ಆ ಲಿಂಬಾವಳಿ ಇದ್ದಾನಲ್ಲಾ ಅವನು ಥರ್ಡ್ ಕ್ಲಾಸ್, ಉಪಾಧ್ಯಕ್ಷ ಆಗಲಿಕ್ಕೆ ಅನ್ ಫಿಟ್
ಹಾಸನ, ಡಿ 21: ಬಿಜೆಪಿ ಜೊತೆ ಜೆಡಿಎಸ್ ವಿಲೀನಗೊಳ್ಳಲಿದೆ ಎನ್ನುವ ಸುದ್ದಿಗೆ ದಳದ ಮುಖಂಡರು ಹೈರಾಣವಾಗಿ ಹೋಗಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡೆರಡು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟ ಪಡಿಸಿದ್ದಾಗಿದೆ. ಈಗ ಅವರ ಸಹೋದರ ಎಚ್.ಡಿ.ರೇವಣ್ಣ ಅವರ ಸರದಿ.
ಈ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ರೇವಣ್ಣ, "ಆ ಅರವಿಂದ ಲಿಂಬಾವಳಿ ಇದ್ದಾನಲ್ಲಾ ಅವನೊಬ್ಬ ಥರ್ಡ್ ಕ್ಲಾಸ್, ಬಿಜೆಪಿಯ ಉಪಾಧ್ಯಕ್ಷ ಆಗಲಿಕ್ಕೆ ಅವನಿಗೆ ಏನಿದೆ ಅರ್ಹತೆ, ಅವನು ಅನ್ ಫೀಟ್"ಎಂದು ವಾಗ್ದಾಳಿ ನಡೆಸಿದರು.
ನನ್ನ ಅಸಲಿ ರಾಜಕೀಯ ಆರಂಭವಾಗುವುದೇ 2023ರಿಂದ: ಏನಿದು ಕುಮಾರಣ್ಣನ ಗೂಡಾರ್ಥ
"ಒಂದು ಮಾತು ಸತ್ಯ. ವಿಲೀನಗೊಳ್ಳುವ ಸುದ್ದಿಯನ್ನು ಯಾರೋ ಸುಮ್ಮನೆ ಹುಟ್ಟು ಹಾಕಿದ್ದಾರೆ. ದೇವೇಗೌಡ್ರು ಇರುವ ತನಕ ಯಾವುದೇ ಮೈತ್ರಿಯಿಲ್ಲ. ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರಿಗೆ ಇಂತಹ ಹೇಳಿಕೆ ಶೋಭೆ ತರುವಂತದಲ್ಲ"ಎಂದು ರೇವಣ್ಣ, ಲಿಂಬಾವಳಿ ವಿರುದ್ದ ಕಿಡಿಕಾರಿದರು.
"ಸರಿಯಾದ ಸಮಯ ನೋಡಿ, ಈ ವಿಲೀನದ ಸುಳ್ಳುಸುದ್ದಿಯನ್ನು ತೇಲಿ ಬಿಡಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈ ರೀತಿ ಅಪಪ್ರಚಾರ ನಡೆಸಿ, ನಮ್ಮ ಪಕ್ಷಕ್ಕೆ ಹಿನ್ನಡೆಯಾಗಲು ಸಂಚು ರೂಪಿಸಲಾಗಿದೆ"ಎಂದು ರೇವಣ್ಣ ಬೇಸರ ವ್ಯಕ್ತ ಪಡಿಸಿದರು.
"ನಮ್ಮ ಪವರ್ ಏನು ಎನ್ನುವುದನ್ನು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ತೋರಿಸುತ್ತೇವೆ. ಕುಮಾರಸ್ವಾಮಿ ಮತ್ತು ದೇವೇಗೌಡರ ಜೊತೆ ಮಾತನಾಡಿದ್ದೇನೆ. ಮುಂದಿನ ವರ್ಷದ ಆರಂಭದಿಂದ ಜೆಡಿಎಸ್ ಪಕ್ಷ ಎಂದರೇನು ಎನ್ನುವುದನ್ನು ತೋರಿಸುತ್ತೇವೆ"ಎಂದು ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತ ಪಡಿಸಿದರು.
"ಮುಂದಿನ ದಿನಗಳ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ಒಂದು ಪಕ್ಷವೇ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ"ಎಂದು ಬಿಜೆಪಿಯ ಹಿರಿಯ ಮುಖಂಡ ಅರವಿಂದ ಲಿಂಬಾವಳಿ ನೀಡಿದ ಹೇಳಿಕೆ, ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.