ಹಾಸನ ಜಿಲ್ಲೆಯಲ್ಲಿ ಕುಸಿಯುವ ಹಂತದಲ್ಲಿರುವ 40 ಮನೆಗಳು: ಜನರಿಗೆ ಆತಂಕ
ಹಾಸನ, ಆಗಸ್ಟ್, 05: ಜಿಲ್ಲೆಯ ಚನ್ನರಾಯಪಟ್ಟಣ ಭೂವನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಮನೆ ಗೋಡೆ ಕುಸಿತದಿಂದ 13 ವರ್ಷದ ಪ್ರಜ್ವಲ್ ಎಂಬ ಬಾಲಕ ಮೃತಪಟ್ಟಿದ್ದ. ಇದೀಗ 40ಕ್ಕೂ ಹೆಚ್ಚು ಮನೆಗಳು ಕುಸಿಯುವ ಹಂತದಲ್ಲಿದ್ದು, ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಭೂವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮನೆ ಗೋಡೆ ಕುಸಿದು ಪ್ರಜ್ವಲ್ ಎಂಬ 13 ವರ್ಷದ ಬಲಕ ಮೃತಪಟ್ಟಿದ್ದು, ನುಗ್ಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದ ತಡ ರಾತ್ರಿ ಮಲಗಿದ್ದಾಗ ಮನೆಯ ಗೋಡೆ ಕುಸಿದಿದ್ದು, ಬಾಲಕನ ಪಕ್ಕದಲ್ಲಿ ಮಲಗಿದ್ದ ಅಜ್ಜಿಗೂ ಗಂಭೀರ ಗಾಯವಾಗಿದೆ.
ಭಾರೀ ಮಳೆಗೆ ಮನೆ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದನ್ನು ಕಂಡು ಅಲ್ಲಿನ ಜನರು ಭಯಭೀತರಾಗಿದ್ದಾರೆ. ಇಡೀ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳು ಕುಸಿಯುವ ಹಂತದಲ್ಲಿದ್ದು, ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತೆ ಆಗಿದೆ. ಇದೀಗ ಭೂವನಹಳ್ಳಿ ಗ್ರಾಮದ ಜನರಲ್ಲಿ ಭೀತಿ ಶುರುವಾಗಿದೆ. ಕುಸಿಯುತ್ತಿರುವ ಮನೆಗಳನ್ನು ರಕ್ಷಣೆ ಮಾಡಿಕೊಳ್ಳಲು ಬಡಜನರು ಪರದಾಡುತ್ತಿದ್ದಾರೆ.
ಅಲ್ಲದೇ ನಮ್ಮ ಜೀವ ಉಳಿಸಿ ಎಂದು ಜನರು ಕಣ್ಣೀರಿಡುತ್ತಿದ್ದಾರೆ. ಸುಮಾರು 40ಕ್ಕಿಂತ ಹೆಚ್ಚಿನ ಮನೆಗಳು ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿವೆ. ಮಣ್ಣಿನ ಗೋಡೆಗಳಾದ ಕಾರಣ ಮಳೆಯಿಂದ ಶೀತ ಹೆಚ್ಚಾಗಿ ಅಲ್ಲಿನ ಮನೆಗಳು ಕುಸಿಯುತ್ತಲೇ ಇವೆ.
ಆದ್ದರಿಂದ ನಮಗೆ ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಜನರು ಅಧಿಕಾರಿಗಳ ಬಳಿ ಬೇಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಭಾರಿ ಮಳೆಗೆ ಅರಕಲಗೂಡು ತಾಲೂಕಿನ ಕೋಣನೂರು ಕೆರೆಯ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ರಸ್ತೆ ನೂರು ಮೀಟರ್ಗೂ ಹೆಚ್ಚು ದೂರ ಬಿರುಕು ಬಿಟ್ಟಿರುವ ಹಿನ್ನೆಲೆ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ. ರಸ್ತೆ ಇನ್ನು ಕುಸಿಯುವ ಭೀತಿ ಇರುವುದರಿಂದ ವಾಹನ ಸಂಚಾರವನ್ನು ಸ್ಥಗಿತ ಮಾಡುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಇನ್ನು ನೀರು ಹೆಚ್ಚಿದ ಕಾರಣ ಕೋಣನೂರು ಕೆರೆ ಒಡೆಯುವ ಭೀತಿಯಲ್ಲಿದೆ. ಕೆರೆ ಏರಿ ಒಡೆದರೆ ನೂರಾರು ಎಕರೆ ಜಮೀನು ಜಲಾವೃತವಾಗುವ ಸಂಭವ ಎದುರಾಗಿದೆ. ಕಳೆದ 15 ದಿನಗಳ ಹಿಂದೆ ಕೆರೆ ಏರಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಅಧಿಕಾರಿಗಳ ಬೇಜವ್ದಾರಿಯಿಂದಲೇ ಕೆರೆ ಏರಿ ದೊಡ್ಡ ಮಟ್ಟದಲ್ಲಿ ಬಿರುಕು ಬಿಡುತ್ತಿವೆ ಎಂದು ಅಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ.