ಜಾವಗಲ್ ಶ್ರೀನಾಥ್ಗೆ ಬಿಜೆಪಿ ಆಹ್ವಾನ, ಹಾಸನದಿಂದ ಟಿಕೆಟ್ ಸಾಧ್ಯತೆ
ಹಾಸನ, ಅಕ್ಟೋಬರ್ 24: ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿಯು ಸೆಲಿಬ್ರಿಟಿಗಳನ್ನು ಪಕ್ಷಕ್ಕೆ ಸೆಳೆದುಕೊಂಡು ಟಿಕೆಟ್ ನೀಡುವ ಯತ್ನ ಮಾಡುತ್ತಿದೆ.
ರಾಷ್ಟ್ರಮಟ್ಟದಲ್ಲಷ್ಟೆ ಅಲ್ಲದೆ ಎಲ್ಲ ರಾಜ್ಯಗಳಲ್ಲಿಯೂ ಅಲ್ಲಿ ಖ್ಯಾತರಾಗಿರುವ ಕ್ರೀಡಾಪಟುಗಳು, ಸಿನಿ ತಾರೆಯರು, ಇನ್ನಿತರೆ ಕ್ಷೇತ್ರದ ಪ್ರಮುಖರನ್ನು ಪಕ್ಷಕ್ಕೆ ಕರೆತಂದು 2019ರ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡುವ ತಂತ್ರ ಹೂಡಿದೆ.
ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಕರ್ನಾಟಕ ಜಾವಗಲ್ ಶ್ರೀನಾಥ್ ಅವರನ್ನು ಈಗಾಗಲೇ ಪಕ್ಷಕ್ಕೆ ಆಹ್ವಾನಿಸಲಾಗಿದೆ. ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಜಾವಗಲ್ ಶ್ರೀನಾಥ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
20 ವರ್ಷ ಕಿರಿಯರಾದ ಯೋಗಿ ಕಾಲಿಗೆ ನಮಸ್ಕರಿಸಿದ 66 ವರ್ಷದ ರಮಣ್ ಸಿಂಗ್
ಹಾಸನ ಜಿಲ್ಲೆಯ ಜಾವಗಲ್ನವರಾಗಿರುವ ಶ್ರೀನಾಥ್ ಅವರನ್ನು ಬಿಜೆಪಿಯು ಪಕ್ಷಕ್ಕೆ ಕರೆದುಕೊಂಡು ಹಾಸನದಿಂದಲೇ ಲೋಕಸಭೆ ಚುನಾವಣೆಗೆ ನಿಲ್ಲಿಸಲು ತಯಾರಿ ನಡೆಸಿದೆ.
ಶ್ರೀನಾಥ್ ನಿರ್ಧಾರ ಏನು?
ಜಾವಗಲ್ ಶ್ರೀನಾಥ್ ಅವರು ಈ ಬಗ್ಗೆ ಇನ್ನೂ ನಿರ್ಣಯ ತಿಳಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಬಹಿರಂಗ ಹೇಳಿಕೆಗಳನ್ನೂ ಶ್ರೀನಾಥ್ ಅವರು ನೀಡಿಲ್ಲ ಆದರೆ ರಾಜ್ಯದ ಹೆಮ್ಮೆಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಶ್ರೀನಾಥ್ ಚುನಾವಣೆಗೆ ನಿಂತಲ್ಲಿ ಇತರೆ ಪಕ್ಷಗಳಿಗೆ ತಲೆ ಬಿಸಿ ಆಗುವುದಂತಲೂ ಸತ್ಯ.
ಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿ
ರಾಹುಲ್ ದ್ರಾವಿಡ್ಗೂ ಗಾಳ
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಹುಲ್ ದ್ರಾವಿಡ್ ಅವರಿಗೂ ಬಿಜೆಪಿ ಗಾಳ ಹಾಕಲಾಗಿತ್ತು ಎಂಬ ಸುದ್ದಿ ಇತ್ತು. ಆದರೆ ದ್ರಾವಿಡ್ ಅವರು ಸ್ಪಷ್ಟವಾಗಿ ನಿರಾಕರಿಸಿದರು ಎನ್ನಲಾಗಿದೆ. ಅದೇ ಸಮಯದಲ್ಲಿ ಮೈಸೂರಿನ ಮಹಾರಾಜ ಯಧುವೀರ್ ಅವರನ್ನೂ ಬಿಜೆಪಿ ಸಂಪರ್ಕಿಸಿತ್ತು. ಆದರೆ ಅವರು ಸಹ ರಾಜಕೀಯದ ಬಗ್ಗೆ ನಿರಾಸಕ್ತಿ ತೋರಿದ್ದರು.
ಧೋನಿ, ಗಂಭೀರ್ -ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು!
ಏಕೀ ತಂತ್ರ ಅನುಸರಿಸುತ್ತಿದೆ ಬಿಜೆಪಿ?
ಎಲ್ಲಿ ಬಿಜೆಪಿಯ ಪ್ರಭಾವ ಕಡಿಮೆ ಇರುತ್ತದೆಯೋ ಆ ಕ್ಷೇತ್ರಗಳಲ್ಲಿ ಖ್ಯಾತನಾಮರನ್ನು ಚುನಾವಣೆಗೆ ನಿಲ್ಲಿಸಿ ಅವರ ಹೆಸರಿನ ಬಲದಿಂದ ಬಿಜೆಪಿಯನ್ನು ಗೆಲ್ಲಿಸುವ ತಂತ್ರ ಬಿಜೆಪಿಯದ್ದು. ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಉಳಿದ ರಾಜ್ಯಗಳನ್ನೂ ಈ ತಂತ್ರವನ್ನು ಬಿಜೆಪಿ ಅನುಸರಿಸಲು ಮುಂದಾಗಿದೆ.
ಯಾರ್ಯಾರಿಗೆ ಆಹ್ವಾನ?
ಕ್ರಿಕೆಟಿಗರಾದ ಎಂಎಸ್.ಧೋನಿ, ಗೌತ್ ಗಂಭೀರ್ ಅವರುಗಳನ್ನು ಬಿಜೆಪಿಗೆ ಸೆಳೆಯಲು ಇತ್ತೀಚೆಗಷ್ಟೆ ಬಿಜೆಪಿ ಯತ್ನಿಸಿದೆ ಎಂಬ ಸುದ್ದಿ ಬಂದಿತ್ತು. ದೆಹಲಿಯಿಂದ ಗೌತಮ್ ಗಂಭೀರ್ ಹಾಗೂ ಜಾರ್ಖಂಡ್ನಿಂದ ಧೋನಿಗೆ ಟಿಕೆಟ್ ನೀಡುವ ಭರವಸೆಯನ್ನೂ ನೀಡಲಾಗಿದೆಯಂತೆ.
'ಸತ್ತಾ ಕೆ ಲಿಯೇ ಸಂಪರ್ಕ್'
ಸೆಲೆಬ್ರಿಟಿಗಳನ್ನು ಸೆಳೆಯಲೆಂದು ಈಗಾಗಲೇ ಅಮಿತ್ ಶಾ ನೇತೃತ್ವದಲ್ಲಿ 'ಸತ್ತಾ ಕೇಲಿಯೆ ಸಂಪರ್ಕ್' ಹೆಸರಿನಲ್ಲಿ ಸೆಲೆಬ್ರಿಟಿಗಳನ್ನು ಭೇಟಿ ಮಾಡಿ ಬಿಜೆಪಿಯ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸುವ ಕಾರ್ಯಕ್ರಮ ಮಾಡಲಾಗಿದೆ. ಅದೇ ಕಾರ್ಯಕ್ರಮವನ್ನು ಮಾರ್ಗದರ್ಶಿಯಾಗಿಟ್ಟುಕೊಂಡು ಸೆಲಿಬ್ರಿಟಿಗಳನ್ನು ಪಕ್ಷಕ್ಕೆ ಸೆಳೆಯಲಾಗುತ್ತಿದೆ.