ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆ
ಬೆಂಗಳೂರು, ಮಾರ್ಚ್ 08 : ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮುಖಭಂಗವಾಗಿದೆ. ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೇಂದ್ರಿಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಮಾರ್ಚ್ 13ರ ತನಕ ತಡೆಯಾಜ್ಞೆ ನೀಡಿದೆ. ಮಾರ್ಚ್ 13ರ ತನಕ ಅವರು ಜಿಲ್ಲಾಧಿಕಾರಿಯಾಗಿ ಮುಂದುವರೆಯಲಿದ್ದಾರೆ.
ರೋಹಿಣಿ ಸಿಂಧೂರಿ ವರ್ಗಾವಣೆ, ರಂದೀಪ್ ಹಾಸನ ಡಿಸಿ
ಮಾರ್ಚ್ 7ರ ಬುಧವಾರ ಕರ್ನಾಟಕ ಸರ್ಕಾರ ರೋಹಿಣಿ ಸಿಂಧೂರಿ ಸೇರಿ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನಲ್ಲಿರುವ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿತ್ತು.
ಅವಧಿಗೂ ಮೊದಲೇ ವರ್ಗಾವಣೆ ಮಾಡಿದ್ದನ್ನು ರೋಹಿಣಿ ಸಿಂಧೂರಿ ಅವರು ಸಿಎಟಿಯಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಮಾರ್ಚ್ 13ರ ತನಕ ವರ್ಗಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮಾರ್ಚ್ 13ರಂದು ಮುಂದಿನ ವಿಚಾರಣೆ ನಡೆಯಲಿದೆ.
ರೋಹಿಣಿ ಕೆಲಸ ತೃಪ್ತಿ ತಂದಿಲ್ಲ, ಆ ಕಾರಣಕ್ಕೆ ವರ್ಗಾವಣೆ : ಪರಮೇಶ್ವರ್
ಹಿಂದೆಯೂ ತಡೆ ನೀಡಲಾಗಿತ್ತು : ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಜ.22ರಂದು ಅವರನ್ನು ವರ್ಗಾವಣೆ ಮಾಡಿದ ಆದೇಶಕ್ಕೆ ಚುನಾವಣಾ ಆಯೋಗ ತಡೆ ನೀಡಿತ್ತು.
ಹಾಸನದಲ್ಲಿ ಮಹಾಮಸ್ತಕಾಭಿಷೇಕ ನಡೆಯಬೇಕಿದ್ದ ಹಿನ್ನಲೆಯಲ್ಲಿ ಜನವರಿಯಲ್ಲಿ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿದ್ದಕ್ಕೆ ಸಾರ್ವಜನಿಕವಾಗಿಯೂ ಆಕ್ರೋಶ ವ್ಯಕ್ತವಾಗಿತ್ತು.