ಅಸ್ಸಾಂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗ್ತಾರಾ ಮಾಜಿ ಸಿಜೆಐ ರಂಜನ್ ಗೊಗೊಯ್?
ಗುವಾಹಟಿ, ಆಗಸ್ಟ್ 24: ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ರಂಜನ್ ಗೊಗೊಯ್ ಅವರು ಮುಂದಿನ ವರ್ಷ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವನೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ ಎಂಬ ಸುದ್ದಿ ತೀವ್ರ ಸಂಚಲನ ಮೂಡಿಸಿದೆ.
ಅಸ್ಸಾಂನ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಈ ಹೇಳಿಕೆ ನೀಡಿದ್ದರು. ಆದರೆ, ರಂಜನ್ ಗೊಗೊಯ್ ಇದನ್ನು ನಿರಾಕರಿಸಿದ್ದಾರೆ.
ರಂಜನ್ ಗೋಗಾಯ್ ಪ್ರಮಾಣ ವಚನ; ಪ್ರತಿಪಕ್ಷಗಳ ಸಭಾತ್ಯಾಗ
ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಸಿದ್ಧಪಡಿಸಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯ್ ಅವರ ಹೆಸರು ಇದೆ ಎಂದು ನನ್ನ ಮೂಲಗಳಿಂದ ಗೊತ್ತಾಗಿದೆ. ಬಹುಶಃ ಅವರನ್ನು ಅಸ್ಸಾಂನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಬಹುದು ಎಂದು ನನಗೆ ಅನಿಸುತ್ತದೆ. ಅವರು ರಾಜ್ಯಸಭೆಯ ಸದಸ್ಯತ್ವವನ್ನು ಒಪ್ಪಿಕೊಳ್ಳುವ ಮೂಲಕ ಹಂತಹಂತವಾಗಿ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ತರುಣ್ ಗೊಗೊಯ್ ಹೇಳಿದ್ದರು. ಮುಂದೆ ಓದಿ.
ಅಯೋಧ್ಯಾ ತೀರ್ಪಿಗೆ ಉಡುಗೊರೆ
ಸಿಜೆಐ ರಾಜ್ಯಸಭೆಗೆ ಹೋಗಬಹುದಾದರೆ ಅವರು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಹುದ್ದೆಯನ್ನೂ ಒಪ್ಪಿಕೊಳ್ಳಬಹುದು. ಇದೆಲ್ಲವೂ ರಾಜಕೀಯ. ಅಯೋಧ್ಯಾ ರಾಮಮಂದಿರ ತೀರ್ಪಿನ ವಿಚಾರದಿಂದ ರಂಜನ್ ಗೊಗೊಯ್ ಬಗ್ಗೆ ಬಿಜೆಪಿ ಸಂತುಷ್ಟವಾಗಿದೆ. ಅವರೇಕೆ ರಾಜ್ಯ ಸಭಾ ಸದಸ್ಯತ್ವ ತಿರಸ್ಕರಿಸಲಿಲ್ಲ? ಅವರು ಮಾನವಹಕ್ಕುಗಳ ಆಯೋಗ ಅಥವಾ ಇತರೆ ಹಕ್ಕುಗಳ ಆಯೋಗಕ್ಕೆ ಸುಲಭವಾಗಿ ಅಧ್ಯಕ್ಷರಾಗಬಹುದಾಗಿತ್ತು. ಅವರು ರಾಜಕೀಯ ಆಕಾಂಕ್ಷಿ. ಹೀಗಾಗಿ ಈ ನಾಮನಿರ್ದೇಶನವನ್ನು ಒಪ್ಪಿಕೊಂಡರು ಎಂದು ತರುಣ್ ಗೊಗೊಯ್ ಟೀಕಿಸಿದ್ದರು.
ನನಗೆ ಅಂತಹ ಆಸೆ ಇಲ್ಲ
ಇದನ್ನು ಅಲ್ಲಗಳೆದಿರುವ ಸುಪ್ರೀಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನಾನು ರಾಜಕಾರಣಿಯಲ್ಲ. ನನಗೆ ಅಂತಹ ಉದ್ದೇಶ ಅಥವಾ ಆಕಾಂಕ್ಷೆಯಿಲ್ಲ. ನನಗೆ ಅಂತಹ ಯಾವ ಸಾಧ್ಯತೆಯನ್ನು ಯಾರೂ ಉಲ್ಲೇಖಿಸಿಲ್ಲ ಎಂದಿದ್ದಾರೆ.
ಪ್ರಮಾಣವಚನ ತೆಗೆದುಕೊಂಡು ಮಾತನಾಡುತ್ತೇನೆ; ರಂಜನ್ ಗೊಗಯ್
ಜನರಿಗೆ ಅರ್ಥವಾಗಿಲ್ಲ
ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯತ್ವ ಮತ್ತು ರಾಜಕೀಯ ಪಕ್ಷವೊಂದರ ನಾಮನಿರ್ದೇಶಿತ ಸದನಕ್ಕೆ ಆಯ್ಕೆಯಾಗುವುದರ ನಡುವಿನ ವ್ಯತ್ಯಾಸವನ್ನು ಜನರು ಅರ್ಥಮಾಡಿಕೊಳ್ಳದೆ ಇರುವುದು ದುರದೃಷ್ಟಕರ. ನಾನು ರಾಜ್ಯಸಭೆಯ ನನ್ನ ನಾಮನಿರ್ದೇಶನವನ್ನು ಬಹಳ ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ. ಏಕೆಂದರೆ ನನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದರ ಜತೆಗೆ ನನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ. ಇದು ನನ್ನನ್ನು ರಾಜಕಾರಣಿಯನ್ನಾಗಿ ಮಾಡುತ್ತದೆಯೇ? ಎಂದು ರಂಜನ್ ಗೊಗೊಯ್ ಪ್ರಶ್ನಿಸಿದ್ದಾರೆ.
ಅರ್ಥಹೀನ ಮಾತು
ಅಸ್ಸಾಂ ಬಿಜೆಪಿ ಘಟಕ ಕೂಡ ತರುಣ್ ಗೊಗೊಯ್ ಹೇಳಿಕೆಯು ಅರ್ಥಹೀನ ಎಂದು ಟೀಕಿಸಿದೆ. ಕೆಲವು ಜನರು ವಯಸ್ಸಾಂದಂತೆ ತಲೆಬುಡವಿಲ್ಲದ ಮಾತುಗಳನ್ನಾಡಲು ಶುರುಮಾಡುತ್ತಾರೆ. ತರುಣ್ ಗೊಗೊಯ್ ಅವರನ್ನು ಆ ವರ್ಗಕ್ಕೆ ಸೇರಿಸಲು ಬಯಸುತ್ತೇವೆ ಎಂದು ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಹೇಳಿದ್ದಾರೆ.