ಮಹಿಳೆಯನ್ನು ಕೊಲೆಗೈದು ಕೆರೆಗೆ ಎಸೆದಿದ್ದ ಆರೋಪಿಗಳ ಬಂಧನ
ಹಾಸನ, ನವೆಂಬರ್ 24: ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಪತ್ನಿಯನ್ನು ಕೊಲೆ ಮಾಡಿ ಕೆರೆಗೆ ಎಸೆದಿದ್ದ ಪತಿ ಸೇರಿದಂತೆ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ವೃತ್ತ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿ ಬೆಲಗೂರು ಗ್ರಾಮದ ನಿವಾಸಿಗಳಾದ ನಾಗರಾಜು, ಮೋಹನ ಕುಮಾರ್ ಮತ್ತು ಕೋಡಿಹಳ್ಳಿ ಗ್ರಾಮದ ಶೈಲ ಬಂಧಿತರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ನವೆಂಬರ್ 1 ರಂದು ದುದ್ದ ಪೊಲೀಸ್ ಠಾಣಾ ವ್ಯಾಪ್ತಿ ಚೀರನಹಳ್ಳಿ ಗ್ರಾಮದ ಕೆರೆಯ ನೀರಿನಲ್ಲಿ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಶವವು ಪತ್ತೆಯಾಗಿದ್ದು, ಈ ಸಂಬಂಧ ದುದ್ದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಾಗಿತ್ತಲ್ಲದೆ, ಈ ಸಂಬಂಧ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಅಪರಿಚಿತ ಮಹಿಳೆಯ ಹೆಸರು ಮತ್ತು ವಿಳಾಸ ಮತ್ತು ಪ್ರಕರಣದ ಆರೋಪಿಯ ಪತ್ತೆ ಮಾಡುವ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ಅವರ ಮೇಲುಸ್ತುವಾರಿಯಲ್ಲಿ ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಆರ್. ಪುಟ್ಟಸ್ವಾಮಿಗೌಡ ರವರ ಉಸ್ತುವಾರಿಯಲ್ಲಿ ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಪಿ. ಸುರೇಶ್ ಮತ್ತು ದುದ್ದ ಪೊಲೀಸ್ ಠಾಣಾ ಪಿಎಸ್ಐ ಎಂ.ಸಿ ಮಧು ಹಾಗೂ ಸಿಬ್ಬಂದಿಯನ್ನೊಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿಶೇಷ ತಂಡವು ಮೃತಳ ಹೆಸರು ಮತ್ತು ವಿಳಾಸ ಹಾಗೂ ಆರೋಪಿಯ ಪತ್ತೆಯ ಬಗ್ಗೆ ರಾಜ್ಯದ ನಾನಾ ಜಿಲ್ಲೆಗಳ ಕಡೆಗಳಿಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸುವ ವೇಳೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲಗೂರು ಗ್ರಾಮದ ನಾಗರಾಜು ಎಂಬಾತನ ಪತ್ನಿ ಸುಷ್ಠಿತಾ ಎಂಬಾಕೆ ಅಕ್ಟೋಬರ್ 29 ರಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೀಗಾಗಿ ಮೃತೆಯ ತಂದೆ ಕೃಷ್ಣಮೂರ್ತಿ, ತಾಯಿ ಜಯಶ್ರೀ ಅವರನ್ನು ಭೇಟಿ ಮಾಡಿದ ತನಿಖಾ ತಂಡ ಚೀರನಹಳ್ಳಿ ಕೆರೆಯಲ್ಲಿ ದೊರೆತ ಅಪರಿಚಿತ ಮಹಿಳೆಯ ಭಾವ ಚಿತ್ರ ಮತ್ತು ಆಕೆಯ ಮೈಮೇಲೆ ದೊರೆತ ಸ್ವತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಇದನ್ನು ನೋಡಿದ ಅವರು ಮೃತ ಸುಸ್ಮಿತಾಳನ್ನು ಗುರುತನ್ನು ಪತ್ತೆ ಹಚ್ಚಿದ್ದರು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಒಂದಷ್ಟು ಮಾಹಿತಿ ದೊರೆತಿತ್ತು. ಅದೇನೆಂದರೆ ಸುಮಾರು ಆರು ವರ್ಷಗಳ ಹಿಂದೆ ಬೆಲಗೂರು ಗ್ರಾಮದ ನಾಗರಾಜು ಸುಷ್ಮಿತಾಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದನು. ಇವರಿಗೆ ನಾಲ್ಕು ವರ್ಷ ವಯಸ್ಸಿನ ಯಶಸ್ವಿನಿ ಎಂಬ ಹೆಣ್ಣು ಮಗು ಇತ್ತು.
ಆದರೆ ಗಂಡ ನಾಗರಾಜು ಪಕ್ಕದ ಕೋಡಿಹಳ್ಳಿ ಗ್ರಾಮದ ಶೈಲ ಎಂಬಾಕೆಯೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡು ತಮ್ಮ ಕುಟುಂಬದವರೊಂದಿಗೆ ಸೇರಿ ಸುಷ್ಮಿತಾಳಿಗೆ ದೈಹಿಕ ಮತ್ತು ಹಿಂಸೆ ನೀಡಲು ಆರಂಭಿಸಿದ್ದನು. ಇದರಿಂದ ನೊಂದ ಸುಷ್ಮಿತಾ ತನ್ನ ಮಗುವಿನೊಂದಿಗೆ ಕಳೆದ ಒಂದು ವರ್ಷದ ಹಿಂದೆ ತವರು ಮನೆಗೆ ತೆರಳಿ ತಂದೆಯೊಂದಿಗೆ ವಾಸವಿದ್ದಳಲ್ಲದೆ, ಜೀವನೋಪಾಯಕ್ಕಾಗಿ ಅರಸೀಕೆರೆಯಲ್ಲಿರುವ ಸಾಯಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು.
ಈಕೆಯ ಗಂಡ ನಾಗರಾಜು ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿರುವ ವಿಷಯ ತಿಳಿದ ಸುಷ್ಮಿತಾ ಜೀವನಾಂಶ ಕೋರಿ ಗಂಡ ನಾಗರಾಜು ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಳು.
ಹೀಗಾಗಿ ಸಾಕ್ಷಿ ನಾಶ ಮಾಡುವ ಸಲುವಾಗಿ ನಾಗರಾಜು ಉಪಾಯದಿಂದ ರಾತ್ರಿ ಸುಷ್ಮಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಹಳೆಯ ಮನೆಗೆ ಕರೆಸಿಕೊಂಡು ಕೊಲೆ ಮಾಡಿ, ನಂತರ ಶವವನ್ನು ತಮ್ಮ ಮೋಹನ ಕುಮಾರ್ ಮತ್ತು ಶೈಲ ಮೂವರು ಸೇರಿಕೊಂಡು ಸಾಕ್ಷಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಶವವನ್ನು ಸಾಗಿಸಿ ದುದ್ದ ಪೊಲೀಸ್ ಠಾಣೆಯ ವ್ಯಾಪ್ತಿಯ ಚೀರನಹಳ್ಳಿ ಕೆರೆಯ ನೀರಿನಲ್ಲಿ ಬಿಸಾಡಿ ಹೋಗಿದ್ದರು. ತನಿಖೆ ವೇಳೆ ಕೊಲೆಯ ರಹಸ್ಯ ಬಯಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿರುವುದಾಗಿ ಎಸ್ಪಿ ತಿಳಿಸಿದರು. ಇದೇ ವೇಳೆ ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಿ ಪೊಲೀಸ್ ಅಧೀಕ್ಷಕರು ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ.