ಜೂನ್ 24 ರಿಂದ ಶ್ರವಣಬೆಳಗೊಳದಲ್ಲಿ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ
ಹಾಸನ ಜೂ.21: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.
ಜೂನ್ 24, 25 ಹಾಗೂ 26 ರಂದು ಚಾವುಂಡರಾಯ ಸಭಾಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರ ಸಾನಿಧ್ಯದಲ್ಲಿ ಹಾಗೂ ಡಾ.ಷ.ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸಮ್ಮೇಳನದ ಹೆಸರಲ್ಲಿ ರಾಜಕಾರಣದ ಮೈಲೇಜ್ ಗೆ ಸಿದ್ದು 8 ಕೋಟಿ ಖರ್ಚು: ಎಚ್ ಡಿಕೆ
ಜೂನ್ 24 ರಂದು ಬೆಳಗ್ಗೆ 9.30 ರಿಂದ 12.30ರ ವರೆಗೆ ವಿಶೇಷ ಅಹ್ವಾನಿತರಿಂದ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಲಿದೆ. ಸಂಜೆ 4 ರಿಂದ 6 ರವರೆಗೆ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬಾಹುಬಲಿ ವಿಶ್ವಶಾಂತಿ ಸಂದೇಶ ಕವಿಗೋಷ್ಠಿ ಜರುಗಲಿದೆ.
25 ರಂದು ಬೆಳಗ್ಗೆ 9.15 ಕ್ಕೆ ಚಂದ್ರಗಿರಿ ಬೆಟ್ಟ ಮಹಾದ್ವಾರದಿಂದ ಶ್ರವಣಬೆಳಗೊಳ ಮುಖ್ಯರಸ್ತೆ, ವಿಂಧ್ಯಗಿರಿ ಮಹಾದ್ವಾರ ಮಾರ್ಗವಾಗಿ ಚಾವುಂಡರಾಯ ಸಭಾಮಂಟಪದ ವರೆಗೆ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
10.30ಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೆಗೌಡರು ಉದ್ಘಾಟನೆ ನೆರವೇರಿಸುವರು. ಡಾ.ಷ.ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪದ್ಮರಾಜ ದಂಡಾವತಿ, ಹಂಪ ನಾಗರಾಜಯ್ಯ, ಡಾ.ಸಿ.ಪಿ.ಕೃಷ್ಣಕುಮಾರ್, ಹಿರಿಯ ಸಾಹಿತಿ ಚಂದ್ರಶೇಖರ ಪಾಡೀಲ, ಪ್ರೊ ಮಲ್ಲೇಪುರಂ ಜಿ.ವೆಂಕಟೇಶ್, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ತು ಸದಸ್ಯ ಎಂ.ಎ.ಗೋಪಾಲಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2.00 ಗಂಟೆಗೆ ಡಾ.ಪುರೋಷತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ಹಳೆಗನ್ನಡ ಸಾಹಿತ್ಯ : ಮರುಸೃಷ್ಠಿಯ ಸವಾಲುಗಳು ಇದರ ಬಗ್ಗೆ ಗೋಷ್ಠಿ ನಡೆಯಲಿದ್ದು, ಸಂಜೆ 4.15 ಕ್ಕೆ ಡಾ.ಪಿ.ವಿ.ನಾರಾಯಣ ಅವರ ಅಧ್ಯಕ್ಷತೆಯಲ್ಲಿ 9 ಮತ್ತು 10 ನೇ ಶತಮಾನದ ಸಾಹಿತ್ಯದ ಅನನ್ಯತೆ ಇದರ ಬಗ್ಗೆ ಗೋಷ್ಠಿ ನಡೆಯಲಿದೆ.
ನಂತರ 6.15 ರಿಂದ ರೋಹನ್ ಅಯ್ಯರ್ ಅವರಿಂದ ಭಾವಗೀತೆಗಳು ಮತ್ತು ಬೆಂಗಳೂರಿನ ಸಮುದಾಯ ತಂಡದಿಂದ ಪ್ರಮೋದ್ ಶಿಗ್ಗಾಂವ ಅವರ ನಿರ್ದೇಶನದಲ್ಲಿ ಪಂಪ ಭಾರತ ನಾಟಕ ನಡೆಯಲಿದೆ.
26 ರಂದು ಬೆಳಗ್ಗೆ 10 ಗಂಟೆಗೆ ಡಾ.ಶ್ರೀಕಂಠ ಕೂಡಿಗೆ ಅವರ ಅಧ್ಯಕ್ಷತೆಯಲ್ಲಿ 11 ನೇ ಶತಮಾನದ ಸಾಹಿತ್ಯ:ಹಿಂಸೆ ಅಹಿಂಸೆಗಳ ನಿರ್ವಹಣೆ ವಿಷಯದ ಕುರಿತು ಗೋಷ್ಠಿ ಜರುಗಲಿದೆ. 12 ಕ್ಕೆ ಡಾ.ಎಸ್.ಪಿ.ಪದ್ಮಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಶಾಸ್ತ್ರ ಕೃತಿಗಳು : ಮರು ಓದು ವಿಷಯದ ಕುರಿತು ಗೋಷ್ಠಿ ಜರುಗಲಿದೆ.
ಮಧ್ಯಾಹ್ನ 2.30 ಕ್ಕೆ ಡಾ.ಎಂ.ಎಸ್.ಆಶಾದೇವಿ ಅವರ ಅಧ್ಯಕ್ಷತೆಯಲ್ಲಿ ಹಳಗನ್ನಡ ಸಾಹಿತ್ಯದ ಪ್ರಸ್ತುತತೆ ಕುರಿತು ವಿಷಯ ಮಂಡನೆಯಾಗಲಿದ್ದು, ಸಂಜೆ 4 ಕ್ಕೆ ಪಂಪ, ರನ್ನ ಇವರ ಹಳಗನ್ನಡವನ್ನು ಡಾ.ಶಾಂತಿನಾಥ ದಿಬ್ಬದ ಓದಲಿದ್ದಾರೆ.
4.30 ಕ್ಕೆ ಡಾ.ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನೆರವೇರಲಿದೆ.
ಲೋಕೊಪಯೋಗಿ ಸಚಿವ ಎಚ್.ಡಿ.ರೇವಣ್ಣ, ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷ ಡಾ.ಷ.ಶೆಟ್ಟರ್ ಮತ್ತು ಡಾ.ಸಿದ್ದಲಿಂಗಯ್ಯ ಭಾಗವಹಿಸಲಿದ್ದಾರೆ.
ಸಂಜೆ 6.30 ರಿಂದ ಶಿಗ್ಗಾವಿಯ ಶ್ರೀ ಸನ್ಮತಿ ಮಹಿಳಾ ಜಾನಪದ ಕಲಾ ತಂಡ ಮತ್ತು ಶ್ರವಣಬೆಳಗೊಳ ಅಂಬಿಕಾ ಜಾನಪದ ಕಲಾತಂಡದ ವತಿಯಿಂದ ಜಾನಪದ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.