ದೇವೇಗೌಡರ ಕುಟುಂಬದ ಮೇಲೆ ಭೂಕಬಳಿಕೆ ಆರೋಪ ಮಾಡಿದ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು
ಹಾಸನ, ಅಕ್ಟೋಬರ್ 10: ಕಾಂಗ್ರೆಸ್-ಜೆಡಿಎಸ್ ಭಾಯಿ-ಭಾಯಿ ಎಂದು ಎಷ್ಟೇ ಹೇಳಿಕೊಂಡರು. ಹಾಸನದಲ್ಲಿ ಮಾತ್ರ ಇವೆರಡೂ ಪಕ್ಷಗಳ ಹಗೆತನ ಹಾಗೆಯೇ ಮುಂದುವರೆದಿದೆ. ಕಾಂಗ್ರೆಸ್ ಮಾಜಿ ಸಚಿವ ಎ.ರೇವಣ್ಣ ಅವರು ದೇವೇಗೌಡರ ಕುಟುಂಬದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೆ ರೇವಣ್ಣ ಅವರ ವಿರುದ್ಧ ಆಸ್ತಿ ಕಬಳಿಕೆಯ ಆರೋಪ ಹೊರಿಸಿದ್ದ ಎ.ಮಂಜು ಇಂದು ಮತ್ತೆ ಅದನ್ನೇ ಮುಂದುವರೆಸಿದ್ದು ಈ ಬಾರಿ ಇನ್ನಷ್ಟು ದೊಡ್ಡ ಲೆಕ್ಕವನ್ನು ತೆರೆದಿಟ್ಟಿದ್ದಾರೆ.
ಹಾಸನ: ಮಂತ್ರಿ ರೇವಣ್ಣ ಪತ್ನಿ, ಮಾಜಿ ಮಂತ್ರಿ ಎ.ಮಂಜು ಮಗನ ನಡುವೆ ಜಟಾಪಟಿ
ಇಂದು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇವೇಗೌಡರ ಕುಟುಂಬದವರು ಹಾಸನ ಜಿಲ್ಲೆ ಕಸಬಾ ತಾಲ್ಲೂಕು ಸೋಮನಹಳ್ಳಿ ಕಾವಲು ಬಳಿ 69.19 ಎಕರೆ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪ ಮಾಡಿದರು.
ಈ ಜಮೀನಿನಲ್ಲಿ ಕೆಲವು ಎಕರೆಯನ್ನು ಪ್ರಜ್ವಲ್ ರೇವಣ್ಣ ಹೆಸರಿಗೆ ಇನ್ನು ಕೆಲವು ಜಮೀನನ್ನು ದೇವೇಗೌಡರ ಸೋದರಿಯ ಹೆಸರಿಗೆ ನೊಂದಣಿ ಮಾಡಲಾಗಿದೆ ಎಂದು ಅವರು ಕೆಲವು ದಾಖಲೆಗಳನ್ನು ಸಹ ತೋರಿಸಿದರು.
ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ
2014-15ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಈ ನೊಂದಾವಣಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಈ ಅಕ್ರಮದ ಹಿಂದೆ ಸಚಿವ ರೇವಣ್ಣ ಅವರಿದ್ದಾರೆ ಎಂದು ನೇರ ಆರೋಪ ಮಾಡಿದರು.
ಅಧಿಕಾರಿಗಳಿಗೆ ದೂರು ನೀಡಿದ್ದಾಗಿದೆ
ಈ ಭೂಕಬಳಿಕೆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದೇನೆ, ಜೊತೆಗೆ ಸಚಿವ ರೇವಣ್ಣ ಅವರ ಒಟ್ಟು ಆಸ್ತಿ ವಿವರದ ಬಗ್ಗೆಯೂ ಮಾಹಿತಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.
ಹಾಸನ: ಜೆಡಿಎಸ್- ಕಾಂಗ್ರೆಸ್ ನಡುವೆ ಅಲ್ಲಿ ದೋಸ್ತಿ, ಇಲ್ಲಿ ಕುಸ್ತಿ
ರೋಹಿಣಿ ಕ್ರಮ ಕೈಗೊಳ್ಳಲಿ
ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಅವರು ಮೂರು ದಿನಗಳ ಒಳಗಾಗಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಭೂ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಅವರು ಹೇಳಿದರು.
ಹಾಸನದಲ್ಲಿ ಮುಗಿಯದ ಜಗಳ
ಮಾಜಿ ಸಚಿವ, ಹಾಸನ ಕಾಂಗ್ರೆಸ್ ಮುಖಂಡ ಎ.ಮಂಜು ಅವರು ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಜೆಡಿಎಸ್ ಮೇಲೆ ಹಾಗೂ ದೇವೇಗೌಡರ ಕುಟುಂಬದ ಮೇಲೆ ತಮ್ಮ ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ.