ಮಾಜಿ ಪ್ರಧಾನಿ ದೇವೇಗೌಡರ ಕುರಿತು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಪ್ರಬುದ್ಧ ಹೇಳಿಕೆ!
ಬೆಂಗಳೂರು, ಫೆ. 11: ಮಹತ್ವದ ಬೆಳವಣಿಗೆಯಲ್ಲಿ ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಜೆಡಿಎಸ್ ವರಿಷ್ಠ, ರಾಜಕೀಯ ಎದುರಾಳಿ ಎಚ್.ಡಿ. ದೇವೇಗೌಡ ಅವರ ಕುರಿತು ಪ್ರಬುದ್ಧ ಹೇಳಿಕೆ ಕೊಟ್ಟಿದ್ದಾರೆ.
Recommended Video
ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾಗಿದ್ದ ಯೋಜನೆಗಳನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಗೆತನ ಹಾಗೂ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತ ಕಾಮಗಾರಿಗಳಿಗೆ ತಡೆ ನೀಡಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಆರೋಪಿಸಿದ್ದರು. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿ 25, 2021 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಎದುರು ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರೊಂದಿಗೆ ಧರಣಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದರು. ಆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕೃತವಾಗಿ ಪತ್ರವನ್ನೂ ನೀಡಿದ್ದರು. ಪ್ರಮುಖವಾಗಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಯೋಜನೆಗೆ ಸಿಎಂ ಯಡಿಯೂರಪ್ಪ ಅವರು ತಡೆ ನೀಡಿದ್ದಾರೆಂದು ಆರೋಪಿಸಿದ್ದರು.
ಜೆಡಿಎಸ್ ಒತ್ತಡಕ್ಕೆ ಮಣಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಭಟನೆ ಮಾಡದಂತೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದರು. ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನೂ ಕೊಟ್ಟಿದ್ದರು. ಅದಾದ ಬಳಿಕ ಇದೀಗ ಹಾಸನ ಶಾಸಕ ಪ್ರೀತಮ್ ಗೌಡ ಅವರು ದೇವೇಗೌಡರ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಅನುದಾನ ಬಿಡುಗಡೆ ಕುರಿತು...
ಹಾಸನ ವಿಮಾನ ನಿಲ್ದಾಣ ನಿರ್ಮಾಣ ಕುರಿತಂತೆ ಶಾಸಕ ಪ್ರೀತಮ್ ಗೌಡ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಸಮಗ್ರ ಕರ್ನಾಟಕ ಅಭಿವೃದ್ಧಿ ಸಿಎಂ ಯಡಿಯೂರಪ್ಪ ಅವರ ಆಶಯ. ಅವರಿಗೆ ಎಲ್ಲ 224 ಕ್ಷೇತ್ರಗಳ ಅಭಿವೃದ್ಧಿ ಮುಖ್ಯವಾಗಿರುತ್ತದೆ. ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪ ಅವರು ಒತ್ತು ನೀಡುತ್ತಿದ್ದಾರೆ. ವಿರೋಧ ಪಕ್ಷ, ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಬೇಕು. ಹಾಗಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವುದನ್ನು ವಿವರಿಸಿದ್ದಾರೆ.
ದೇವೇಗೌಡರ ಬಗ್ಗೆ ಅಚ್ಚರಿಯ ಹೇಳಿಕೆ
ಇದೇ ಸಂದರ್ಭದಲ್ಲಿ ದೇವೇಗೌಡರ ಕುರಿತು ಅಚ್ಚರಿಯೆ ಹೇಳಿಕೆಯನ್ನು ಪ್ರೀತಮ್ ಗೌಡ ಅವರು ಕೊಟ್ಟಿದ್ದಾರೆ. ಹಾಸನ ವಿಮಾನ ನಿಲ್ದಾಣ ಸಿಎಂ ಯಡಿಯೂರಪ್ಪ ಅವರ ಮುತುವರ್ಜಿಯಿಂದ ಆಗಿದೆ. ಯಡಿಯೂರಪ್ಪ ಮಾಡಿದ್ದಾರೆ ಎಂದರೆ ಆ ಕ್ರೆಡಿಟ್ ನನಗೂ ಸಲ್ಲುತ್ತದೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಅವರು ಇಡೀ ದೇಶದ ಆಸ್ತಿ, ಅವರ ಬಗ್ಗೆ ಮಾತನಾಡುವುದಿಲ್ಲ. ಆದರೆ ಶಾಸಕ ಎಚ್.ಡಿ. ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜಕೀಯ ಮಾಡುತ್ತಿರುತ್ತಾರೆ ಎಂದಿದ್ದಾರೆ.
ಎದುರಿಸುವ ಶಕ್ತಿ ನನಗಿದೆ
ರೇವಣ್ಣ ಹಾಗೂ ಪ್ರಜ್ವಲ್ ಅವರನ್ನು ಎದುರಿಸುವ ಶಕ್ತಿ ನನಗಿದೆ. ರೇವಣ್ಣ ಅವರು ಹಿರಿಯ ರಾಜಕಾರಣಿ ಆಗಿರುವುದರಿಂದ ಕೆಲಸದ ಕ್ರೆಡಿಟ್ ಅವರಿಗೂ ಸಲ್ಲಲಿ. 224 ಕ್ಷೇತ್ರಗಳನ್ನು ಸರಿ ಸಮನಾಗಿ ನೋಡುವ ಜವಾಬ್ದಾರಿ ಮುಖ್ಯಮಂತ್ರಿಗಳಿಗಿರುತ್ತದೆ. ಕೇವಲ ರಾಜಕೀಯಕ್ಕಾಗಿ ನೋಡಬೇಕೇ ವಿನಃ, ಆಡಳಿತದಲ್ಲಿ ಕ್ಷೇತ್ರಗಳನ್ನು ನೋಡಬಾರದು. ಯಡಿಯೂರಪ್ಪ ಅವರು ಕೇವಲ ಬಿಜೆಪಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ. ಎಲ್ಲಾ ಪಕ್ಷ ಶಾಸಕರಿಗೂ ಅವರೇ ಮುಖ್ಯಮಂತ್ರಿಗಳು ಎಂದು ಪ್ರೀತಮ್ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನು, ರೇವಣ್ಣ ನಗಣ್ಯ!
ಹಾಸನದ ವಿಮಾನ ನಿಲ್ದಾಣ ಯಡಿಯೂರಪ್ಪರ ದಿಟ್ಟ ನಿರ್ಧಾರದಿಂದ ಆಗಿದ್ದು. ಅದರಲ್ಲಿ ಪ್ರೀತಮ್ ಗೌಡ ಆಗಲಿ, ರೇವಣ್ಣ ಆಗಲಿ ಕೇವಲ ನಗಣ್ಯ. ಹಾಸನ ಜಿಲ್ಲೆ ಮೇಲೆ ಯಡಿಯೂರಪ್ಪರಿಗೆ ವಿಶೇಷವಾದ ಕಾಳಜಿ ಇದೆ. ಹೀಗಾಗಿ ಅವರ ಫಲದಿಂದ ಹಾಸನ ಜಿಲ್ಲೆಗೆ ವಿಮಾನ ನಿಲ್ದಾಣ ಬಂದಿದೆ. ಇದರಲ್ಲಿ ಏನಾದರೂ ಕ್ರೆಡಿಟ್ ತಗೋಬೇಕು ಅಂದರೆ ರೇವಣ್ಣರಿಗೂ ಕೊಡೋಣ. ಅವರ ಕಾಲದಲ್ಲಿ ಮಾಡೋಕೆ ಆಗದೇ ಇರೋದನ್ನು ಈಗ ಯಡಿಯೂರಪ್ಪ ಮಾಡಿದ್ದಾರೆ. ಅದೂ ದೇವೇಗೌಡರ ಮನವಿ ಮೇರೆಗೆ ಮಾಡಿರೋದು. ದೇವೇಗೌಡರು ಕೇವಲ ಒಂದು ಪಕ್ಷಕ್ಕೆ ಸೀಮಿತ ಅಲ್ಲ, ಅವರು ಒಂದು ನಾಡಿನ ಆಸ್ತಿ. ಅವರ ಸಲಹೆಯಂತೆ ನಾನು ಯಡಿಯೂರಪ್ಪ ಜೊತೆ ಚರ್ಚಿಸಿ, ವಿಮಾನ ನಿಲ್ದಾಣ ಪ್ರಾರಂಭ ಆಗುತ್ತಿದೆ. ಹೀಗಾಗಿ ದೇವೇಗೌಡರ ಬಗ್ಗೆ ರಾಜಕಾರಣ ಮಾಡೋದು ಬೇಡ ಎಂದು ಮತ್ತೊಮ್ಮೆ ಮನವಿ ಮಾಡಿದರು.