ಅಸ್ಸಾಂಗೆ ಫೋಟೋಶೂಟ್ಗಾಗಿ ಕಾಂಗ್ರೆಸ್ ನಾಯಕರ ಭೇಟಿ: ಅಮಿತ್ ಶಾ
ಗುವಾಹಟಿ, ಮಾರ್ಚ್ 26: ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು ಪ್ರವಾಸಕ್ಕಾಗಿ ಅಸ್ಸಾಂಗೆ ಆಗಮಿಸುತ್ತಾರೆ ಎಂದು ಸಂಸದ ರಾಹುಲ್ ಗಾಂಧಿ ಮತ್ತು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆ ಕರೀಂಗಂಜ್ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಅವರು ಪ್ರಚಾರ ನಡೆಸಿದರು. ವೈವಿಧ್ಯತೆಯಲ್ಲಿ ಏಕತೆ ನಮ್ಮ ಸಂಸ್ಕೃತಿಯ ವಿಶಿಷ್ಟ ಲಕ್ಷಣವಾಗಿದೆ, ಅದು ನಮ್ಮನ್ನು ಬಲಪಡಿಸುತ್ತದೆ ಎಂದರು.
ಪಂಚ ರಾಜ್ಯಗಳಲ್ಲಿ ಬಿಜೆಪಿ ಪಂಚರಾಗ; ಒಲಿಯೋದ್ಯಾರಿಗೆ ಅಧಿಕಾರ ಯೋಗ?
ಅಸ್ಸಾಂನಲ್ಲಿ ಇನ್ನೂ ಚಹಾ ಎಲೆಗಳೇ ಬೆಳೆದಿಲ್ಲ. ಈ ಸಂದರ್ಭದಲ್ಲಿ ಇಲ್ಲಿಗೆ ಬಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಚಹಾ ತೋಟದಲ್ಲಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ಕಿಡಿ ಕಾರಿದರು.
ಒಳನುಸುಳುವಿಕೆ ಹೆಚ್ಚುವ ಬಗ್ಗೆ ಅಮಿತ್ ಶಾ ಮಾತು:
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಪಕ್ಷ(AIUDF)ದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಒಳನುಸುಳುವಿಕೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ದೂಷಿಸಿದರು. ಸಂಸದ ರಾಹುಲ್ ಗಾಂಧಿಯವರು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನು ಅಸ್ಸಾಂ ಸಂಕೇತ ಎಂದು ಕರೆಯುತ್ತಾರೆ. ಇಂಥ ಮೈತ್ರಿಕೂಟಕ್ಕೆ ಅಧಿಕಾರ ಸಿಕ್ಕರೆ ನುಸುಳುಕೋರರ ಹಾವಳಿ ಹೆಚ್ಚಾಗುತ್ತದೆ. ಒಳನುಸುಳಿದವರು ರಾಜ್ಯದ ಯುವಕರ ಉದ್ಯೋಗವನ್ನೇ ಕಿತ್ತುಕೊಳ್ಳುವ ಅಪಾಯ ಹೆಚ್ಚಾಗಲಿದೆ ಎಂದು ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದರು.
ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ:
ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್.27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಏಪ್ರಿಲ್.1ರಂದು 39 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ಏಪ್ರಿಲ್ 6ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇ.2ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.