ಎ.ಮಂಜು ಹೋರಾಟ ಕುಟುಂಬ ರಾಜಕಾರಣದ ವಿರುದ್ಧವಂತೆ..!
Recommended Video
ಹಾಸನ, ಮಾರ್ಚ್ 21:ಮೊದಲಿನಿಂದಲೂ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದ ಅವತ್ತಿನ ಕಾಂಗ್ರೆಸ್ ಮುಖಂಡ ಇವತ್ತಿನ ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಮಟ್ಟ ಹಾಕಲು ಮಾಡಿದ ದೇವೇಗೌಡರ ತಂತ್ರ ಕೊನೆಗೂ ಫಲ ನೀಡಿಲ್ಲ.
ಎ.ಮಂಜು ಅವರ ಬಾಯಿಮುಚ್ಚಿಸಿದರೆ ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಸುಲಭವಾಗಿ ಹಾಸನದಿಂದ ಗೆಲ್ಲಿಸಿಬಿಡಬಹುದು ಎಂಬ ಲೆಕ್ಕಾಚಾರದಲ್ಲಿದ್ದ ದೇವೇಗೌಡರಿಗೆ ಈಗಿನ ಮಹತ್ವದ ಬೆಳವಣಿಗೆ ಆಘಾತ ತಂದಿರುವುದಂತು ನಿಜ.
ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಸೇರಿ ಸರ್ಕಾರ ರಚಿಸಲು ನಾಯಕರು ಮುಂದಾದ ಬೆನ್ನಲ್ಲೇ ಹಾಸನದಲ್ಲಿ ತಮ್ಮ ಕುಟುಂಬಕ್ಕೆ ಪ್ರಬಲ ವಿರೋಧಿಯಾಗಿದ್ದ ಎ.ಮಂಜು ಅವರ ಮೇಲೆ ಹಿಡಿತ ಸಾಧಿಸುವ ಕಾರ್ಯಗಳು ಜೆಡಿಎಸ್ ನಿಂದ ಸದ್ದಿಲ್ಲದೆ ನಡೆಯತೊಡಗಿದವು.
ಇಡೀ ರಾಜ್ಯದ ಕಾಂಗ್ರೆಸ್ ನಾಯಕರು ದೇವೇಗೌಡರ ಪರವಾಗಿ ನಿಂತಿದ್ದ ಸಮಯದಲ್ಲಿಯೇ ಎ.ಮಂಜು ಅವರು ದೇವೇಗೌಡರ ಕುಟುಂಬದ ವಿರುದ್ಧ ಹಾಸನದಲ್ಲಿ ಗುಡುಗಲಾರಂಭಿಸಿದ್ದರು. ಭೂ ಅವ್ಯವಹಾರವನ್ನು ಬಯಲಿಗೆಳೆಯಲಾರಂಭಿಸಿದ್ದರು.
ರಂಗೇರಿತು ಹಾಸನ ಲೋಕಸಭೆ ಕಣ: ಎ. ಮಂಜು ಬಿಜೆಪಿ ಸೇರ್ಪಡೆ
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮೈತ್ರಿ ಧರ್ಮ ಪಾಲಿಸದ ಎ.ಮಂಜು ಅವರ ನಡೆಯಿಂದ ಸ್ವತಃ ಕಾಂಗ್ರೆಸ್ ಮುಖಂಡರೇ ವಿಚಲಿತರಾಗಿದ್ದರು. ಅದರಲ್ಲೂ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಅಭ್ಯರ್ಥಿ ಎಂಬುವುದನ್ನು ದೇವೇಗೌಡರು ಘೋಷಿಸಿದಾಗ ಅದನ್ನು ಎ.ಮಂಜು ವಿರೋಧಿಸಿದ್ದರು.
ಟಾಂಗ್ ನೀಡಬಲ್ಲ ನಾಯಕನಿರಲಿಲ್ಲ
ನಾವು(ಕಾಂಗ್ರೆಸ್ ನವರು) ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ಬೆಂಬಲ ನೀಡುತ್ತೇವೆ. ಪ್ರಜ್ವಲ್ ರೇವಣ್ಣಗೆ ನಮ್ಮ ಬೆಂಬಲವಿಲ್ಲ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದರು. ಆದರೆ ಎ.ಮಂಜು ಅವರ ಮಾತಿಗೆ ದೇವೇಗೌಡರಾಗಲೀ ಸ್ವತಃ ಕಾಂಗ್ರೆಸ್ ನಾಯಕರಾಗಲೀ ಸೊಪ್ಪು ಹಾಕಲೇ ಇಲ್ಲ. ಇದೇ ವೇಳೆಗೆ ಬಿಜೆಪಿಯಲ್ಲಿಯೂ ಹಾಸನದಿಂದ ಸ್ಪರ್ಧಿಸಿ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಬಲ್ಲ ನಾಯಕನಿರಲಿಲ್ಲ. ಎ.ಮಂಜು ಅವರ ಅಸಮಾಧಾನವನ್ನೇ ರಾಜಕೀಯವಾಗಿ ಬಳಸಿಕೊಂಡ ಬಿಜೆಪಿ ಕೊನೆಗೂ ಅವರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹಾಸನದಲ್ಲಿ ಜೆಡಿಎಸ್ ವಿರುದ್ಧ ಸೆಡ್ಡು ಹೊಡೆಯಲು ಎ ಮಂಜು ರೆಡಿ?
ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ
ಬಿಜೆಪಿ ಸೇರ್ಪಡೆ ಬಳಿಕ ಎ.ಮಂಜು ಇದೀಗ ನೇರವಾಗಿಯೇ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಕುಟುಂಬ ರಾಜಕಾರಣದಿಂದ ಹಾಸನ ಮುಕ್ತಿ ಹೊಂದಿದರೆ ಇತರೆ ಎಲ್ಲ್ಲ ಪಕ್ಷದ ಎರಡನೇ ಹಂತದ ರಾಜಕಾರಣಿಗಳಿಗೆ ಅವಕಾಶ ದೊರೆತಂತಾಗುತ್ತದೆ ಎಂದು ಹೇಳುವ ಮೂಲಕ ನೇರಾನೇರ ರಾಜಕೀಯ ಯುದ್ಧ ಸಾರಿದ್ದಾರೆ.
ಮಾಜಿ ಸಚಿವ ಎ.ಮಂಜು ಬಿಜೆಪಿಗೆ, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ?
ಲೇವಡಿ ಮಾಡಿದ ಎ.ಮಂಜು
ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ನವರು ನಾವಲ್ಲದೆ ಬೇರೆ ಯಾರೂ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹಿಂದೆಯೇ ಹೇಳಿದ್ದರು. ಆದರೆ ಮಾತಿಗೆ ತಪ್ಪಿದ ಅವರು ಹೆಂಡತಿ ಮಕ್ಕಳಲ್ಲದೆ ಬೀಗರಾದ ಡಿ.ಸಿ.ತಮ್ಮಣ್ಣ, ಸಿ.ಎನ್.ಬಾಲಕೃಷ್ಣ ಸೇರಿದಂತೆ ಎಲ್ಲರನ್ನು ಬಗಲಲ್ಲಿಟ್ಟುಕೊಂಡು ಕುಟುಂಬದ ಕಂಪನಿಯಾಗಿ ಮಾಡಿಕೊಂಡಿದ್ದಾರೆ ಎಂದು ಎ.ಮಂಜು ಲೇವಡಿ ಮಾಡಿದ್ದಾರೆ.
ನಾನು ನಮ್ಮದೇ ಆದ ಸಿದ್ಧಾಂತದಲ್ಲಿದ್ದೇನೆ
ಜೆಡಿಎಸ್ ನಾಯಕರ ಮನೆಯಲ್ಲಿ ಊಟ ಮಾಡದೆ, ಮಲಗದೆ ಇದ್ದ ಏಕೈಕ ಮಂತ್ರಿ ನಾನು. ನಾನು ನಮ್ಮದೇ ಆದ ಸಿದ್ಧಾಂತದಲ್ಲಿದ್ದೇನೆ. ಕೈನಾಯಕರಿಗೆ ಜಿಲ್ಲೆಯಲ್ಲಿ ಯಾವ ರೀತಿ ಗೌರವ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ, ಈ ಬಗ್ಗೆ ರಾಜ್ಯದ ನಾಯಕರ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಇದರಿಂದ ನನಗೆ ಬೇಸರವಾಗಿದೆ ಆದ್ದರಿಂದ ನಾನು ಬದಲಾಗಿದ್ದಾಗಿ ಎ.ಮಂಜು ಹೇಳಿದ್ದಾರೆ.
ಗೆಲುವಿಗೆ ಎ.ಮಂಜು ಯಾವ ರೀತಿಯ ತಂತ್ರ ಮಾಡುತ್ತಾರೆ? ಇದಕ್ಕೆ ದೇವೇಗೌಡರ ಕುಟುಂಬ ಪ್ರತಿತಂತ್ರ ಏನು ಮಾಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.