ಸಿದ್ದರಾಮಣ್ಣ ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ನ್ನು ಗಟ್ಟಿ ಮಾಡಲು ಆಗಲಿಲ್ಲ, ಅವರೇ ತಂಡ ರಚನೆ ಮಾಡಲು ಆಗಲಿಲ್ಲ, ಹೊಂದಾಣಿಕೆ ಮಾಡುವುದಕ್ಕೆ ಆಗಲಿಲ್ಲ, ಇನ್ನೆಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಐಜಿ rank ಅಧಿಕಾರಿಯನ್ನು ಬಂಧಿಸಿದ್ದೇವೆ
ಪಿಎಸ್ಐ ಹಗರಣದಲ್ಲಿ ಗೃಹ ಸಚಿವರ ರಾಜಿನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ನವರು ಎಲ್ಲದಕ್ಕು ಪಟ್ಟು ಹಿಡಿತಾರೆ, ಇವರ ಮಾತು ಕೇಳಿದರೆ ಎಲ್ಲರೂ ರಾಜಿನಾಮೆ ಕೊಡಬೇಕಾಗುತ್ತದೆ. ಇವರ ಕಾಲದಲ್ಲಿ ಎಷ್ಟು ಹಗರಣ ನಡೆದಿತ್ತು, ಇದೇ ಪಿಎಸ್ಐ ಹಗರಣ ಅವರ ಕಾಲದಲ್ಲಿ ನಡೆದಿತ್ತು ಯಾರು ರಾಜಿನಾಮೆ ಕೊಟ್ಟರು. ಏನು ತನಿಖೆ ಆಯ್ತು ಎಂದು ಪ್ರಶ್ನಿಸಿದ ಅವರು, ನಾವು ಎದೆ ತಟ್ಟಿ ಹೇಳುತ್ತೇವೆ, ಪಿಎಸ್ಐ ಹಗರಣದಲ್ಲಿ ತನಿಖೆ ಮಾಡಿದ್ದೇವೆ, ಓರ್ವ ಡಿಐಜಿ ರಾಂಕ್ ಅಧಿಕಾರಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದೀವಿ. ಇವರ ಕಾಲದಲ್ಲಿ ಎಲ್ಲಿ ತನಿಖೆ ಆಗಿತ್ತು ಎಂದು ಪ್ರಶ್ನಿಸಿದರು.
ನಮ್ಮ ಸರಕಾರದಲ್ಲಿ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ
ಇವರ ಕಾಲದಲ್ಲಿ ಲೋಕಾಯುಕ್ತದ ಹಲ್ಲು ತೆಗೆದು ಒಳಗೆ ಹಾಕಿದ್ದರು. ಇವರು ಲೋಕಾಯುಕ್ತ ಮುಳುಗಿಸಿದ್ದರು ನಾವು ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ಕೊಟ್ಟಿದ್ದೇವೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಪೂರ್ಣ ತನಿಕೆ ಮಾಡುತ್ತೇವೆ. ಇವರ ಕಾಲದಲ್ಲಿ ಡಿವೈಎಸ್ಪಿಗಣಪತಿ ಆತ್ಮಹತ್ಯೆ ಆಯಿತು. ಅವರ ಕಾಲದಲ್ಲಿ ಅದಿಕಾರಿಗಳ ಸ್ಥಿತಿ ಶೋಚನೀಯವಾಗಿತ್ತು. ಆಗ ಜಾರ್ಜ್ ರಾಜಿನಾಮೆ ಕೊಟ್ಟಿಲ್ಲ, ಆರು ತಿಂಗಳ ನಂತರ ಕೋರ್ಟ್ ಹೇಳಬೇಕಾಯಿತು. ಎಲ್ಲಾ ಹಗರಣ ಮುಚ್ಚಿಟ್ಟು, ತನಿಖೆಗೂ ಸಿಗದಂತೆ ಮಾಡಿ ಫೈಲ್ ಕದ್ದು ಇಟ್ಟು ಸರಕಾರ ನಡೆಸಿದ್ದರು.
ನಾವು ಎಲ್ಲವನ್ನೂ ತನಿಖೆ ಮಾಡಿಸುತ್ತಿದ್ದೇವೆ ಕೇವಲ ಪಿಎಸ್ ಐ ಹಗರಣ ಅಲ್ಲ, ಶಿಕ್ಷಕರ ನೇಮಕಾತಿ ಹಗರಣ ತನಿಖೆ ಮಾಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಎಲ್ಲಾ ಕರ್ಮಕಾಂಡ ಹೊರ ಹಾಕುತ್ತೇವೆ, ಲೋಕಾಯುಕ್ತಕ್ಕೆ ಶಕ್ತಿ ತುಂಬುತ್ತೇವೆ. ಆಗ ಸಿದ್ದರಾಮಣ್ಣ ಇಲಿರುತ್ತಾರೋ ನನಗೆ ಗೊತ್ತಿಲ್ಲ ಎಂದು ಭ್ರಷ್ಟಾಚಾರ ಹಗರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ ಎಂದು ಪರೋಕ್ಷವಾಗಿ ನಳಿನ್ ಕುಮಾರ್ ಹೇಳಿದರು.
ಬಿಜೆಪಿ ಸರಕಾರದಲ್ಲಿ ಉಗ್ರರ ನಿಯಂತ್ರಣ
ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ವಿಚಾರವಾಗಿ ಮಾತನಾಡಿ, ಮತಾಂಧ ಶಕ್ತಿಗಳು ಉಗ್ರವಾದಿಗಳ ಜೊತೆ ಕೈಜೊಡಿಸಿಕೊಂಡು ದೇಶ ಹಾಗೂ ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿ ಮಾಡಲು ಮುಂದಾಗಿರುವುದು ತಿಳಿದುಬಂದಿದ್ದು, ಉಗ್ರರು ಎಲ್ಲೇ ಇದ್ದರೂ ಬಂಧಿಸುವ ಕೆಲಸವಾಗುತ್ತಿದೆ. ಹಿಂದೆ ಭಟ್ಕಳ ಸಹೋದರರ ಬಂಧನವಾಗಿದೆ. ಅರು ತಿಂಗಳ ಹಿಂದೆ ಮಂಗಳೂರಿನಲ್ಲಿ ಎನ್ಐಎ ಮೂರು ಜನರನ್ನು ಬಂಧಿಸಿದ್ದರು. ಈಗ ಶಿವಮೊಗ್ಗದಲ್ಲಿ ಇಬ್ಬರ ಬಂಧನವಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಭಯೋತ್ಪಾದನಾ ಚಟುವಟಿಕೆಗಳಿಗೆ ನಿಯಂತ್ರಣ ಮಾಡುವ ಕೆಲಸವಾಗಿದೆ ಎಂದು ತಿಳಿಸಿದರು.