ಪೌರತ್ವ ಮಸೂದೆ ಬಗ್ಗೆ ಸುಳ್ಳುಸುದ್ದಿ ಹರಡಿಸಲಾಗುತ್ತಿದೆ: ಮೋದಿ ಆರೋಪ
ಗುವಾಹಟಿ, ಫೆಬ್ರವರಿ 9: 'ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಗಾಳಿ ಸುದ್ದಿಯನ್ನು ಹರಡಿಸಲಾಗುತ್ತಿದೆ. ಎಸಿ ಕೊಠಡಿಯಲ್ಲಿ ಕುಳಿತಿರುವ ಕೆಲವು ಜನರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಎರಡು ದಿನಗಳ ಈಶಾನ್ಯ ರಾಜ್ಯಗಳ ಭೇಟಿಗಾಗಿ ಅಸ್ಸಾಂಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, 'ಎನ್ಡಿಎ ಸರ್ಕಾರವು ಈಶಾನ್ಯ ರಾಜ್ಯಗಳ ಭಾಷೆ, ಸಂಸ್ಕೃತಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸಲು ಸಂಪೂರ್ಣ ಸಿದ್ಧವಾಗಿದೆ' ಎಂದು ಭರವಸೆ ನೀಡಿದರು.
ಮೋದಿ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಜನರು ಸೇರಿದ್ದರು. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂ ವಿದ್ಯಾರ್ಥಿ ಘಟಕದ ಸದಸ್ಯರು ಶುಕ್ರವಾರ ಸಂಜೆ ಮೋದಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಪ್ರತಿಭಟನಾಧ್ಯೋತಕವಾಗಿ ಕಪ್ಪು ಬಟ್ಟೆ ಧರಿಸಿಕೊಂಡು ಬಂದ ಪ್ರತಿಭಟನಕಾರರಿಗೆ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಯಾವುದೇ ಅಡ್ಡಿಪಡಿಸಲಿಲ್ಲ.
ಮೋದಿಗೆ ಕಪ್ಪುಬಾವುಟದ ಸ್ವಾಗತ ನೀಡಿದ ಅಸ್ಸಾಂ ವಿದ್ಯಾರ್ಥಿಗಳು
ಅಸ್ಸಾಂನ ಸಚಿವಾಲಯದ ಮುಂದೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ, ಮುಖ್ಯಮಂತ್ರಿ ಸೋನೊವಾಲ್ ಮತ್ತು ಸಚಿವ ಹಿಮಂತ ಬಿಸ್ವ ಶರ್ಮಾ ಅವರ ಪ್ರತಿಕೃತಿಗಳನ್ನು ದಹಿಸಿದರು.
Array |
ಚೌಕಿದಾರನೇ ಬರಬೇಕಾಯಿತು!
'ಹಿಂದಿನ ಸರ್ಕಾರಗಳು ಭ್ರಷ್ಟಾಚಾರವನ್ನು ಸಹಜ ಎನ್ನುವಂತೆ ಮಾಡಿದ್ದವು. ಆದರೆ ನಾವು ಸಮಾಜದ ಈ ಪಿಡುಗನ್ನು ಬೇರು ಸಹಿತ ಕಿತ್ತೊತೆಗೆಯುತ್ತಿದ್ದೇವೆ. ಚೌಕಿದಾರನು ಭ್ರಷ್ಟಾಚಾರವನ್ನು ಹೊಡೆದುರುಳಿಸುತ್ತಿದ್ದಾನೆ' ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ಅಸ್ಸಾಂನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 14,000 ಕೋಟಿ ರೂ. ವೆಚ್ಚದ ಯೋಜನೆಗಳು ಮುಕ್ತಾಯಗೊಂಡಿದ್ದು, ಅದು ದೇಶದ ತೈಲ ಮತ್ತು ಅನಿಲ ಹಬ್ ಆಗಿ ಪರಿವರ್ತನೆಯಾಗಲಿದೆ ಎಂದು ಮೋದಿ ಹೇಳಿದರು.
ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ
ಈಶಾನ್ಯದ ಪ್ರಗತಿ ಆದ್ಯತೆ
ಕಳೆದ ಕೆಲವು ವರ್ಷಗಳಲ್ಲಿ ಈಶಾನ್ಯದುದ್ದಕ್ಕೂ ಸುದ್ದಿಪತ್ರಿಕೆಗಳ ಶೀರ್ಷಿಕೆ ಬದಲಾಗಿರುವುದನ್ನು ನೀವು ನೋಡಿದ್ದೀರಿ. ನಿಮ್ಮ ಸುತ್ತಲೂ ಆಗುತ್ತಿರುವ ಅಭಿವೃದ್ಧಿ ಮತ್ತು ಪ್ರಗತಿಯನ್ನು ನೀವೆಲ್ಲರೂ ಓದುತ್ತಿದ್ದೀರಿ, ನೋಡುತ್ತಿದ್ದೀರಿ. ಈಶಾನ್ಯ ಮತ್ತು ಅದರ ತ್ವರಿತಗತಿಯ ಅಭಿವೃದ್ಧಿ ಹಾಗೂ ಒಟ್ಟಾರೆ ಪ್ರಗತಿ ನನ್ನ ಸರ್ಕಾರದ ಮೊದಲ ಆದ್ಯತೆ ಎಂದರು.
'ಭುಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡಲು ಇಷ್ಟು ವರ್ಷಗಳು ಬೇಕಾದವು. ಹಜಾರಿಕಾ ಅವರು ಬದುಕಿದ್ದಾಗಲೇ ಭಾರತ ರತ್ನ ಸಿಗಬೇಕಿತ್ತು. ಆದರೆ, ದುರದೃಷ್ಟವಶಾತ್ ಆಗಲಿಲ್ಲ. ಅದಕ್ಕೆ ಯಾರು ಕಾರಣಕರ್ತರು ಎಂದು ನೀವೇ ನಿರ್ಧರಿಸಿ. ಬಿಜೆಪಿ ಆಡಳಿತದಲ್ಲಿಯೇ ಗೋಪಿನಾತ್ ಬರ್ದೊಲೊಯಿ ಮತ್ತು ಭುಪೇನ್ ಅವರಿಗೆ ಭಾರತ ರತ್ನ ನೀಡಲಾಗಿದೆ ಎಂದು ಮೋದಿ ಹೇಳಿದರು.
ವಿವಾದಾತ್ಮಕ ಪೌರತ್ವ ಮಸೂದೆ ಲೋಕಸಭೆಯಲ್ಲಿ ಪಾಸ್, ಏನಿದೆ ಮಸೂದೆಯಲ್ಲಿ?
ಅರುಣಾಚಲ ಪ್ರದೇಶದಲ್ಲಿ ಮೋದಿ
ಇದಕ್ಕೂ ಮೊದಲು ಅರುಣಾಚಲ ಪ್ರದೇಶದ ಇಟಾನಗರಕ್ಕೆ ತೆರಳಿದ ಮೋದಿ, ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ, ಎಫ್ಟಿಐಐ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಡಿಡಿ ಅರುಣ್ ಪ್ರಭಾ ಎಂಬ ಹೊಸ ದೂರದರ್ಶನ ಚಾನೆಲ್ಅನ್ನು ಉದ್ಘಾಟಿಸಿದರು
ತೇಜು ವಿಮಾನ ನಿಲ್ದಾಣವನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಆದರೆ, ಈ ರಾಜ್ಯವನ್ನು ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಬಗ್ಗೆ ಯಾವ ಸರ್ಕಾರವೂ ಮುಂದಾಗಲಿಲ್ಲ. ಈ ವಿಮಾನನಿಲ್ದಾಣವನ್ನು ನಾವು 125 ಕೋಟಿ ವಿನಿಯೋಗಿಸಿ ವಿಸ್ತರಿಸಿದ್ದೇವೆ ಎಂದರು.
ಹಿಂದಿನ ಸರ್ಕಾರಗಳಿಂದ ನಿರ್ಲಕ್ಷ್ಯ
ಈ ಹಿಂದಿನ ಸರ್ಕಾರಗಳು ಅರುಣಾಚಲ ಪ್ರದೇಶವನ್ನು ದಶಕಗಟ್ಟಲೆ ನಿರ್ಲಕ್ಷಿಸಿದ್ದವು. ನಾವೀಗ ಅದನ್ನು ಬದಲಿಸಲು ಇಲ್ಲಿದ್ದೇವೆ. ಈಶಾನ್ಯ ರಾಜ್ಯಗಳು ಚೆನ್ನಾಗಿ ಅಭಿವೃದ್ಧಿಯಾದರೆ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ.
ಅರುಣಾಚಲ ಪ್ರದೇಶಕ್ಕೆ ನಮ್ಮ ಸರ್ಕಾರ 44,000 ಕೋಟಿ ರೂಪಾಯಿ ನಿಧಿ ಒದಗಿಸಿದೆ. ಇದು ಹಿಂದಿನ ಸರ್ಕಾರ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಹೆಚ್ಚು. ಸುಮಾರು ಒಂದು ಸಾವಿರ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಇಟಾನಗರಕ್ಕೂ ರೈಲ್ವೆ ಸಂಪರ್ಕ ಒದಗಿಸಲಾಗಿದೆ. ಇದರಿಂದಾಗಿ ಅರುಣಾಚಲ ಪ್ರದೇಶದ ಜನಜೀವನಮಟ್ಟ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿದರು.