ಮೋದಿಯನ್ನು ಚಾಯ್ವಾಲಾ ಎಂದವರು ಈಗ ಚಹಾ ಎಲೆ ಕೀಳುತ್ತಿದ್ದಾರೆ; ರಾಜನಾಥ್ ಸಿಂಗ್
ಅಸ್ಸಾಂ, ಮಾರ್ಚ್ 23: ಪ್ರಧಾನಿ ನರೇಂದ್ರ ಮೋದಿಯವರನ್ನು ಚಾಯ್ ವಾಲಾ ಎಂದು ಅಪಹಾಸ್ಯ ಮಾಡುತ್ತಿದ್ದವರು ಈಗ ಚಹಾ ತೋಟಗಳಲ್ಲಿ ಚಹಾ ಎಲೆಗಳನ್ನು ಕೀಳುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ಮಂಗಳವಾರ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಈ ಮುನ್ನ ಮೋದಿ ಅವರನ್ನು ಚಾಯ್ ವಾಲಾ ಎಂದು ಅಪಹಾಸ್ಯ ಮಾಡುತ್ತಿದ್ದರು. ಈಗ ಅದೇ ಜನರು ಟೀ ಎಲೆಗಳನ್ನು ಕೀಳುತ್ತಿದ್ದಾರೆ. ಚಾಯ್ ವಾಲಾ ಎಂದು ಅಪಹಾಸ್ಯ ಮಾಡಿದವರನ್ನು ಮೋದಿ ಚಹಾ ತೋಟಗಳಿಗೇ ಕರೆಸಿದ್ದಾರೆ. ಎಚ್ಚರವಾಗಿರಿ, ನಿಜವಾದ ಚಾಯ್ ವಾಲಾ ನಮ್ಮೊಂದಿಗಿದ್ದಾರೆ" ಎಂದು ಹೇಳಿದ್ದಾರೆ.
"ಚಹಾ ಕಾರ್ಮಿಕರ ಸಮಸ್ಯೆ ಚಹಾ ಮಾರುವವರಿಗಿಂತ ಇನ್ಯಾರಿಗೆ ಹೆಚ್ಚು ಅರ್ಥವಾಗುತ್ತೆ?"
ಈಚೆಗಷ್ಟೇ ಅಸ್ಸಾಂಗೆ ಭೇಟಿ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಚಹಾ ತೋಟಗಳಿಗೆ ಹೋಗಿ ಅಲ್ಲಿನ ಕಾರ್ಮಿಕರೊಂದಿಗೆ ತಾವೂ ಸೇರಿ ಚಹಾ ಎಲೆ ಕಿತ್ತಿದ್ದರು. ಈ ಫೋಟೊ ವೈರಲ್ ಕೂಡ ಆಗಿತ್ತು. ರಾಹುಲ್ ಗಾಂಧಿ ಕೂಡ ಅಸ್ಸಾಂಗೆ ಭೇಟಿ ನೀಡಿದ್ದು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಚಹಾ ಕಾರ್ಮಿಕರಿಗೆ 365 ರೂಪಾಯಿ ದಿನಗೂಲಿ ನೀಡುವ ಭರವಸೆ ನೀಡಿದ್ದರು.
ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಿಂದ ಚುನಾವಣೆ ಆರಂಭವಾಗಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.