ಬೇಲೂರಲ್ಲಿ ಜಾನುವಾರಿಗೆ ಮೇವಾಗುತ್ತಿದೆ ಎಕರೆಗಟ್ಟಲೆ ಎಲೆಕೋಸು ಬೆಳೆ
ಹಾಸನ, ಏಪ್ರಿಲ್ 07: ಬೇಸಿಗೆ ವೇಳೆಗೆ, ಅದರಲ್ಲೂ ಯುಗಾದಿ ಸಂದರ್ಭದಲ್ಲಿ ಬೆಳೆ ಫಸಲಿಗೆ ಬಂದರೆ ಒಂದಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳಬಹುದೆಂದು ನಂಬಿದ್ದ ರೈತರು ಇದೀಗ ಕೊರೊನಾದ ಹೊಡೆತಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದಾರೆ.
Recommended Video
ಈಗಾಗಲೇ ಹೂವು, ಟೊಮೆಟೊ, ಕಲ್ಲಂಗಡಿ ಬೆಳೆದ ರಾಜ್ಯದ ಹಲವು ರೈತರು ಮಾರುಕಟ್ಟೆಗೆ ಸಾಗಿಸಲಾಗದೆ, ಸಾಗಿಸಿದರೂ ಬೇಡಿಕೆಯಿಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸಾಮಾನ್ಯವಾಗಿ ವಾತಾವರಣಕ್ಕೆ ತಕ್ಕಂತೆ ಉತ್ತಮವಾಗಿ ಮತ್ತು ಬೇಡಿಕೆಯಲ್ಲಿರುವ ಬೆಳೆಯನ್ನು ರೈತರು ಬೆಳೆಯುವುದು ವಾಡಿಕೆ. ಈ ನಡುವೆ ಕೆಲವು ರೈತರು ಸಾಮೂಹಿಕವಾಗಿ ಒಂದೇ ಬೆಳೆಯನ್ನು ಬಯಲಲ್ಲಿ ಬೆಳೆಯುತ್ತಾರೆ. ಅವು ಎಲ್ಲವೂ ಏಕ ಸಮಯಕ್ಕೆ ಕೊಯ್ಲಿಗೆ ಬರುವುದರಿಂದ ಫಸಲಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯೇ ಬೇರೆಯಾಗಿದೆ.
ಎಲೆಕೋಸು ಜಮೀನಿಗೆ ಜಾನುವಾರು ಮೇಯಿಸಲು ಬಿಟ್ಟರು
ಕೊರೊನಾ ಸೋಂಕಿನ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಕೃಷಿಕ ಬಾಬು ಎಂಬುವರು ಎಲೆಕೋಸು ಬೆಳೆದು ಅದನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಕೈ ಚೆಲ್ಲಿ ಕುಳಿತಿದ್ದಾರೆ. ಎಲೆಕೋಸು ಬೆಳೆದ ಜಮೀನಿಗೆ ಜಾನುವಾರುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಈ ದೃಶ್ಯವೇ ಕಣ್ಣೀರು ತರಿಸುವಂತಿದೆ.
'ರೈತರಿಗೆ ಆತಂಕ ಬೇಡ, ಬಿತ್ತನೆ ಬೀಜ-ಗೊಬ್ಬರದ ದಾಸ್ತಾನು ಇದೆ'
ಲಾಭದ ಲೆಕ್ಕಾಚಾರ ಕೈಕೊಟ್ಟಿತು
ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿರುವ ಹೆಚ್ಚಿನ ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಯಾವ ತಿಂಗಳನಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಲಾಭ ನಷ್ಟಗಳ ಅವಲೋಕಿಸಿ ಬೆಳೆಯನ್ನು ಬೆಳೆಯುತ್ತಾರೆ. ಅದರಂತೆ ಈ ಬಾರಿ ರೈತ ಬಾಬು ಅವರು ಎಲೆಕೋಸು ಬೆಳೆಯನ್ನು ಬೆಳೆದಿದ್ದರು. ಯುಗಾದಿ ವೇಳೆಗೆ ಫಸಲು ಬಂದರೆ ಒಂದಷ್ಟು ಲಾಭ ಪಡೆಯಬಹುದು ಎಂಬ ಲೆಕ್ಕಾಚಾರ ಅವರದ್ದಾಗಿತ್ತು. ಆದರೆ ಕೊರೊನಾದಿಂದಾಗಿ ಅವರ ಲೆಕ್ಕಾಚಾರವೇ ತಲೆಕೆಳಗಾಗಿದೆ.
ಸಮೃದ್ಧಿಯಾಗಿ ಫಲ ಕೊಟ್ಟಿದ್ದ ಎಲೆಕೋಸು
ಇದೀಗ ಸಮೃದ್ಧಿಯಾಗಿ ಬೆಳೆದಿದ್ದ ಎಲೆಕೋಸು ಮಾರುಕಟ್ಟೆಯಿಲ್ಲದೆ ಜಾನುವಾರು ಮತ್ತು ಕುರಿ, ಆಡುಗಳಿಗೆ ಮೇವಾಗಿ ಬಳಕೆಯಾಗುತ್ತಿರುವುದು ಬೇಸರದ ಸಂಗತಿ. ರೈತ ಬಾಬು ಅವರು ಸಹಸ್ರಾರು ರೂಪಾಯಿ ಖರ್ಚು ಮಾಡಿದ್ದಾರೆ. ನರ್ಸರಿಗಳಲ್ಲಿ ಉತ್ತಮ ಎಲೆಕೋಸಿನ ಸಸಿಗಳನ್ನು ನಾಟಿ ಮಾಡುವ ಮುನ್ನ ಐದಾರು ಬಾರಿ ಉಳುಮೆಯಿಂದ ಭೂಮಿ ಹದ ಮಾಡಿಕೊಂಡು, ಅದಕ್ಕೆ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ರಾಸಾಯನಿಕ ಗೊಬ್ಬರ ಹಾಕಿ, ಕೂಲಿ ನೀಡಿ ಹಗಲು-ರಾತ್ರಿ ಎನ್ನದೆ ಕೊಳೆವೆ ಬಾವಿಯಿಂದ ನೀರು ಹಾಯಿಸಿ ಕಷ್ಟಪಟ್ಟು ಬೆಳೆ ಬೆಳೆದಿದ್ದರು. ಅದು ಫಸಲಿಗೂ ಬಂದಿತ್ತು.
ಬೆಳೆದ ಸೀಬೆಯನ್ನೆಲ್ಲಾ ಮಂಗ, ನವಿಲುಗಳಿಗೆ ಕೊಟ್ಟುಬಿಟ್ಟ ಕೋಲಾರ ರೈತ
ರೈತನಿಗೆ ಬರೆ ಎಳೆಯುತ್ತಿರುವ ಕೊರೊನಾ
ಕೊರೊನಾ ಲಾಕ್ ಡೌನ್ ಆಗಿದ್ದರಿಂದ ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಜಮೀನಿನಲ್ಲಿಯೇ ಬಿಡುವಂತಾಗಿದೆ. ಸಾಮಾನ್ಯವಾಗಿ ಎಲೆಕೋಸನ್ನು ಗೋಬಿಮಂಚೂರಿ, ಫ್ರೈಡ್ ರೈಸ್ ಮುಂತಾದ ಆಹಾರದ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಆದರೆ ಈಗ ಲಾಕ್ ಡೌನ್ ನಿಂದಾಗಿ ಎಲ್ಲ ಹೋಟೆಲ್, ಫಾಸ್ಟ್ ಫುಡ್ ಬಂದ್ ಆಗಿವೆ. ಇದರ ಹೊಡೆತ ಎಲೆಕೋಸು ಬೆಳೆದ ರೈತನ ಮೇಲೆ ನೇರವಾಗಿ ಬಿದ್ದಿದೆ. ಇದು ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ರೈತನಿಗೆ ಬರೆ ಎಳೆದಂತಾಗಿದೆ.