ಪೌರಕಾರ್ಮಿಕ ದಂಪತಿಯ ಪಾದ ತೊಳೆದು ನಾಮಪತ್ರ ಸಲ್ಲಿಸಿದ ಎ ಮಂಜು
ಹಾಸನ, ಮಾರ್ಚ್ 25: ಜೆಡಿಎಸ್ ನ ಭದ್ರಕೋಟೆ, ಜೆಡಿಎಸ್ ವರಿಷ್ಠ ದೇವೇಗೌಡರ ತವರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಶಕ್ತಿ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾದರಿಯಾಗಿಸಿಕೊಂಡ ಅವರು, ಸೋಮವಾರ ಭಾರೀ ಜನಸ್ತೋಮದ ಜೊತೆ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಪೌರಕಾರ್ಮಿಕ ದಂಪತಿಯ ಪಾದ ತೊಳೆದಿದರು.
ಆ ನಂತರ ಹಾಸನದ ಹಲವು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಅಕ್ರಂ ಪಾಷಾ ಅವರಿಗೆ ಎ ಮಂಜು ಅವರು ನಾಮಪತ್ರ ಸಲ್ಲಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾಮಪತ್ರ ಸಲ್ಲಿಕೆ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮಂಜು, ಜೆಡಿಎಸ್ ಅಭ್ಯರ್ಥಿಯ ವಯಸ್ಸು 27, ಆತ ಚುನಾವಣಾ ಆದಾಯ ಘೋಷಣೆಯಲ್ಲಿ 9 ಹಸುಗಳನ್ನು ಸಾಕಿರುವುದಾಗಿ ನಮೂದಿಸಿದ್ದಾರೆ. ಅವರಿಗೆ 9 ಕೋಟಿ ಆಸ್ತಿ ಇದೆ, ಸಾಲ ಕೊಟ್ಟಿದ್ದಾರೆ. ಯಾವುದೇ ಕೆಲಸ ಮಾಡದೆ ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ನಾಲ್ಕೂವರೆ ಎಕರೆ ಜಮೀನು ಹೊಂದಿರುವ ಕುರಿತು ಮಾಹಿತಿ ನೀಡಿದ್ದು, ನಾಲ್ಕು ಸಾವಿರ ಕೋಟಿ ಹಣ ಮಾಡಲು ಚುನಾವಣೆಯಲ್ಲಿ ಗೆಲ್ಲಿಸಬೇಕೇ ಎಂದು ಪ್ರಶ್ನಿಸಿದರು. ಮತದಾರರು ಪ್ರಧಾನಿ ಮೋದಿಯವರ ಕೈ ಬಲ ಪಡಿಸಲು ಬಿಜೆಪಿ ಬೆಂಬಲಿಸಬೇಕು ಎಂದು ಅಭಿಮಾನಿಗಳಲ್ಲಿ ಕೋರಿದರು.
ಸೂಕ್ತ ಉತ್ತರ ಕೊಡುವ ಸಮಯ ಬಂದಿದೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ದೇಶದ ಹಿತ ದೃಷ್ಠಿಯಿಂದ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಪಕ್ಷಕ್ಕೆ ಮತ ನೀಡಿ, ಹಾಸನ ಜಿಲ್ಲೆಯ ಜನರು ನೊಂದಿದ್ದಾರೆ ಇದಕ್ಕೆಲ್ಲ ಸೂಕ್ತ ಉತ್ತರ ಕೊಡುವ ಸಮಯ ಬಂದಿದೆ. ಅದಕ್ಕಾಗಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕರ ಪಾದ ತೊಳೆದು ನಾಮಪತ್ರ ಸಲ್ಲಿಸಿದ ಹಾಸನ ಬಿಜೆಪಿ ಅಭ್ಯರ್ಥಿ
ಹಾಸನದಲ್ಲಿ ಹಣ ಬಲ, ಹೆಂಡ, ತೋಳು ಬಲವಿದೆ
ಹಾಸನದಲ್ಲಿ ಹಣ ಬಲ, ಹೆಂಡ, ತೋಳು ಬಲ, ಮತ್ತು ಅಧಿಕಾರ ಬಲದಿಂದ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುವ ತಂತ್ರ ನಡೆಯುತ್ತಿದೆ. ಇದಕ್ಕೆಲ್ಲ ಈ ಚುನಾವಣೆಯಲ್ಲಿ ಕಡಿವಾಣ ಹಾಕಬೇಕೆಂದು ನೆರೆದ ಕಾರ್ಯಕರ್ತರಿಗೆ ಕರೆ ನೀಡಿದರಲ್ಲದೆ, ಈ ಬಾರಿ ಮಂಡ್ಯ, ತುಮಕೂರು ಮತ್ತು ಹಾಸನದ ಮತದಾರರು ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ. ಹಾಸನದಿಂದ ಎ.ಮಂಜು, ಮಂಡ್ಯದಿಂದ ಸುಮಲತಾ, ತುಮಕೂರಿನಿಂದ ಬಸವರಾಜು ಅವರನ್ನು ಗೆಲ್ಲಿಸುವಂತೆ ಬಿಎಸ್ ವೈ ಕರೆ ನೀಡಿದರು.
ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ
ಶಾಸಕ ಪ್ರೀತಂ ಗೌಡ ಮಾತನಾಡಿ, ಹಾಸನವನ್ನು ಒಂದು ಕುಟುಂಬಕ್ಕೆ ಬರೆದು ಕೊಟ್ಟಿಲ್ಲ. ನಾನು ಕೂಡ ಹಾಸನದ ಗೌಡನೆ, ಎ.ಮಂಜು ಕೂಡ ಹಾಸನದ ಗೌಡರೆ, ನಮ್ಮ ಮನೆಗೆ ಕಲ್ಲು ಹೊಡೆದವರನ್ನು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಹೇಳಿದರು.
ಜೆಡಿಎಸ್ ಪಾಳಯದಲ್ಲಿ ನಡುಕ
ದೇವೇಗೌಡರು ಮಗ, ಮೊಮ್ಮಕ್ಕಳಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ ಎಂದ ಪ್ರೀತಂ ಗೌಡ, ಕುಟುಂಬ ರಾಜಕಾರಣಕ್ಕೆ ಮುಕ್ತಿ ಹಾಡುವ ನಿಟ್ಟಿನಲ್ಲಿಂದು ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ಮೂಲಕ ಇದೀಗ ಜೆಡಿಎಸ್ ಪಾಳಯದಲ್ಲಿ ನಡುಕ ಉಂಟಾಗಿದೆ ಎಂದು ಹೇಳಿದರು.