ಹಾಸನ: ಪ್ರೇಯಸಿ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ; 7 ವರ್ಷದ ಪ್ರಕರಣಕ್ಕೆ ಮುಕ್ತಿ
ಹಾಸನ, ಜನವರಿ 3: ಅದು ಬರೊಬ್ಬರಿ ಏಳು ವರ್ಷಗಳ ಹಿಂದೆ ನಡೆದಿದ್ದ ಕೊಲೆ. ತಾನು ಪ್ರೀತಿಸಿದ್ದ ಯುವತಿ ಬೇರೆಯವರ ಜೊತೆ ಮದುವೆಯಾಗಬಾರದು ಎಂದು ದೂರದ ಜಾಗಕ್ಕೆ ಕರೆದೊಯ್ದು ಕೊಂದಿದ್ದ ವಿವಾಹಿತ ಪಾಗಲ್ ಪ್ರೇಮಿ, ತಾನು ಬಚಾವ್ ಆಗುವುದಕ್ಕೆ ಮಾಡಿದ್ದ ಎಲ್ಲಾ ಪ್ಲಾನ್ಗಳೂ ಇದೀಗ ವಿಫಲವಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಿರಿಬೊಮ್ಮನಹಳ್ಳಿಯ ಲತಾಮಣಿ ಡಿ.ಎಡ್ ಮಾಡಿಕೊಂಡು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಅರಸೀಕೆರೆ ತಾಲ್ಲೂಕಿನ ಗುಂಡಕಾನಳ್ಳಿಯ ಟ್ಯಾಕ್ಸಿ ಡ್ರೈವರ್ ಆಗಿದ್ದ ರಾಜಶೇಖರ್ ಪರಿಚಯ ಗೆಳೆತನಕ್ಕೆ ತಿರುಗಿದೆ. ನಂತರ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. ಆದರೆ ಪ್ರೀತಿಸಿದವಳ ಬಿಟ್ಟು ಬೇರೊಬ್ಬಳನ್ನು ಮದುವೆಯಾಗಿದ್ದ ರಾಜಶೇಖರ್, ತನ್ನ ಪ್ರೇಯಸಿ ಜೊತೆ ಮಾತ್ರ ಸಂಬಂಧ ಕಡಿದುಕೊಂಡಿರಲಿಲ್ಲ.
ಆತನಿಗೆ ಮದುವೆಯಾದ ಬಳಿಕ ತಾನು ಬೇರೊಬ್ಬ ಹುಡುಗನ ಮದುವೆಯಾಗಲು ತೀರ್ಮಾನ ಮಾಡಿಕೊಂಡಿದ್ದ ಆಕೆ, ಎಂಗೇಜ್ಮೆಂಟ್ ಮಾಡಿಕೊಂಡಿದ್ದಳು. ಯಾವಾಗ ತನ್ನ ಸ್ನೇಹ ಕಡಿದುಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದಾಳೆ ಎಂದು ಗೊತ್ತಾಯಿತೋ, ರಾಜಶೇಖರ್ ಒಳಗೊಳಗೆ ಕುಂದು ಹೋಗಿದ್ದ.
ನೀನು ಈ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬೇಕು, ಇಲ್ಲಾ ಅಂದರೆ ನಮ್ಮಿಬ್ಬರ ಪ್ರೇಮ ಕಹಾನಿಯನ್ನು ಆ ಹುಡುಗನಿಗೆ ಹೇಳಿ ಬಿಡುತ್ತೀನಿ ಎಂದು ಹೆದರಿಸಿದ್ದ. ಈ ವಿಚಾರ ಮಾತಾಡೋಣ ಬಾ ಎಂದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಕರೆದೊಯ್ದು, ಅಲ್ಲಿ ಆಕೆಯ ಮನಸ್ಸನ್ನು ಬದಲಾಯಿಸಲು ಯತ್ನಿಸಿದ್ದಾನೆ.
ಆದರೆ ನಮ್ಮಿಬ್ಬರ ಸಂಬಂಧ ಇಲ್ಲಿಗೆ ಮುಗಿಯಬೇಕು ಎಂದು ಪಟ್ಟು ಹಿಡಿದಾಕೆಯನ್ನು ಅಲ್ಲಿಯೇ ಕುತ್ತಿಗೆ ಬಿಗಿದು ಕೊಂದು ಆಕೆಯ ಮೈಮೇಲಿನ ಒಡವೆ ತಂದು ಅಡವಿಟ್ಟು ತನ್ನಪಾಡಿಗೆ ತಾನು ಇದ್ದು ಬಿಟ್ಟಿದ್ದ. ಆದರೆ ಹುಡುಗಿ ಕಾಣೆಯಾದ ಕೇಸ್ ಬೆನ್ನಟ್ಟಿದ್ದ ಬಾಣಾವರ ಪೊಲೀಸರು ಲತಾಮಣಿ ಕಾಲ್ ರೆಕಾರ್ಡ್ ಆಧರಿಸಿ ಆರೋಪಿ ಪತ್ತೆ ಮಾಡಿದರು. ಏಳು ವರ್ಷ ವಿಚಾರಣೆ ನಡೆಸಿದ ಕೋರ್ಟ್ ನಂಬಿಸಿ ಕರೆದೊಯ್ದು ಕೊಲೆ ಮಾಡಿದ ಪಾಪಿಗೆ ಹಾಸನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2014ರ ಜುಲೈ 23ರಂದು ಬಾಣಾವರದಲ್ಲಿ ಕೆಲಸ ಇದೆ ಎಂದು ಮನೆಯಿಂದ ಹೊರಟಿದ್ದ ಲತಾಮಣಿ ವಾಪಸ್ ಬಂದಿರಲಿಲ್ಲ, ಎರಡು ದಿನ ಆದರೂ ಮಗಳು ಮನೆಗೆ ಬಾರದಿದ್ದಾಗ ಬಾಣಾವರ ಪೊಲೀಸ್ ಠಾಣೆಗೆ ಬಂದಿದ್ದ ತಾಯಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಈ ಕೇಸ್ ಬೆನ್ನಟ್ಟಿದ ಪೊಲೀಸರು ಲತಾಮಣಿ ಫೋನ್ ನಂಬರ್ ಕಾಲ್ ಡೀಟೆಲ್ಸ್ ಪಡೆದಾಗ ಗುಂಡಕಾನಳ್ಳಿಯ ರಾಜಶೇಖರ್ಗೆ ಆಕೆ ಕೊನೆಯ ಕರೆ ಮಾಡಿರುವುದು ಗೊತ್ತಾಗುತ್ತದೆ.
ಕೂಡಲೇ ಆತನನ್ನು ಕರೆತಂದು ವಿಚಾರಣೆ ಮಾಡಿದಾಗ ಮದುವೆಯಾಗಿದ್ದ ತನ್ನೊಟ್ಟಿಗೆ ಸ್ನೇಹ ಮುಂದುವರೆಸುವುದಕ್ಕೆ ನಿರಾಕರಿಸಿದ್ದಳು. ಹಾಗಾಗಿ ಆಕೆಯನ್ನು ಕೊಂದಿದ್ದು, ಬಳಿಕ ಆಕೆಯ ವಸ್ತುಗಳನ್ನು ಡೀಸೆಲ್ ಹಾಕಿ ಸುಟ್ಟಿರುವುದಾಗಿ ಆರೋಪಿ ರಾಜಶೇಖರ್ ಒಪ್ಪಿಕೊಂಡಿದ್ದಾನೆ. ಎಂಟು ವರ್ಷ ವಿಚಾರಣೆ ನಡೆಸಿದ ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಲ್ಲಾ ಸಾಕ್ಷಿಗಳನ್ನು ವಿಚಾರಣೆ ಮಾಡಿತ್ತು.
ಅಂದಿನ ಅರಸೀಕೆರೆ ಗ್ರಾಮಾಂತರ ವೃತ್ತದ ಸಿಪಿಐ ಗಂಗಾಧರಪ್ಪ ನೇತೃತ್ವದ ತಂಡ ನಡೆಸಿದ ತನಿಖೆ ಆಧರಿಸಿ ಆರೋಪಿಯನ್ನು ಅಪರಾಧಿ ಎಂದು ಆದೇಶ ಹೊರಡಿಸಿದ ನ್ಯಾಯಾದೀಶರಾದ ಕೆ. ನಾರಾಯಣಪ್ರಸಾದ್, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇತ್ತ ಏಳು ವರ್ಷಗಳಿಂದ ಮಗಳ ಸಾವಿಗಾಗಿ ಹೋರಾಟ ನಡೆಸಿದ್ದ ಆ ಹೆತ್ತಮ್ಮ ಮನೆಯಲ್ಲಿ ಗಂಡು ಮಕ್ಕಳಿಲ್ಲ ಹಾಗಾಗಿಯೇ ನನ್ನ ಆಸ್ತಿ ಹೊಡೆಯಲು ಮಗಳನ್ನು ನಂಬಿಸಿ ನಾಟಕ ಮಾಡಿ ಅದು ಆಗುವುದಿಲ್ಲ ಅನ್ನೋದು ಖಾತ್ರಿಯಾದಾಗ ಆಕೆಯನ್ನೇ ಕೊಲೆ ಮಾಡಿದ್ದ ಹಂತಕನಿಗೆ ಶಿಕ್ಷೆಯಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆ ತಾನು ಮದುವೆಯಾಗಿದ್ದರೂ ತಾನು ಪ್ರೀತಿಸಿದ್ದವಳು ಮಾತ್ರ ತನ್ನಿಂದ ಕೈತಪ್ಪಿ ಹೋಗಬಾರದು ಎನ್ನುವ ದುರಾಲೋಚನೆಗೆ ಬಿದ್ದ ಪಾಪಿಯೊಬ್ಬನ ನೀಚತನಕ್ಕೆ ಅಮಾಯಕಿಯೊಬ್ಬಳು ಬಲಿಯಾಗಿದ್ದಾಳೆ. ಮಗಳ ಕೊಂದ ಪಾಪಿಗೆ ಶಿಕ್ಷೆ ಆಗಲೇಬೇಕೆಂದು ಏಳು ವರ್ಷ ಹೋರಾಟ ಮಾಡಿದ ಆ ತಾಯಿಯ ಛಲ ಗೆದ್ದಿದೆ, ಪ್ರೀತಿಯ ಹೆಸರಿನಲ್ಲಿ ವಂಚಿಸಿ ಕೊಂದ ಹಂತಕ ಪ್ರೇಮಿಗೆ ಶಿಕ್ಷೆ ಆಗಿದೆ.
Recommended Video