ಮಹಾಮಸ್ತಕಾಭಿಷೇಕ ಮತ್ತು ಹಾಸನದ 7 ಸುಂದರ ಪ್ರವಾಸಿ ತಾಣ
ಹೊಯ್ಸಳ ಸಾಮ್ರಾಜ್ಯದ ಕೇಂದ್ರವಾಗಿದ್ದ ಹಾಸನ ಹಲವು ಪ್ರವಾಸಿ ತಾಣಗಳಿಂದಲೂ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಯಶಸ್ವೀ ರಾಜಮನೆತನಗಳಲ್ಲೊಂದಾದ ಹೊಯ್ಸಳರು ಇಲ್ಲಿನ ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ.
In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ
ಸದ್ಯಕ್ಕೆ ಹಾಸನ ಎಂದೊಡನೆ ಥಟ್ಟಂತ ನೆನಪಾಗೋದು ಮಹಾಮಸ್ತಕಾಭಿಷೇಕ. 88 ನೇ ಮಹಾಮಸ್ತಕಾಭಿಷೇಕದ ನಿಮಿತ್ತ ಜಿಲ್ಲೆಯ ತುಂಬ ಈಗಾಗಲೇ ಹಬ್ಬದ ವಾತಾವರಣ ಮನೆಮಾಡಿದೆ. ಇಲ್ಲಿನ ಶ್ರವಣಬೆಳಗೊಳದ ಬಾಹುಬಲಿಗೆ ಫೆ.17 ರಿಂದ 25 ರವರೆಗೆ ನಡೆಯಲಿರುವ ಮಹಾಮಜ್ಜನಕ್ಕಾಗಿ ಸಾವಿರಾರು ಜನರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಫೆ.7 ರಿಂದಲೇ ಅಧಿಕೃತವಾಗಿ ಆರಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹಾಮಸ್ತಕಾಭಿಷೇಕವನ್ನು ಉದ್ಘಾಟಿಸಿದ್ದಾರೆ.
ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ: ಹಿನ್ನಲೆ, ಮಹತ್ವ
ಈಗಾಗಲೇ ಶ್ರವಣಬೆಳಗೊಳಕ್ಕೆ ಹೊರಡಲು ಸಿದ್ಧರಾಗಿರುವವರಿಗೆ ಹಾಸನದ ಪ್ರಮುಖ 7 ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಒನ್ ಇಂಡಿಯಾ ಮಾಡುತ್ತಿದೆ. (ಚಿತ್ರಕೃಪೆ: ಹಾಸನ ಜಿಲ್ಲೆ ವೆಬ್ ಸೈಟ್)
ಶ್ರವಣಬೆಳಗೊಳ
ಹಾಸನಕ್ಕೆ ಹೋದವರು ಶ್ರವಣ ಬೆಳಗೊಳಕ್ಕೆ ಹೋಗದಿದ್ದರೆ ಆ ಪ್ರವಾಸವೇ ವ್ಯರ್ಥವಾದಂತರ್ಥ! 27 ಮೀಟರ್ ಎತ್ತರದ ಇಲ್ಲಿನ ಬಾಹುಬಲಿ ವಿಗ್ರಹವನ್ನು ನೋಡಿ, ವಿರಾಗಿಯ ಆಶೀರ್ವಾದ ಪಡೆದರೆ ಅದೇನೋ ಹುಮ್ಮಸ್ಸು. ಹಾಸನದಿಂದ ಶ್ರವಣಬೆಳಗೊಳ 51 ಕಿ.ಮೀ.ದೂರದಲ್ಲಿದೆ.
ಬೇಲೂರು
ವಾಸ್ತುಶಿಲ್ಪಕ್ಕೆ ಕರ್ನಾಟಕದ ಕೊಡುಗೆ ಎಂದೊಡನೆ ಮೊದಲು ನೆನಪಾಗುವ ಹೆಸರುಗಳಲ್ಲಿ ಬೇಲೂರಿಗೂ ಸ್ಥಾನವಿದೆ. ಇಲ್ಲಿನ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ತನ್ನ ಸುಂದರ ದೇವಾಲಯಗಳಿಂದಾಗಿ ಖ್ಯಾತಿ ಪಡೆದಿದೆ. ಇಲ್ಲಿನ ಚೆನ್ನಕೇಶ್ವರ ದೇವಾಲಯವಂತೂ ಶಿಲ್ಪಿಗಳ ಕ್ರಿಯಾಶೀಲತೆಗೆ ಕೈಗನ್ನಡಿ ಎನ್ನಿಸಿದೆ. ಹಾಸನದಿಂದ ಬೇಲೂರು 39 ಕಿ.ಮೀ.ದೂರದಲ್ಲಿದೆ.
ಗೊರೂರು
ಹಾಸನದಿಂದ ಸುಮಾರು 20 ಕಿ.ಮೀ.ದೂರದಲ್ಲಿರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಕಟ್ಟಲಾದ ಗೊರೂರು ಆಣೆಕಟ್ಟು ಮಳೆಗಾಲದ ಸಮಯದಲ್ಲಿ ನೋಡುವುದಕ್ಕೆ ತುಂಬಾ ಸುಂದರ. 146 ಅಡಿ ಎತ್ತರದ ಈ ಆಣೆಕಟ್ಟು ಹಾಸನದ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಶೆಟ್ಟಿಹಳ್ಳಿ
ಮುಳುಗುತ್ತಿರುವ, ಪಾಳುಬಿದ್ದ ಚರ್ಚ್ ವೊಂದರ ಅಮೋಘ ದೃಶ್ಯವೇ ಶೆಟ್ಟಿಹಳ್ಳಿಯ ಸೊಬಗನ್ನು ಇಮ್ಮಡಿಗೊಳಿಸಿದೆ. ಈ ಚರ್ಚ್ ಅನ್ನು 1860 ರಲ್ಲಿ ಕಟ್ಟಿದ್ದು. ಈ ಚರ್ಚಿನ ವಿಶೇಷತೆ ಎಂದರೆ ಮಳೆಗಾಲದಲ್ಲಿ ಮುಳುಗುವ ಇದು, ನೀರು ಕಡಿಮೆಯಾದಾಗ ಮಾತ್ರ ಪ್ರತ್ಯಕ್ಷವಾಗುತ್ತದೆ! ಇದು ಹಾಸನದಿಂದ ಕೇವಲ 13 ಕಿ.ಮೀ.ದೂರದಲ್ಲಿದೆ.
ಮಂಜರಾಬಾದ್
ಟಿಪ್ಪು ಸುಲ್ತಾನ್ ಕಟ್ಟಿದ್ದು ಎನ್ನಲಾದ ಮಂಜರಾಬಾದ್ ಕೋಟೆ(1792) ಸುಮಾರು 3200 ಅಡಿ ಎತ್ತರವಿದೆ. ಶತ್ರುಗಳಿಂದ ರಕ್ಷಣೆಗಾಗಿ ಈ ಕೋಟೆಯನ್ನು ಕಟ್ಟಿಸಲಾಯಿತು. ಈ ಕೋಟೆಯಲ್ಲಿ ಶತ್ರುಗಳಿಂದ ಪರಾರಿಯಾಗುವುದಕ್ಕೆ ಸುರಂಗಮಾರ್ಗವೂ ಇದೆ. ಮಂಜು(ಇಬ್ಬನಿ) ಎಂಬ ಶಬ್ದದಿಂದ ಈ ಕೋಟೆಗೆ ಮಂಜರಾಬಾದ್ ಎಂಬ ಹೆಸರು ಬಂದಿದೆ. ಹಾಸನದಿಂದ ಇಲ್ಲಿಗೆ 47 ಕಿ.ಮೀ.ದೂರದಲ್ಲಿದೆ.
ಹಳೆಬೀಡು
ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಪ್ರತಿನಿಧಿಯೆಂದು ಹಳೆಬೀಡನ್ನು ಕರೆದರೆ ಅತಿಶಯೋಕ್ತಿಯಾಗಲಾರದು. ಇಲ್ಲಿನ ಹೊಯ್ಸಳೇಶ್ವರ ದೇವಾಲಯ ವಿಶ್ವಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು 86 ವರ್ಷಗಳ ಕಾಲ ಕಟ್ಟಲಾಯಿತಾದರೂ ಇದು ಇಂದಿಗೂ ಪೂರ್ಣಗೊಂಡಿಲ್ಲ! ಇಲ್ಲಿನ ವಾಸ್ತುಶಿಲ್ಪ ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆ ಪ್ರತೀಕವೆನ್ನಿಸಿದೆ. ಹಾಸನದಿಂದ ಹಳೆಬೀಡು 30 ಕಿ.ಮೀ.ದೂರದಲ್ಲಿದೆ.
ಹಾಸನಾಂಬ ದೇವಾಲಯ
ಹಾಸನದ ಹಾಸನಾಂಬ ದೇವಾಲಯದ ವಿಶೇಷ ಅಂದರೆ ಇದನ್ನು ದೀಪಾವಳಿ ಸಂದರ್ಭದಲ್ಲಿ 12 ದಿನ ಮಾತ್ರವೇ ತೆರಯಲಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಪ್ರವಾಸಿಗರು ಬರುವುದು ಜಾಸ್ತಿ. ಈ ವರ್ಷ ಹಚ್ಚಿ ದೀಪ, ಇಲ್ಲಿ ಮುಂದಿನ ವರ್ಷದವರೆಗೂ ಬೆಳಗುತ್ತಿರುತ್ತದೆ ಎಂಬುದು ವಿಶೇಷ. ದ್ರಾವೀಡ ಶೈಲಿಯಲ್ಲಿರುವ ಹಾಸನಾಂಬ ದೇವಾಲಯ ಹಾಸನದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಇದು ಹಾಸನ ಪಟ್ಟಣದಿಂದ ಕೇವಲ 1 ಕಿ.ಮೀ.ದೂರದಲ್ಲಿದೆ.