ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡೋರು ಈಗ ಮಾತಾಡಲಿ: ಎಚ್ ಡಿ ರೇವಣ್ಣ
ಹಾಸನ, ಅಕ್ಟೋಬರ್ 9: ರಫೇಲ್ ಯುದ್ಧ ವಿಮಾನ ಭಾರತದ ವಾಯುಪಡೆಗೆ ಸೇರ್ಪಡೆಯಾದ ಬಳಿಕ ಹಾರಾಟಕ್ಕೂ ಮುನ್ನ ಅದರ ಚಕ್ರಗಳಿಗೆ ನಿಂಬೆಹಣ್ಣು ಇರಿಸಿದ ಘಟನೆಯನ್ನು ಮಾಜಿ ಸಚಿವ ಎಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.
'ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿ ಮುಖಂಡರು ನಿಂಬೆಹಣ್ಣಿನ ಕುರಿತು ಈಗ ಮಾತನಾಡಲಿ' ಎಂದು ರೇವಣ್ಣ ಹೇಳಿದರು.
ರೇವಣ್ಣ ಹಿಡ್ಕೊಂಡ್ರೆ ನಿಂಬೆಹಣ್ಣು, ರಾಜನಾಥ್ ಸಿಂಗ್ ಹಿಡ್ಕೊಂಡ್ರೆ ಕುಂಬ್ಳಕಾಯಿನಾ?
ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಬುಧವಾರ ಮಾತನಾಡಿದ ಅವರು, ಫ್ರಾನ್ಸ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡಿ ಅದರ ಹಾರಾಟಕ್ಕೂ ಮುನ್ನ ಚಕ್ರಗಳಿಗೆ ನಿಂಬೆಹಣ್ಣು ಇರಿಸಿದ್ದಾರೆ. ನನಗೆ ನಿಂಬೆಹಣ್ಣು ರೇವಣ್ಣ ಎಂದು ಅಣಕಿಸುವ ಬಿಜೆಪಿ ನಾಯಕರು ಈಗ ನಿಂಬೆಹಣ್ಣಿನ ಕುರಿತು ಮಾತಾಡಲಿ ಎಂದರು.
ಕಾವೇರಿ ಕೊಳ್ಳದ ಅಣೆಕಟ್ಟುಗಳ ಕಾರ್ಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಡೆಯೊಡ್ಡಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿ ಸೇರಿದಂತೆ ವಿವಿಧೆಡೆಯ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳನ್ನು ಕೂಡ ತಡೆಹಿಡಿಯಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಹೆಚ್ಚು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಮಾತ್ರ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ಟೆಂಡರ್ ಆಗಿ ಕಾರ್ಯಾದೇಶ ನೀಡಿದ್ದರೂ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಬಿಜೆಪಿಯ ಹಾಗೂ ಈಗ ಬಿಜೆಪಿಗೆ ಸೇರಿಕೊಂಡಿರುವ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದರು.