ಹಾಸನ; ಬಿಜೆಪಿ ಬೆಂಬಲಿಸಿದ ಜೆಡಿಎಸ್ ಸದಸ್ಯರಿಗೆ ಅನರ್ಹತೆ ಭೀತಿ?
ಹಾಸನ, ಅಕ್ಟೋಬರ್ 03; ಜೆಡಿಎಸ್ ಪಕ್ಷದಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡೋಕೆ ಮುಂದಾಗಿದ್ದ ಅರಸೀಕೆರೆ ನಗರಸಭೆ 6 ಜೆಡಿಎಸ್ ಸದಸ್ಯರಿಗೆ ಅನರ್ಹತೆಯ ಆತಂಕ ಎದುರಾಗಿದೆ. ಎರಡು ತಿಂಗಳಿನಿಂದ ವಿಚಾರಣೆ ನಡೆಸಿರುವ ಜಿಲ್ಲಾಧಿಕಾರಿಗಳು ತೀರ್ಪು ಕಾಯ್ದಿರಿಸಿದ್ದು, ತಪ್ಪು ಲೆಕ್ಕಾಚಾರದಿಂದ ಆಪರೇಷನ್ ಕಮಲಕ್ಕೊಳಗಾಗಿದ್ದ ಸದಸ್ಯರು ಆತಂಕಗೊಂಡಿದ್ದಾರೆ.
ಜೂನ್ 22ರಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ದವೇ ಬಂಡಾಯವೆದ್ದು ಬಹುಮತ ಇಲ್ಲದಿದ್ದರೂ ನಗರಸಭೆ ಅಧ್ಯಕ್ಷಗಾದಿಗೆ ಏರಿದ್ದ ಬಿಜೆಪಿಗೆ ನೆರವಾಗೋ ನಿರ್ಧಾರದೊಂದಿಗೆ 7 ಜನರು ಪ್ರತ್ಯೇಕ ಆಸನಕ್ಕಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಆ ಒಂದು ಮನವಿಯೇ ಆ ಸದಸ್ಯರ ಆಸನವನ್ನೇ ಕಸಿದುಕೊಳ್ಳುತ್ತಾ? ಎನ್ನುವ ಚರ್ಚೆ ಹುಟ್ಟು ಹಾಕಿದೆ.
10 ಲಕ್ಷ ಹಣ ಟೇಬಲ್ ಮೇಲಿಟ್ಟು ಪತ್ರಿಕಾಗೋಷ್ಠಿ ನಡೆಸಿದ ರೇವಣ್ಣ!
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯಕ್ಷವಾಗಿದ್ದ ಜೆಡಿಎಸ್ನ 7 ನಗರಸಭೆ ಸದಸ್ಯರು ಅರಸೀಕೆರೆ ಜೆಡಿಎಸ್ನಲ್ಲಿ ಶಾಸಕರಿಂದ ತಮಗೆ ಉಸಿರುಗಟ್ಟಿಸೋ ವಾತಾವರಣ ಇದೆ. ನಾವು ಗೆದ್ದಿರೋ ಮೂರನೇ ಒಂದು ಭಾಗ ಸದಸ್ಯರು ಪಕ್ಷ ತೊರೆದು ಹೊರ ಬರುತ್ತಿದ್ದೇವೆ, ನಮಗೆ ಕೂರೋಕೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು ಹಾಗೆಯೇ ನಾವು ವಿಷಯಾಧರಿತವಾಗಿ ಬಿಜೆಪಿಯಿಂದ ಅಧ್ಯಕ್ಷರಾಗಿರೋ ಗಿರೀಶ್ ರನ್ನ ಬೆಂಬಲಿಸುತ್ತೇವೆ ಎಂದು ಹೇಳಿ ಮನವಿ ಸಲ್ಲಿಸಿದ್ದರು.
ಭದ್ರಾವತಿ ನಗರಸಭೆ ಉಪ ಚುನಾವಣೆ: ಜೆಡಿಎಸ್ಗೆ ಭರ್ಜರಿ ಗೆಲುವು
ಮನವಿ ಸ್ವೀಕಾರ ಮಾಡಿದ್ದ ಜಿಲ್ಲಾಧಿಕಾರಿಗಳು ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ತಾಲ್ಲೂಕು ಅಧ್ಯಕ್ಷರಿಗೆ ನೊಟೀಸ್ ನೀಡಿದ್ದರು. ಈ ನೊಟೀಸ್ ಅಸ್ತ್ರಮಾಡಿಕೊಂಡ ಜೆಡಿಎಸ್ ಬಂಡಾಯ ಸದಸ್ಯರ ವಿರುದ್ಧ ಅನರ್ಹತೆಯ ಬಾಣ ಪ್ರಯೋಗಿಸಿತ್ತು. ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆ ಎಂದು ಡಿಸಿ ಕೋರ್ಟ್ನಲ್ಲಿ ದೂರು ನೀಡಿತ್ತು.
ಚಳ್ಳಕೆರೆ ನಗರಸಭೆ ಚುನಾವಣೆ; ಅಧಿಕಾರ ಕಾಂಗ್ರೆಸ್ ತೆಕ್ಕೆಗೆ
ಈ ಎಲ್ಲಾ ಬೆಳವಣಿಗೆಗಳ ನಡುವೆ 7 ಜನರಲ್ಲಿ 2ನೇ ವಾರ್ಡ್ ಸದಸ್ಯೆ ಕಲೈ ಅರಸಿ ವಾಪಸ್ ಜೆಡಿಎಸ್ ನಾಯಕರ ಬಳಿ ಬಂದಿದ್ದರು. ನಮಗೆ 10 ಲಕ್ಷದ ಆಮಿಷವೊಡ್ಡಿದರು, ಅಂದು ಸಿಎಂ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಲವಂತವಾಗಿ ಅವರ ಆಪ್ತರ ಮೂಲಕ 10 ಲಕ್ಷ ಹಣವನ್ನೂ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆಪರೇಷನ್ ಕಮಲದ ಬಾಂಬ್ ಸಿಡಿಸಿದ್ದರು.
ಇದೆಲ್ಲವನ್ನೂ ತಮ್ಮ ಅಸ್ತ್ರಮಾಡಿಕೊಂಡ ಜೆಡಿಎಸ್ ಜಿಲ್ಲಾಧಿಕಾರಿಗಳ ಮುಂದೆ ತನ್ನ ವಾದ ಮಂಡನೆ ಮಾಡಿತ್ತು. ಮಂಡ್ಯ, ಹುಣಸೂರು, ಚಾಮರಾಜನಗರಗಳಲ್ಲಿಯೂ ಹೀಗೆ ಸದಸ್ಯರು ಬಂಡಾಯವೆದ್ದು ಹೋದಾಗ ಕೋರ್ಟ್ ಕೊಟ್ಟ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿತ್ತು. ಎರಡೂ ಕಡೆಯವರ ವಾದ ವಿವಾದ ಆಲಿಸಿರೋ ಡಿಸಿಯವರು ತೀರ್ಪು ಕಾಯ್ದಿರಿಸಿದ್ದು, ಸೋಮವಾರ ಅಥವಾ ಮಂಗಳವಾರ ತೀರ್ಪು ಹೊರಬರಲಿದೆ.
ನಗರಸಭೆ ಚುನಾವಣೆಯಲ್ಲಿ ಗೆದ್ದ 21 ಜನ ಸದಸ್ಯರಲ್ಲಿ 7 ಜನರು ಹೊರ ಹೋದರೆ ಪಕ್ಷಾಂತರ ನಿಷೇಧ ಕಾಯಿದೆ ಅಡ್ಡಿಯಾಗಲ್ಲ ಎನ್ನುವ ಲೆಕ್ಕಾಚಾರದಿಂದ ಪಕ್ಷ ತೊರೆಯೋಕೆ ಮುಂದಾಗಿದ್ದವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ, ಬಂಡಾಯಗಾರರ ಮೇಲೆ ಅನರ್ಹತೆಯ ತೂಗುಗತ್ತಿ ನೇತಾಡುತ್ತಿದೆ. ತೀರ್ಪಿನ ಮೇಲೆ ಭವಿಷ್ಯ ನಿಂತಿದೆ.
ಜೆಡಿಎಸ್ ಬಹುಮತ ಪಡೆದಿತ್ತು; ಒಟ್ಟು 31 ಸದಸ್ಯಬಲದ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬರೊಬ್ಬರಿ 21 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು. ಆದರೆ ಮೀಸಲಾತಿ ಅಸ್ತ್ರ ಬಳಸಿ ಜೆಡಿಎಸ್ಗೆ ಅಧಿಕಾರ ಕೊಡದ ಬಿಜೆಪಿ ತಮ್ಮ ಪಕ್ಷದಿಂದ ಗೆದ್ದ 6 ಜನರಲ್ಲಿ ಪರಿಶಿಷ್ಟ ಪಂಗಡದ ಸದಸ್ಯನನ್ನು ಅಧ್ಯಕ್ಷನನ್ನಾಗಿ ಮಾಡಿತ್ತು. ಅಧ್ಯಕ್ಷರಾದ ಬಳಿಕ ಬಹುಮತಕ್ಕಾಗಿ ಆಪರೇಷನ್ ಕಮಲ ಮಾಡೋಕೆ ಮುಂದಾಗಿದ್ದ ಬಿಜೆಪಿ ಮುಖಂಡ ಎನ್. ಆರ್. ಸಂತೋಷ್ 7 ಜೆಡಿಎಸ್ ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡರು.
ಆದರೆ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡುವ ಬದಲು ಜಿಲ್ಲಾಧಿಕಾರಿಗೆ ರಾಜೀನಾಮೆ ಕೊಟ್ಟಿದ್ದ 7 ಸದಸ್ಯರು ಸಂಕಷ್ಟಕ್ಕೆ ಸಿಲುಕಿದರು, ಇನ್ನೊಂದು ಕಡೆ ಮೂರನೇ ಒಂದು ಭಾಗ ಹೊರ ಬಂದಿದ್ದೇವೆ ಎಂದು ಕೊಂಡಿದ್ದವರಿಗೆ ಒಬ್ಬರನ್ನು ವಾಸಪ್ ಸೆಳೆದ ಜೆಡಿಎಸ್ ನಾಯಕರು ಶಾಕ್ ಕೊಟ್ಟಿದ್ದರು.
ಇನ್ನೊಂದೆಡೆ 10 ಲಕ್ಷ ಆಮಿಷವನ್ನು ಬಿಜೆಪಿ ನಾಯಕರು ಒಡ್ಡಿದ್ದರು ಎನ್ನುವ ಆರೋಪ ಮಾಡಿದರು. ಇದೆಲ್ಲವೂ ನಡೆಯುತ್ತಿರುವಾಗಲೇ ತಮ್ಮ ಪಕ್ಷದ ಬಿ-ಫಾರಂ ಪಡೆದು ಗೆದ್ದ 7 ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ, ಪಕ್ಷಾಂತರ ನಿಷೇಧ ಕಾಯಿದೆಯ ಕಾನೂನು ಉಲ್ಲಂಘಿಸಿ ಪಕ್ಷಬಿಟ್ಟಿದ್ದಾರೆ ಎಂದು ಜೆಡಿಎಸ್ ವಾದ ಮಂಡಿಸಿತ್ತು.
ಈಗ ವಾದ, ವಿವಾದ ಎಲ್ಲವೂ ಮುಗಿದಿದೆ. ಒಂದೆಡೆ ಅರಸೀಕೆರೆ ನಗರಸಭೆಯಲ್ಲಿ ಕಾನೂನು ಮೀರಿ ಮೀಸಲಾತಿ ಪ್ರಕಟಿಸಲಾಗಿದೆ ಎನ್ನುವ ವಿಚಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಬಾಕಿ ಇದೆ.
ಇಲ್ಲಿ ಜೆಡಿಎಸ್ನಿಂದ ಗೆದ್ದು ಬಿಜೆಪಿಯತ್ತ ವಾಲಿದ್ದ 6 ಸದಸ್ಯರ ಭವಿಷ್ಯ ಏನಾಗಲಿದೆ? ಎಂಬುದು ಸದ್ಯದ ಪ್ರಶ್ನೆ. ಒಂದುವೇಳೆ ಅವರು ಅನರ್ಹರೆಂದು ತೀರ್ಪುಕೊಟ್ಟರೆ ಮುಂದೇನು? ಎನ್ನುವ ಲೆಕ್ಕಾಚಾರ ಮತ್ತೊಂದು ಕಡೆ. ಅರಸೀಕೆರೆ ನಗರಸಭೆಯ ಈ ತೀರ್ಪು ಪಕ್ಷ ದ್ರೋಹಿಗಳಿಗೆ ಎಚ್ಚರಿಕೆಗಂಟೆ ಆಗಲಿದೆ ಎಂದು ಜೆಡಿಎಸ್ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ನಗರಸಭೆ ಚುನಾವಣೆಯಲ್ಲಿ ಗೆದ್ದು ಎರಡು ವರ್ಷ ಸದಸ್ಯರಾಗಿ ಪ್ರಮಾಣ ವಚನವನ್ನೇ ಸ್ವೀಕರಿಸದೆ ಉಳಿದಿದ್ದ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾದ ಬಳಿಕ ರಾಜಕೀಯ ಮೇಲಾಟದಿಂದ ಅಧಿಕಾರ ನಡೆಸಲಾಗದೆ ಕಂಗೆಟ್ಟುಹೋಗಿದ್ದರು.
ಈಗ ಜೆಡಿಎಸ್ನಿಂದ ಬಂಡಾಯವೆದ್ದು ಬಿಜೆಪಿಯತ್ತ ವಾಲಿದ್ದವರಿಗೆ ಕೋರ್ಟ್ ತೀರ್ಪು ಏನಾಗಲಿದೆ ಎನ್ನುವುದು ಕುತೂಹಲ ಹುಟ್ಟಿಸಿದ್ದರೆ, ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷದ ತೆಕ್ಕೆಗೆ ಸೇರಿ ಜನರಿಗೆ ದ್ರೋಹ ಮಾಡೋರಿಗೆ ತಕ್ಕ ಶಾಸ್ತಿ ಆಗಲಿದೆ ಎಂಬ ವಿಶ್ವಾಸ ಜೆಡಿಎಸ್ನಲ್ಲಿದೆ. ಆದರೆ ಕೋರ್ಟ್ ತೀರ್ಪು ಏನು ಬರಲಿದೆ?, ದಳಪತಿಗಳ ವಿರುದ್ದವೇ ಬಂಡಾಯ ಎದ್ದಿದ್ದವರ ಭವಿಷ್ಯ ಏನಾಗಲಿದೆ? ಎನ್ನೋದು ಎಲ್ಲರ ಕುತೂಹಲ.
Recommended Video