ಹೊರ ರಾಜ್ಯಗಳಿಂದ ಬಂದವರಿಗೆಲ್ಲರಿಗೂ ಕ್ವಾರಂಟೈನ್: ಹಾಸನ ಡಿಸಿ
ಹಾಸನ, ಮೇ.13: ಹಾಸನ ಜಿಲ್ಲೆಗೆ ಹೊರರಾಜ್ಯದಿಂದ ಒಟ್ಟು 2470 ಜನರು ಆಗಮಿಸುತ್ತಿದ್ದು ಅವರನ್ನು ಕ್ವಾರಂಟೈನ್ ಮಾಡಲು ವಸತಿ ನಿಲಯಗಳಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಎಲ್ಲಾ ತಹಸೀಲ್ದಾರರು ಗಳಿಗೆ ಸೂಚಿಸಿದ್ದಾರೆ. ಆದರೆ, ಸದ್ಯ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ, ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆ ಪ್ರವೇಶಿಸಲು ಕೋರಿ ಅರ್ಜಿಗಳು ಬಂದಿವೆ ಎಂದರು.
ಎಲ್ಲಾ ತಾಲ್ಲೂಕು ತಹಸೀಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಹೊರ ರಾಜ್ಯದಿಂದ ಬಂದ ಯಾವುದೇ ವ್ಯಕ್ತಿ ಚೆಕ್ ಪೋಸ್ಟ್ ನಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಹೋಗಿದ್ದಾರೆ ಆ ಹಳ್ಳಿಯನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಬೇಕಾಗುತ್ತದೆ ಹಾಗಾಗಿ ಯಾರೊಬ್ಬರೂ ಚೆಕ್ ಪೋಸ್ಟ್ ನಿಂದ ತಪ್ಪಿಸಿಕೊಂಡು ಹೋಗದಂತೆ ಎಚ್ಚರವಹಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರಲ್ಲದೆ, ಪ್ರತಿದಿನ ಚೆಕ್ ಪೋಸ್ಟ್ ಗಳಲ್ಲಿ ಎಷ್ಟು ಜನ ಬರುತ್ತಿದ್ದಾರೆ ಎಂಬುದನ್ನು ವರದಿ ಮಾಡುವಂತೆ ತಿಳಿಸಿದರು.
ಹಾಸನದಲ್ಲಿ ಕೊರೊನಾ; ಪಕ್ಕದ ಚಿಕ್ಕಮಗಳೂರಿನ ರಸ್ತೆ ಬಂದ್
* ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಿರುವ ವ್ಯಕ್ತಿಗಳಿಗೆ ಯಾವ ರೀತಿ ಆಹಾರ ಒದಗಿಸಬೇಕು, ಹಾಸ್ಟೆಲ್ ಸ್ವಚ್ಛತೆ ಹಾಗೂ ಶೌಚಾಲಯ ಸ್ವಚ್ಛವಾಗಿಡುವ ಕುರಿತು ಅಲ್ಲಿಯ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶಿಸಿದರು.
* ಚೆಕ್ ಪೋಸ್ಟ್ ಗಳಲ್ಲಿ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೂ ಎನ್-95 ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇಲೂರಲ್ಲಿ ಹೊಟ್ಟೆಪಾಡಿಗಾಗಿ ತರಕಾರಿ ವ್ಯಾಪಾರಕ್ಕಿಳಿದ ಟ್ಯಾಕ್ಸಿ ಡ್ರೈವರ್
* ಚೆಕ್ ಪೋಸ್ಟ್ ಗಳಲ್ಲಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಚೆಕ್ ಪೋಸ್ಟ್ನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು ತಹಸೀಲ್ದಾರರು ನಿಗಾ ವಹಿಸುವಂತೆ ಸೂಚಿಸಿದರು.
* ಚನ್ನರಾಯಪಟ್ಟಣಕ್ಕೆ ಹೊರಗಡೆಯಿಂದ ಬರುವವರ ಸಂಖ್ಯೆ ಹೆಚ್ಚಾದರೆ ಅವರನ್ನು ಅರಸೀಕೆರೆ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಬೇಕಾಗುತ್ತದೆ ಈ ನಿಟ್ಟಿನಲ್ಲಿ ಅರಸೀಕೆರೆಯಲ್ಲಿ ಹೆಚ್ಚಿನ ಕ್ವಾರಂಟೈನ್ ಕೇಂದ್ರಗಳ ವ್ಯವಸ್ಥೆ ಮಾಡಿಕೊಳ್ಳಲು ತಹಸೀಲ್ದಾರರಿಗೆ ತಿಳಿಸಿದರು.
* ನಗರ ಪ್ರದೇಶಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೇ ಇರುವುದು ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
* ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ರೋಸ್ಟರ್ ಸಿಸ್ಟೆಮ್ ಮೂಲಕ ರಜೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಅವರು ನಿರ್ದೇಶಿಸಿದರು.