ಹಾಸನ: ಹೆಂಡತಿ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನನ್ನು ಕೊಂದ ಪತಿ!
ಹಾಸನ, ಜುಲೈ 13 : ಲಿಫ್ಟ್ನಲ್ಲಿ ಬರುವಾಗ ಪತ್ನಿಯ ಕೈ ಟಚ್ ಮಾಡಿದ ಎಂದು ಅಪ್ರಾಪ್ತನೊಂದಿಗೆ ಮಾತಿನ ಚಕಮಕಿ ನಡೆಸಿದ ವ್ಯಕ್ತಿಯೊಬ್ಬ, ಹೆಂಡತಿಯ ಎದುರೇ ತನಗೆ ಅವಾಜ್ ಹಾಕಿದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವ ಅಮಾನುಷ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಜುಲೈ 9ರ ಶನಿವಾರ ರಾತ್ರಿ ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಾರ್ ನಲ್ಲಿ ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ರೌಡಿಶೀಟರ್ ಅಗಿರುವ ರಾಖಿ, ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಹೋಗಿದ್ದ, ಪಾರ್ಟಿ ಮುಗಿಸಿ ಬರುವ ವೇಳೆ ಲಿಫ್ಟ್ ನಲ್ಲಿ ತನ್ನ ಹೆಂಡತಿಯ ಕೈಗೆ ಟಚ್ ಮಾಡಿದ್ದನೆಂದು 17 ವರ್ಷದ ವಿನಯ್ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ.
Breaking: ಹರ್ಷನ ಕೊಲೆ ಆರೋಪಿಗಳ ವಿಡಿಯೋ ಕಾಲ್: ಪರಪ್ಪನ ಅಗ್ರಹಾರ ತಪಾಸಣೆ
ವಿನಯ್ ರೌಡಿಶೀಟರ್ ರಾಖಿಗೆ ಆವಾಜ್ ಹಾಕಿ ಅಲ್ಲಿಂದ ಹೋಗಿದ್ದ ಎನ್ನಲಾಗಿದ್ದು, ತನ್ನ ಪತ್ನಿ ಎದುರಿಗೆ ಅವಮಾನ ಮಾಡಿದ ಎಂದು ಸಿಟ್ಟಿಗೆದ್ದ ರಾಖಿ ತನ್ನ ಸಹಚರರೊಂದಿಗೆ ಭಾನುವಾರ ಯುವಕನ ಮನೆಗೆ ಬಂದು ಬಲವಂತವಾಗಿ ಎಳೆದೊಯ್ದು ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಂದು ಹಾಕಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ನನ್ನ ಮಗನನ್ನ ಕಿಡ್ನಾಪ್ ಮಾಡಿ, ಕೊಂದು ಹಾಕಿದ್ದಾರೆ, ನಮಗೆ ನ್ಯಾಯ ಕೊಡಿಸಿ ಎಂದು ವಿನಯ್ ಪೋಷಕರು ಆಗ್ರಹಿಸುತ್ತಿದ್ದಾರೆ.
ಇನ್ನು ಪಬ್ನಲ್ಲಿ ರಾಖಿ ಹಾಗೂ ವಿನಯ್ ನಡುವೆ ನಡೆದಿರೋ ಗಲಾಟೆಯ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಹಾಗೂ ತಾಯಿಯ ದೂರು ಆಧರಿಸಿ ತನಿಖೆಯನ್ನು ಆರಂಭಿಸಿರುವ ಪೊಲೀಸರು, ಘಟನೆ ಸಂಬಂಧ ರೌಡಿಶೀಟರ್ ರಾಖಿ, ಆತನ ಪತ್ನಿ ಸೇರಿ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ನೀಡಿರುವ ಮಾಹಿತಿ ಪ್ರಕಾರ ವಿನಯ್ ಕೊಲೆ ಮಾಡಿ, ಶವವನ್ನು ಸಕಲೇಶಪುರ ತಾಲೂಕಿನ ಗುಂಡ್ಯ ಸಮೀಪದ ಕೆಂಪುಹೊಳೆಗೆ ಬಿಸಾಡಿದ್ದಾರೆ. ಮರ್ಡರ್ ಮಾಡಿ ಸುಮಾರು 80 ಕಿಲೋ ಮೀಟರ್ ಹೆಚ್ಚು ದೂರು ಶವವನ್ನು ತೆಗೆದುಕೊಂಡು ಹೋಗಿ ಬಿಸಾಡಿದ್ದಾರೆ. ಆರೋಪಿಗಳು ಕೊಟ್ಟಿರುವ ಮಾಹಿತಿಯನ್ನಾಧರಿಸಿ, ಪೊಲೀಸರು ನಿನ್ನೆಯಿಂದ ಮೃತದೇಹ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ಕಳ್ಳನೆಂದು ಭಾವಿಸಿ ಬ್ಯಾಂಕ್ ಉದ್ಯೋಗಿಯನ್ನು ಕೊಲೆ ಮಾಡಿದ್ದ ಸೆಕ್ಯುರಿಟಿ ಗಾರ್ಡ್ ಸೆರೆ
ಮಂಗಳವಾರ ಮಧ್ಯಾಹ್ನ ಮೃತ ದೇಹ ಸಕಲೇಶಪುರ ತಾಲೂಕು ಕೆಂಪುಹೊಳೆ ಬಳಿ ಪತ್ತೆಯಾಗಿದೆ. ಇದೀಗ ಮೃತದೇಹ ಸಿಕ್ಕಿದ್ದು, ಕೊಲೆ ಎಂಬುದು ಸಾಬೀತಾದ ಮೇಲೆ ಮೊದಲು ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಹಾಸನ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಒಟ್ಟಾರೆ ಕುಡಿದ ಮತ್ತಿನಲ್ಲಿ ಆದ ಜಗಳ ಅಷ್ಟಕ್ಕೇ ಮುಗಿಯದೇ ವೈಯಕ್ತಿಕ ವರ್ಚಸ್ಸಿಗೆ ತಿರುಗಿದೆ. ಘಟನೆಯ ಮಾರನೇ ದಿನವೇ ಕೊಲೆಗೆ ಆಗಿರೋದು ನೋಡಿದರೆ ರೌಡಿಸಂ ಹವಾ ಮೆಂಟೈನ್ ಮಾಡಲು ರೌಡಿ ರಾಖಿ ಅಪ್ರಾಪ್ತನ ಕೊಲೆ ಮಾಡಿದ್ದಾನೆ. ರಾಕಿ ಸೇರಿ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೌಡಿಸಂ ಸ್ಟೇಟಸ್ ಮೆಂಟೈನ್ ಮಾಡಲು ರಾಖಿ ಒಂದು ಜೀವವನ್ನು ಪಡೆದಿರುವುದು ದುರಂತವೇ ಸರಿ.