ಅಸ್ಸಾಂ-ಮಿಜೋರಾಂ ಗಡಿ ವಿವಾದ: ತೀವ್ರ ಹಿಂಸಾಚಾರ
ಗುವಾಹಟಿ, ಅಕ್ಟೋಬರ್ 19: ಅಸ್ಸಾಂ-ಮಿಜೋರಾಂ ಗಡಿ ಭಾಗದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಗುಂಪುಗಳ ನಡುವೆ ಸಂಭವಿಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಅನೇಕರಿಗೆ ಗಾಯಗಳಾಗಿವೆ.
ಶನಿವಾರ ಸಂಜೆ ಅಸ್ಸಾಂನ ಕಾಚರ್ ಜಿಲ್ಲೆಯ ಲೈಲಾಪುರ ಪ್ರದೇಶದಲ್ಲಿ ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಎರಡು ಗುಂಪುಗಳ ಮಧ್ಯೆ ಸಂಘರ್ಷ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಅಂತರ್ ರಾಜ್ಯ ಗಡಿ ಭಾಗದ ಲೈಲಾಪುರ ಪ್ರದೇಶದಲ್ಲಿ ಅನೇಕ ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರದ ದುಡ್ಡಲ್ಲಿ ಕುರಾನ್ ಕಲಿಸಬೇಕೇ?: ಶಿಕ್ಷಣ ಸಚಿವ
ಅಸ್ಸಾಂ-ಮಿಜೋರಾಂ ಗಡಿಯಲ್ಲಿನ ಒಟ್ಟಾರೆ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಅಸ್ಸಾಂನ ಕಾಚರ್ ಜಿಲ್ಲೆ ಮತ್ತು ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ಪ್ರದೇಶಗಳಲ್ಲಿನ ಗಡಿ ಭಾಗಗಳುದ್ದಕ್ಕೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಂದ ವಿವರ ನಡೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರಿಂದ ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯ ಮಾಹಿತಿ ಪಡೆದುಕೊಂಡಿದೆ. ಮಿಜೋರಾಂ ಮುಖ್ಯಮಂತ್ರಿ ಜೊರಾಂತಂಗ ಅವರೊಂದಿಗೆ ಸೋನೊವಾಲ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಸೋಮವಾರ ಪರಾಮರ್ಶನ ಸಭೆ ನಡೆಯಲಿದೆ.
ಅಸ್ಸಾಂ ತನ್ನದೆಂದು ಹೇಳಿಕೊಂಡಿರುವ ಪ್ರದೇಶದಲ್ಲಿ ಮಿಜೋರಾಂ ಸರ್ಕಾರವು ಕೋವಿಡ್ 19 ತಪಾಸಣಾ ಕೇಂದ್ರವನ್ನು ಸ್ಥಾಪಿಸಿತ್ತು. ಅಸ್ಸಾಂನಿಂದ ಬರುವ ವಾಹನಗಳ ಚಾಲಕರು ಮತ್ತು ಸಿಬ್ಬಂದಿಗೆ ಇಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಈ ವಿಚಾರವಾಗಿ ಜನರ ನಡುವೆ ಜಗಳ ಶುರುವಾಗಿದ್ದು, ಹಿಂಸಾಚಾರಕ್ಕೆ ಕಾರಣವಾಗಿದೆ.
ಅಸ್ಸಾಂ ಮತ್ತು ಮಿಜೋರಾಂ 164.6 ಕಿ.ಮೀ. ಉದ್ದದಷ್ಟು ಗಡಿಯನ್ನು ಹಂಚಿಕೊಂಡಿದ್ದು, ಗಡಿ ವಿವಾದ ಬಗೆಹರಿಸಿಕೊಳ್ಳುವ ಸಂಬಂಧ 1995ರಿಂದಲೂ ಮಾತುಕತೆಗಳು ನಡೆಯುತ್ತಿವೆ. ಆದರೆ ವಿವಾದಕ್ಕೆ ಪರಿಹಾರ ಸಿಕ್ಕಿಲ್ಲ.