ಹಾಸನ ಜಿಲ್ಲಾಡಳಿತದ ಅವ್ಯವಸ್ಥೆ: ಬೀದಿಯಲ್ಲಿ ಮಲಗಿದ ಅಗ್ನಿಪಥ್ ಅಭ್ಯರ್ಥಿಗಳು
ಹಾಸನ, ಆಗಸ್ಟ್, 13: ಅಗ್ನಿಪಥ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ. ಯೋಧರ ನೇಮಕಕ್ಕೆ ಈಗಾಗಲೇ ದೇಶಾದ್ಯಂತ ಆಯ್ಕೆ ಪ್ರಕ್ರಿಯೆಗಳು ಕೂಡ ನಡೆಯುತ್ತಿವೆ. ಹಾಸನದಲ್ಲಿಯೂ ಕೂಡ ಕಳೆದ ಮೂರು ದಿನಗಳಿಂದ ಅಗ್ನಿಪಥ್ ರ್ಯಾಲಿ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಅಭ್ಯರ್ಥಿಗಳಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದೆ ಅಭ್ಯರ್ಥಿಗಳು ಮಳೆ, ಗಾಳಿ, ಚಳಿಯಲ್ಲಿ ಬೀದಿಯಲ್ಲಿ ಮಲಗಿ ನರಕಯಾತನೆ ಅನುಭವಿಸುತ್ತಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 10 ರಿಂದ 22ರವರೆಗೂ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಗ್ನಪಥ್ ಆಯ್ಕೆ ರ್ಯಾಲಿ ನಡೆಯುತ್ತಿದೆ. ಇಲ್ಲಿಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಯುವಕರು ಬಂದಿದ್ದಾರೆ. ಆದರೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಅಭ್ಯರ್ಥಿಗಳು ಬೀದಿಯಲ್ಲಿ ಮಲಗಿದ್ದಾರೆ. ಸ್ಟೇಡಿಯಂನ ಅಕ್ಕಪಕ್ಕ, ರಸ್ತೆ ಬದಿ, ಅಂಗಡಿಗಳು, ಫುಡ್ ಸ್ಟ್ರೀಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳು ಮಲಗಿದ್ದಾರೆ. ಜಿಲ್ಲಾದ್ಯಂತ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಯಾವುದೇ ದಾರಿ ಇಲ್ಲದೆ ಅಭ್ಯರ್ಥಿಗಳು ಮಳೆ, ಚಳಿಯ ನಡುವೆಯೂ ರಸ್ತೆ ಬದಿಗಳಲ್ಲಿ ಮಲಗಿದ್ದಾರೆ. ಅನೇಕ ಜನರು ಹೊದ್ದುಕೊಳ್ಳಲು ಬೆಡ್ ಶೀಟ್ಗಳಿಲ್ಲದೇ, ಚಳಿಯಲ್ಲಿಯೇ ನಡುಗುತ್ತಾ ಮಲಗಿಕೊಂಡಿದ್ದಾರೆ. ಅಭ್ಯರ್ಥಿಗಳ ಈ ಸ್ಥಿತಿಯನ್ನು ಕಂಡ ಸಾರ್ವಜನಿಕರು ಅಲ್ಲಿನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಅಗ್ನಿಪಥ್ ಯೋಜನೆಯ ಆಯ್ಕೆಗೆ ಬಂದ ಅಭ್ಯರ್ಥಿಗಳಿಗೆ ಅನೇಕ ಕಡೆಗಳಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿತ್ತು. ಆದರೆ ಅವರು ವ್ಯವಸ್ಥೆ ಮಾಡಿರುವ ಸಮುದಾಯ ಭವನಗಳೆಲ್ಲಾ ಭರ್ತಿಯಾಗಿವೆ. ಅಲ್ಲದೇ ಕೆಲವು ಕಡೆಗಳಿಗೆ ನಾವು ಇಲ್ಲಿಂದ ಮೂರ್ನಾಲ್ಕು ಕಿಲೋ ಮೀಟರ್ ಹೋಗಬೇಕು. ಬೆಳಗ್ಗೆ ಮೂರು ಗಂಟೆಗೆ ನಾವು ದೈಹಿಕ ಪರೀಕ್ಷೆಗೆ ಬರಬೇಕಿದೆ. ಮೂರು ಕಿಲೋ ಮೀಟರ್ ದೂರು ನಡೆದುಕೊಂಡು ಬಂದು, ನಿಗದಿತ ಸಮಯಕ್ಕೆ ತಲುಪುವುದಕ್ಕೆ ಸಾಧ್ಯವಿಲ್ಲ. ನಡೆದುಕೊಂಡು ಬಂದು ಹೇಗೆ ಪಿಸಿಕಲ್ನಲ್ಲಿ ಭಾಗವಹಿಸುವುದಕ್ಕೆ ಸಾಧ್ಯ ಎಂದು ಅಭ್ಯರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾತಾಡಿದ ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ನಗರದಲ್ಲಿ ಅಭ್ಯರ್ಥಿಗಳ ಜೊತೆ ರ್ಯಾಲಿ ಮಾಡಿ ಹೋಗಿದ್ದಾರೆ. ಆದರೆ ಸರಿಯಾದ ವ್ಯವಸ್ಥೆ ಮಾಡಲು ಶಕ್ತಿ ಇಲ್ಲದವರು ಇಂತಹ ಕಾರ್ಯಕ್ರಮಗಳನ್ನ ಯಾಕೆ ಮಾಡಬೇಕು? ರಾಜ್ಯದ ಅನೇಕ ಭಾಗಗಳಿಂದ ಬಂದಿರುವ ಅಭ್ಯರ್ಥಿಗಳಿಗೆ ಊಟ, ಶೌಚಾಲಯ ಮಲಗಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಇದರ ಹೊಣೆಯನ್ನು ಹೊರಬೇಕು ಎಂದು ಹೇಳಿದರು.
ದೇಶ ಕಾಯುವುದಕ್ಕೆ ಎಂದು ಆಯ್ಕೆ ಪ್ರಕ್ರಿಯೆಗೆ ಬಂದವರಿಗೆ ಹಾಸನದಲ್ಲಿ ಒಳ್ಳೆಯ ಗೌರವವೇ ಸಿಕ್ಕಿದೆ. ಹೀಗೆ ಜಿಲ್ಲಾಡಳಿತದ ಅವ್ಯವಸ್ಥೆಯ ವಿರುದ್ಧ ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಉಳಿದಿರುವ ದಿನಗಳಲ್ಲಾದರೂ ಸೂಕ್ತ ರೀತಿಯ ವ್ಯವಸ್ಥೆ ಮಾಡಿಸಲಿ ಅನ್ನುವುದು ನಮ್ಮ ಆಶಯ ಎಂದು ಅಲ್ಲಿನ ಜನರು ಅಧಿಕಾರಿಗಳಿಗೆ ತಿಳಿಹೇಳಿದರು.