ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ, ಇದ್ದರೆ ಭಾಜಪ ಬಣ ಮಾತ್ರ: ಸಿ.ಟಿ. ರವಿ
ಹಾಸನ, ನವೆಂಬರ್ 6: "ಚುನಾವಣೆಗಳಲ್ಲಿ ಗೆಲುವು ಮತ್ತು ಸೋಲಿಗೆ ಕಾರಣ ಇರುತ್ತದೆ, ಸಿಂದಗಿಯಲ್ಲಿ 31 ಸಾವಿರ ಲೀಡ್ನಲ್ಲಿ ಗೆದ್ದಿದ್ದೀವಿ, ಆ ಲೀಡ್ ನೋಡಿದಾಗ ಅಲೆ ಬಿಜೆಪಿ ಪರ ಇದೆ," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಹಾಸನದ ಹಾಸನಾಂಬ ದೇವಿ ದರ್ಶನದ ಕೊನೆ ದಿನವಾದ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತಾನಾಡಿದ ಸಿ.ಟಿ. ರವಿ, "ಹಾನಗಲ್ನಲ್ಲಿ ಕಾಂಗ್ರೆಸ್ ಗೆಲುವು ಅಂತಾ ಬೀಗುವ ಹಾಗಿಲ್ಲ, ಕಾಂಗ್ರೆಸ್ ಪರವಾಗಿ ಅಲೆ ಇದ್ದರೆ ಅವರು ಸಿಂದಗಿಯಲ್ಲೂ ಗೆಲ್ಲಬೇಕಿತ್ತು, ಏಕೆ ಗೆಲ್ಲಲಿಲ್ಲ," ಎಂದು ಪ್ರಶ್ನಿಸಿದರು.
"ಹಾನಗಲ್ನಲ್ಲಿ ಶ್ರೀನಿವಾಸ್ ಮಾನೆ ಪರವಾಗಿ ಅಲೆ ಇತ್ತು, ಕಳೆದ ಚುನಾವಣೆಯಲ್ಲಿ ಸೋತ ದಿನದಿಂದ ಅಲ್ಲಿ ಕೆಲಸ ಮಾಡುತ್ತಿದ್ದರು. ಅದು ಅವರನ್ನು ಕೈ ಹಿಡಿದಿದೆ. ಬಿಜೆಪಿಯೂ ಕೂಡ 80 ಸಾವಿರಕ್ಕೂ ಹೆಚ್ಚು ಮತ ಪಡೆದಿದೆ," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಉಪ ಚುನಾವಣೆ ಗೆಲುವು- ಸೋಲಿನ ಬಗ್ಗೆ ಸಮರ್ಥನೆ ಮಾಡಿಕೊಂಡರು.
"ಸಿ.ಎಂ. ಉದಾಸಿ ಸ್ಥಾನವನ್ನು ತಕ್ಷಣ ತುಂಬುವುದಕ್ಕೆ ನಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ. ಬಿಜೆಪಿಯಲ್ಲಿ ಒಳ ಜಗಳವಿಲ್ಲ, ಕಳೆದ ಬಾರಿ ಉದಾಸಿ ತೆಗೆದುಕೊಂಡಿದ್ದಕ್ಕಿಂತ ಹೆಚ್ಚು ಮತ ಬಿಜೆಪಿ ಪಡೆದಿದೆ. ನಮಗಿಂತ ಮಾನೆಯವರು ಜಾಸ್ತಿ ಮತ ತೆಗೆದುಕೊಂಡಿದ್ದಾರೆ ಅಷ್ಟೇ. ಗೆಲುವಿಗೆ ಮಾತ್ರ ನೂರಾರು ಜನ ಅಪ್ಪಂದಿರು, ಗೆಲುವು ಪಕ್ಷದ್ದು, ಸೋಲು ಪಕ್ಷದ್ದು. ಹಿಂದೆ ನಿಂತು ತುತ್ತೂರಿ ಊದುವವರು ಬಹಳ ಜನ ಇರುತ್ತಾರೆ. ಸೋಲು ಯಾವತ್ತೂ ಅನಾಥ. ನಾವು ಒಂದು ಪಕ್ಷವಾಗಿ ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸಮಾನ ಮನಸ್ಸಿನಿಂದ ಸ್ವೀಕಾರ ಮಾಡಿದ್ದೇವೆ. ನಮ್ಮದೇನಾದರೂ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ," ಎಂದರು.
"ಇನ್ನು ಇಂಧನದ ಬೆಲೆ ಇಳಿಕೆಯೂ ದೀಪಾವಳಿ ಗಿಫ್ಟ್ ಅಲ್ಲ, ಉಪ ಚುನಾವಣೆ ಗಿಫ್ಟ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ. ರವಿ ವ್ಯಂಗ್ಯವಾಡಿದ್ದು, ಕಳೆದ ಉಪ ಚುನಾವಣೆಯಲ್ಲಿ ಆರು ಇತ್ತು, ಈಗ ಒಂಭತ್ತು ಗೆದ್ದಿದ್ದೇವೆ. ಆ ಜನರ ಋಣ ತೀರಿಸುವಂತಹ ಪ್ರತಿ ಕೆಲಸವನ್ನು ಪ್ರಧಾನಮಂತ್ರಿ ಮೋದಿಯವರು ಮಾಡುತ್ತಿದ್ದಾರೆ."
"ಕಾಂಗ್ರೆಸ್ ಅಧಿಕಾರವಿರುವ ಮಹಾರಾಷ್ಟ್ರ, ರಾಜಸ್ಥಾನ, ಜಾರ್ಖಂಡ್, ಛತ್ತಿಸ್ಗಢ, ಪಂಜಾಬ್ನಲ್ಲಿ ಇಂಧನ ಬೆಲೆಯನ್ನು ಇಳಿಸಿಲ್ಲ. ಅವರಿಗೆ ಪೂರ್ತಿ ಸೋಲಿಸಿದ ಮೇಲೆ ಮಾತ್ರ ಸಾಧ್ಯವಾಗುತ್ತದೆ ಅನ್ನಿಸುತ್ತದೆ. ಪಂಜಾಬ್ ಸೇರಿದಂತೆ ಉಳಿದ ಎಲ್ಲಾ ರಾಜ್ಯಗಳಲ್ಲೂ ಸೋಲಿಸಬೇಕು. ಪಶ್ಚಿಮ ಬಂಗಾಳದಲ್ಲೂ ಆ ಸ್ಥಿತಿಗೆ ತಗೊಂಡು ಹೋಗಿ ನಿಲ್ಲಿಸಿದರೆ ಅವರಿಗೆ ಬುದ್ಧಿ ಬರುತ್ತದೆ," ಎಂದು ವಾಗ್ದಾಳಿ ನಡೆಸಿದರು.
"ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಯಡಿಯೂರಪ್ಪನವರು ನನಗಿಂತ ಮುಂಚೆ ಆರ್ಎಸ್ಎಸ್ ಸ್ವಯಂಸೇವಕರು. ಅವರನ್ನು ಬೇರೆ ಬಣ ಅಂತಾ ಹೇಳುತ್ತೀರಾ ಅಂದರೆ ನಿಮಗಿನ್ನೂ ಆರ್ಎಸ್ಎಸ್ ಬಗ್ಗೆ ಆಳವಾದ ಜ್ಞಾನ ಇದ್ದಂಗಿಲ್ಲ. ಕಾಂಗ್ರೆಸ್ನಲ್ಲಿ ಖರ್ಗೆ, ಪರಮೇಶ್ವರ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರದ್ದು ಒಂದು ಬಣ. ಕೆಳಗಡೆ ಮರಿ ಲೀಡರ್ಗಳದ್ದೆಲ್ಲ ಹಲವು ಬಣಗಳು, ಆ ಬಣಗಳದ್ದೇ ರಾಜಕಾರಣ. ಹಾಗಾಗಿ ಅವರು ಹಾಗೇ ಹೇಳುತ್ತಾರೆ," ಎಂದು ವ್ಯಂಗ್ಯವಾಡಿದರು.
ನಮ್ಮಲ್ಲಿ ಒಂದೇ ಕಮಲ ಬಣ, ಭಾಜಪ ಬಣ, ನಾವೆಲ್ಲರೂ ಭಾಜಪ. ಒಳಗೊಂದು, ಹೊರಗೊಂದು ಇಲ್ಲ. ನಾವೇನಿದ್ದರೂ ಕಮಲ ಪರವಾಗಿ ಓಟು ಕೇಳೋದು. ಒಂದೊಂದು ಚುನಾವಣೆಗೆ ಒಂದೊಂದು ಸಿಂಬಲ್ಗೆ ಏನಾದರೂ ಓಟು ಕೇಳಿದ್ದೀವಾ, ಕೇಳಿಲ್ಲ, ಏನಿದ್ದರೂ ನಮ್ಮದು ಕಮಲವೇ. ಬೇರೇ ಏನು ಇಲ್ಲ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಹಾಸನಾಂಬೆ ದರ್ಶನ ಮಾಡಿದ್ದೇವೆ. ಆ ತಾಯಿ ಸರ್ವರಿಗೂ ಮಂಗಳವನ್ನುಂಟು ಮಾಡಲಿ. ಭಾರತ ಬಲಶಾಲಿಯಾಗಲಿ, ಆ ಮೂಲಕ ಸನಾತನ ಧರ್ಮದ ಮೌಲ್ಯಗಳು ವಿಶ್ವದ ಎಲ್ಲೆಡೆ ಪಸರಿಸುವಂತಾಗಲಿ ಎಂದು ತಾಯಿಯ ಪಾದರವಿಂದಗಳಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಈ ವರ್ಷ ಮಳೆ ಚೆನ್ನಾಗಿ ಆಗಿದೆ. ಬೆಳೆಯು ಕೈ ಹಿಡಿದರೆ ರೈತ ಸಂತೃಪ್ತಿ ನಗುವನ್ನು ಬೀರಲು ಸಾಧ್ಯವಾಗುತ್ತದೆ. ಬೆಳೆಯೂ ಬರಬೇಕು, ಬೆಲೆಯೂ ಬರಬೇಕು ಆಗ ಮಾತ್ರ ಸಂತೃಪ್ತಿ ಆಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಭಿಪ್ರಾಯಪಟ್ಟರು.
Recommended Video