ಕಲ್ಲೆಸೆತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್? ಫೋನ್ ಸಂಭಾಷಣೆ ಬಿಡುಗಡೆ ಸಾಧ್ಯತೆ
ಬೆಂಗಳೂರು, ಫೆಬ್ರವರಿ 14: ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲೆಸೆದ ಪ್ರಕರಣವನ್ನು ಬಿಜೆಪಿ ಬಹು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆ ಮಾಡುತ್ತಿದೆ. ಆದರೆ ಈ ಪ್ರಕರಣಕ್ಕೆ ಬಹು ದೊಡ್ಡ ಟ್ವಿಸ್ಟ್ ಸಿಗುವ ಸಾಧ್ಯತೆ ಕಾಣುತ್ತಿದೆ.
ಬಿಜೆಪಿಯ ಕಾರ್ಯಕರ್ತರೇ ಕಲ್ಲೆಸೆತ ಪ್ರಕರಣದ ಹಿಂದೆ ಇದ್ದಾರೆ, ಪ್ರೀತಂಗೌಡ ಸಹಚರ ಒಬ್ಬರು ಬಿಜೆಪಿ ಕಾರ್ಯಕರ್ತರಿಗೆ ಕರೆ ಮಾಡಿ ಕಲ್ಲೆಸೆಯುವಂತೆ ಒತ್ತಾಯ ಮಾಡಿದ ಫೋನ್ ಸಂಭಾಷಣೆಯನ್ನು ಇಂದು ಬಿಡುಗಡೆ ಮಾಡುತ್ತೇನೆ ಎಂದು ಹಾಸನದ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಬರೆದುಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಪ್ರೀತಂಗೌಡ ಮನೆ ಮೇಲೆ ಕಲ್ಲು : ಜೆಡಿಎಸ್ನ 5 ಮಂದಿ ಮೇಲೆ ಎಫ್ಐಆರ್
'ಹಾಸನದಲ್ಲಿ ಪ್ರೀತಮ್ ಗೌಡರ ಸಹಚರರು ನೆನ್ನೆ ಬಿಜೆಪಿ ಸ್ನೇಹಿತನೊಬ್ಬನಿಗೆ ಕರೆಮಾಡಿ ಪ್ರತಿಭಟನೆ ನಡೆಸುತ್ತಿರುವ ಜೆಡಿಎಸ್ ಕಾರ್ಯಕರ್ತರ ನಡುವೆ ನಿಂತು ಕಲ್ಲು ತೂರುವಂತೆ ಒತ್ತಾಯ ಮಾಡಿದ ಆಡಿಯೋ ಇದೀಗ ಲಭ್ಯವಾಗಿದ್ದು ಮದ್ಯಾಹ್ನ 2:30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಗೊಳಿಸಲಿದ್ದೇನೆ', ನವೀನ್ ಗೌಡ ನವ ಕರ್ನಾಟಕ ಸೇನೆ ಎಂಬ ಫೇಸ್ಬುಕ್ ಖಾತೆಯಲ್ಲಿ ಹೀಗೊಂದು ಪೋಸ್ಟ್ ಹಾಕಲಾಗಿದೆ.
ಶಾಸಕ ಪ್ರೀತಂಗೌಡಗೆ ಭದ್ರತೆ ನೀಡಲು ರಮೇಶ್ ಕುಮಾರ್ ಸೂಚನೆ
ಪ್ರಚಾರದ ತಂತ್ರವಾ? ಅಥವಾ ಸತ್ಯವಾ?
ಆದರೆ ಈ ಫೋಸ್ಟ್ ಕೇವಲ ಪ್ರಚಾರ ತಂತ್ರವಾ? ಅಥವಾ ಸತ್ಯವಾ ಎಂಬುದು ಗೊತ್ತಾಗಬೇಕಿದೆ. 'ಒನ್ಇಂಡಿಯಾ ಕನ್ನಡ'ವು ನವೀನ್ ಗೌಡ ಅವರನ್ನು ಸಂಪರ್ಕಿಸಲು ಯತ್ನಿಸಿತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹಾಗೊಮ್ಮೆ ಆಡಿಯೋ ಬಿಡುಗಡೆ ಆಗಿ ಅದು ಸತ್ಯವಾಗಿದ್ದಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಆಗಲಿದೆ.
ದೇವೇಗೌಡರ ಬಗ್ಗೆ ಕೀಳು ಹೇಳಿಕೆ ಆರೋಪ
ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಕೀಳು ಮಟ್ಟದ ಮಾತನ್ನಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಅವರ ಹಾಸನದ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಪ್ರತಿಭಟನಾ ನಿರತನೊಬ್ಬ ಪ್ರೀತಂಗೌಡ ಮನೆಯ ಎಡೆಗೆ ಕಲ್ಲು ಬೀಸಿ, ಪ್ರೀತಂಗೌಡ ಬೆಂಬಲಿಗ ರಾಹುಲ್ ಎಂಬಾತನಿಗೆ ಗಾಯವಾಗಿತ್ತು.
ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು
ಇದನ್ನು ತೀವ್ರವಾಗಿ ವಿರೋಧಿಸಿರುವ ರಾಜ್ಯ ಬಿಜೆಪಿಯು ನಿನ್ನೆ ರಾತ್ರಿ ಹಾನಸದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಸಭೆ ನಡೆಸಿದೆ. ಇಂದು ಸಹ ರಾಜ್ಯಪಾಲರಿಗೆ ಸರ್ಕಾರದ ವಿರುದ್ಧ ದೂರು ನೀಡಿದೆ. ಹಾಸನ ಹಾಗೂ ಬೆಂಗಳೂರಿನಲ್ಲಿ ಈ ಬಗ್ಗೆ ಬೃಹತ್ ಪ್ರತಿಭಟನೆ ನಡೆಸಿದೆ.
ಐವರು ಜೆಡಿಎಸ್ ಕಾರ್ಯಕರ್ತರ ವಶ
ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಐವರು ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಾಮಾಜಿಕ ಜಾಲತಾಣ ಮೂದಲಿಕೆಗೂ ಕಾರಣವಾಗಿದೆ. ಉಡುಪಿಯ ಆರ್ಎಸ್ಎಸ್ ಕಾರ್ಯಕರ್ತ ರಾಹುಲ್ಗೆ ಹಾಸನದಲ್ಲಿ ಏನು ಕೆಲಸ ಎಂದು ಜೆಡಿಎಸ್ ಪ್ರಶ್ನಿಸುತ್ತಿದೆ. ಇದು ಬಿಜೆಪಿಯು ಉದ್ದೇಶಪೂರ್ವಕವಾಗಿ ಮಾಡಿಸಿರುವ ಘಟನೆ ಎಂಬುದು ಜೆಡಿಎಸ್ ಆರೋಪ.