ಮಗುವಿನ ಹೃದಯಕ್ಕೆ ಸ್ಪಂದಿಸಿದ ಜನ; ಮಂಗಳೂರಿನಿಂದ ಝೀರೊ ಟ್ರಾಫಿಕ್
Recommended Video
ಹಾಸನ, ಫೆಬ್ರವರಿ 06: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಮಗುವನ್ನು ಇಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಬರಲಾಗುತ್ತಿದೆ.
40 ದಿನದ ಸೈಫುಲ್ ಅಝ್ಮಾನ್ ಎಂಬ ಮಗು ಹೃದಯ ಕಾಯಿಲೆಯಿಂದ ಬಳಲುತ್ತಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಐಸಿಯು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬರಲಾಗುತ್ತಿದೆ.
ಮಗುವಿನ ಜೀವ ರಕ್ಷಣೆಗೆ ಬೆಳಗಾವಿಯಲ್ಲಿ ಝೀರೋ ಟ್ರಾಫಿಕ್
ಇಂದು ಬೆಳಿಗ್ಗೆ 11.30ಕ್ಕೆ ಮಂಗಳೂರಿನಿಂದ ಬೆಂಗಳೂರಿನ ಜಯದೇವ ಆಸ್ಪತ್ರೆ ಕಡೆಗೆ ಝೀರೊ ಟ್ರಾಫಿಕ್ ನಲ್ಲಿ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ. ಆಂಬುಲೆನ್ಸ್ ಗೆ ಸರಾಗ ದಾರಿ ಮಾಡಿಕೊಡುವಂತೆ ಸಾರ್ವಜನಿಕರಲ್ಲಿ ಈ ಮುನ್ನವೇ ಮನವಿ ಮಾಡಿಕೊಳ್ಳಲಾಗಿತ್ತು. ಸಕಲೇಶಪುರ, ಹಾಸನದ ಯುವಕರಿಗೆ ಆಂಬುಲೆನ್ಸ್ ತೆರಳಲು ನೆರವಾಗುವಂತೆ ಕೇಳಿಕೊಳ್ಳಲಾಗಿದ್ದು, ಯುವಕರು ಸ್ವಯಂ ಸೇವಕರಾಗಿ ನಿಂತು ಆಂಬುಲೆನ್ಸ್ ಸರಾಗವಾಗಿ ಸಾಗಲು ದಾರಿ ಮಾಡಿಕೊಡುತ್ತಿದ್ದಾರೆ.
ಮಂಗಳೂರಿನ ಫಾ. ಮುಲ್ಲರ್ ನಿಂದ ಹೊರಟು ದೋಣಿಗಲ್ ಸಕಲೇಶಪುರ-ಹಾಸನ, ತಣ್ಣೀರುಹಳ್ಳ ಬೈಪಾಸ್, ಬಿಟ್ಟಗೌಡನಹಳ್ಳಿ ಬೈಪಾಸ್, ಚನ್ನಪಟ್ಟಣ ಬೈಪಾಸ್, ಗವೇನಹಳ್ಳಿ, ಭೂವನಹಳ್ಳಿ ಬೈಪಾಸ್ ಮತ್ತು ಬೆಂಗಳೂರು ಮಾರ್ಗವಾಗಿ ಜೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಬರಲಿದೆ. ಮಂಗಳೂರಿನಿಂದ ಹೊರಟ ಆಂಬುಲೆನ್ಸ್ 1.20ಕ್ಕೆ ಶಿರಾಡಿ ಪಾಸ್ ಅಗಿದ್ದು, ಸಕಲೇಶಪುರಕ್ಕೆ ತಲುಪಿದೆ. ಹಾಸನ ಬೈಪಾಸ್ ಗೆ 2.15ಕ್ಕೆ ಬರಲಿದ್ದು, ಎಲ್ಲಾ ಕಡೆ ಜೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗಲು ಯುವಕರು ಸ್ವಯಂ ಆಗಿ ದಾರಿಯುದ್ದಕ್ಕೂ ನಿಂತು ನೆರವಾಗುತ್ತಿದ್ದಾರೆ.