ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ: ಸಿಎಂ ಹಿಮಂತ ಬಿಸ್ವಾ ಶರ್ಮಾ ಆತಂಕ
ಗುವಾಹಟಿ, ಆಗಸ್ಟ್ 4: ಅಸ್ಸಾಂ ರಾಜ್ಯವು ಜಿಹಾದಿ ಚಟುವಟಿಕೆಗಳ ರಾಜ್ಯವಾಗುತ್ತಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆತಂಕ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾ ದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸಾರುಲ್ ಇಸ್ಲಾಂ ಸಂಘಟನೆ ಜೊತೆ ನಂಟು ಹೊಂದಿರುವ ಅನೇಕ ಮಂದಿಯನ್ನು ಪೊಲೀಸರು ಗುರುತಿಸಿ ವಶಪಡಿಸಿಕೊಂಡ ಬೆನ್ನಲ್ಲೇ ಸಿಎಂ ಹಿಮಂತ ಬಿಸ್ವಾ ಶರ್ಮಾ ಈ ಹೇಳಿಕೆ ನೀಡಿದ್ದಾರೆ.
ಕಳೆದ ಐದು ತಿಂಗಳಲ್ಲಿ ಭಯೋತ್ಪಾದಕ ಸಂಘಟನೆ ಅನ್ಸಾರುಲ್ ಇಸ್ಲಾಂನೊಂದಿಗೆ ರಾಜ್ಯದ ಅನೇಕ ಮಂದಿಗೆ ನಂಟಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಭಯೋತ್ಪಾದನಾ ಸಂಘಟನೆಯ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಹಲವು ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಭಯೋತ್ಪಾದನ ಸಂಘಟನೆ ಜೊತೆ ನಂಟು ಹೊಂದಿರುವ ಶಂಕೆಯ ಮೇಲೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಭಾರತದ ಗಡಿ ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ- ಭದ್ರತಾ ಪಡೆಗಳ ಎಚ್ಚರಿಕೆ
"ಅಸ್ಸಾಂ ಪೊಲೀಸರು ಜಿಹಾದಿ ಸಂಘಟನೆಗಳ ವಿರುದ್ಧ ಹಲವಾರು ಯಶಸ್ವಿ ಕಾರ್ಯಾಚರಣೆಗಳು ನಡೆದಿವೆ. ಕಳೆದ 5 ತಿಂಗಳಲ್ಲಿ, ಅನ್ಸರುಲ್ಲಾ ಬಾಂಗ್ಲಾ ತಂಡದ ಭಯೋತ್ಪಾದಕ ಸಂಘಟನೆಯ 5 ಮಾದರಿಗಳನ್ನು ಇತರ ತನಿಖಾ ಸಂಸ್ಥೆಗಳ ಸಹಾಯದಿಂದ ಪೊಲೀಸರು ಭೇದಿಸಿದ್ದಾರೆ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದರು.
ಮದರಸಾಗಳ ಮೇಲೆ ಸಿಎಂ ಹಿಮಂತ ಶರ್ಮಾ ಆರೋಪ
ಅಸ್ಸಾಂ ರಾಜ್ಯದ ಹೊರಗಿನ ಇಮಾಮ್ಗಳಿಂದ ಖಾಸಗಿ ಮದರಸಾಗಳಲ್ಲಿ ಮುಸ್ಲಿಂ ಯುವಕರಿಗೆ ಶಿಕ್ಷಣ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಶರ್ಮಾ ಹೇಳಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಅನ್ಸಾರುಲ್ ಇಸ್ಲಾಂಗೆ ಸೇರಿದ ಆರು ಬಾಂಗ್ಲಾದೇಶಿ ಪ್ರಜೆಗಳು ಮದರಾಸಗಳಲ್ಲಿ ಯುವಕರಿಗೆ ಶಿಕ್ಷಣ ನೀಡಲು ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂದು ಹೇಳಿದರು. ಈ ವರ್ಷದ ಮಾರ್ಚ್ನಲ್ಲಿ ಬಾರ್ಪೇಟಾದಲ್ಲಿ ಪೊಲೀಸರು ಮೊದಲ ಪ್ರಕರಣವನ್ನು ಅನ್ನು ಭೇದಿಸಿದಾಗ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು.
ವಿಧ್ವಂಸಕ ಚಟುವಟಿಕೆಗಳಿಗೆ ಕಾರಣವಾಗುತ್ತದೆ
"ಜಿಹಾದಿ ಚಟುವಟಿಕೆಯು ಭಯೋತ್ಪಾದಕ ಅಥವಾ ಬಂಡಾಯ ಚಟುವಟಿಕೆಗಳಿಗಿಂತ ಬಹಳ ಭಿನ್ನವಾಗಿದೆ. ಇದು ಹಲವಾರು ವರ್ಷಗಳಿಂದ ಉಪದೇಶ ನೀಡುವದರ ಮೂಲಕ ಪ್ರಾರಂಭವಾಗುತ್ತದೆ, ನಂತರ ಇಸ್ಲಾಮಿಕ್ ಮೂಲಭೂತವಾದಕ್ಕೆ ಬೆಂಬಲ ನೀಡಲು ಸಕ್ರಿಯವಾಗಿ ಭಾಗವಹಿಸುತ್ತದೆ ಮತ್ತು ಅಂತಿಮವಾಗಿ ವಿಧ್ವಂಸಕ ಚಟುವಟಿಕೆಗಳಿಗೆ ಕಾರಣವಾಗುತ್ತದೆ" ಎಂದು ಸಿಎಂ ಹಿಮಂತ ಶರ್ಮಾ ಹೇಳಿದರು.
2016-17ರಲ್ಲಿ 'ರಾಜ್ಯವನ್ನು ಅಕ್ರಮವಾಗಿ ಪ್ರವೇಶಿಸಿದ' ಬಾಂಗ್ಲಾದೇಶಿ ಪ್ರಜೆಗಳು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹಲವಾರು ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ ಎಂದು ದೂರಿದ್ದಾರೆ.
ಜಮೀವುಲ್ ಹುದಾ ಮದರಸಾ ನೆಲಸಮ
ಹೊರಗಿನಿಂದ ಯಾರಾದರೂ ಮದರಸಾದಲ್ಲಿ ಶಿಕ್ಷಕರು ಅಥವಾ ಇಮಾಮ್ ಆಗಿದ್ದರೆ ಸ್ಥಳೀಯ ಪೊಲೀಸರಿಗೆ ತಿಳಿಸುವಂತೆ ಮುಖ್ಯಮಂತ್ರಿ ಹಿಮಂತ ಶರ್ಮಾ ಜನರಿಗೆ ಮನವಿ ಮಾಡಿದರು.
ಮೊಯಿರಾಬರಿ ಪ್ರದೇಶದಲ್ಲಿ ಮುಸ್ತಫಾ ನಡೆಸುತ್ತಿದ್ದ ಜಮೀವುಲ್ ಹುದಾ ಮದರಾಸವನ್ನು ಕೆಡವಲಾಗಿದೆ ಎಂದು ಮೊರಿಗಾಂವ್ ಜಿಲ್ಲೆಯ ಪೊಲೀಸ್ ಅಧೀಕ್ಷಕ (ಎಸ್ಪಿ) ಅಪರ್ಣಾ ಎನ್ ತಿಳಿಸಿದ್ದಾರೆ.
"ಗುರುವಾರ ಮೋರಿಗಾಂವ್ನಲ್ಲಿ ಜಮಿಯುಲ್ ಹುದಾ ಮದ್ರಸವನ್ನು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಯುಎಪಿಎ ಅಡಿಯಲ್ಲಿ ಕೆಡವಲಾಯಿತು. ಈ ಮದರಸಾದಲ್ಲಿ 43 ವಿದ್ಯಾರ್ಥಿಗಳು ಓದುತ್ತಿದ್ದು, ಈಗ ಬೇರೆ ಬೇರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಮುಸ್ತಫಾ ಅಲಿಯಾಸ್ ಮುಫ್ತಿ ಮುಸ್ತಫಾ 2017 ರಲ್ಲಿ ಭೋಪಾಲ್ನಿಂದ ಇಸ್ಲಾಮಿಕ್ ಕಾನೂನಿನಲ್ಲಿ ಡಾಕ್ಟರೇಟ್ ಪಡೆದಿದ್ದರು" ಎಂದು ಅಸ್ಸಾಂ ಸಿಎಂ ಮಾಹಿತಿ ನೀಡಿದ್ದಾರೆ.
2022ರ ಮಾರ್ಚ್ನಲ್ಲಿ ಬಾರ್ಪೇಟಾದಿಂದ ಅನ್ಸರುಲ್ಲಾ ಬಾಂಗ್ಲಾ ತಂಡದೊಂದಿಗೆ (ಎಬಿಟಿ) ಸಂಬಂಧ ಹೊಂದಿದ್ದ ಆರು ಸದಸ್ಯರನ್ನು ಪಡೆಗಳು ಬಂಧಿಸಿವೆ ಎಂದು ಶರ್ಮಾ ಹೇಳಿದ್ದಾರೆ.
ಭಯೋತ್ಪಾದಕ ಸಂಘಟನೆ ಜೊತೆ ನಂಟು
"ಕಳೆದ ವಾರ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ 11 ಮಂದಿ, ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸಾರುಲ್ ಬಾಂಗ್ಲಾ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ತನಿಖೆ ದೃಢಪಡಿಸಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮೋರಿಗಾಂವ್, ಗೋಲ್ಪಾರಾ, ಗುವಾಹಟಿ ಮತ್ತು ಬರ್ಪೇಟಾದಿಂದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿದ್ದ 'ಜಿಹಾದಿ ಸಾಹಿತ್ಯ ಮತ್ತು ವಿಡಿಯೋಗಳು' ಸೇರಿದಂತೆ ಹಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.