ಮಹಾ ಬಿಕ್ಕಟ್ಟು: ಬಂಡಾಯ ಶಾಸಕರಿಗೆ ಆತಿಥ್ಯ- ಅಸ್ಸಾಂ ಹೋಟೆಲ್ನ ಹೊರಗೆ ಟಿಎಂಸಿ ಪ್ರತಿಭಟನೆ
ಗುವಾಹಟಿ ಜೂನ್ 23: ಏಕನಾಥ್ ಶಿಂಧೆ ಅವರ ಪಾಳೆಯದ ಮಹಾರಾಷ್ಟ್ರದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಶನ್ ಬ್ಲೂ ಹೋಟೆಲ್ನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಕ್ಕಾಗಿ ಹಲವಾರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರು ಮತ್ತು ಅಸ್ಸಾಂ ಘಟಕದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಸ್ಸಾಂ ಪ್ರವಾಹದ ನಡುವೆ ಬಿಜೆಪಿ ಶಾಸಕರ ಮಾರಾಟಕ್ಕೆ ಆತಿಥ್ಯ ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಿವಸೇನಾ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವಾರು ಶಾಸಕರು ಅಸ್ಸಾಂನ ಗುವಾಹಟಿಯ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿದ್ದು, ಎಂವಿಎ ಸರ್ಕಾರವನ್ನು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಇತ್ತ ಅಸ್ಸಾಂನಲ್ಲಿ ಸುಮಾರು 20 ಲಕ್ಷ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ ಎಂದು ದೂರಿ ಟಿಎಂಸಿಯ ರಾಜ್ಯಾಧ್ಯಕ್ಷ ರಿಪುನ್ ಬೋರಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಅಸ್ಸಾಂ ಪೊಲೀಸರು ಟಿಎಂಸಿ ನಾಯಕ ರಿಪುನ್ ಬೋರಾ ಅವರನ್ನು ಇತರ ಟಿಎಂಸಿ ಪ್ರತಿಭಟನಾಕಾರರೊಂದಿಗೆ ರಾಡಿಸನ್ ಬ್ಲೂ ಹೊರಗಿನ ಪ್ರತಿಭಟನಾ ಸ್ಥಳದಿಂದ ವಾಪಸ್ ಕಳುಹಿಸಿದ್ದಾರೆ. ಅಸ್ಸಾಂನಲ್ಲಿ ಭೀಕರ ಪ್ರವಾಹದಲ್ಲಿ ಜನರು ಸಾಯುತ್ತಿರುವಾಗ ಮಹಾರಾಷ್ಟ್ರದ ಭಿನ್ನಮತೀಯರಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಸಿಎಂ ಹೋಮಂತ ಬಿಸ್ವಾ ಶರ್ಮಾ ಅವರನ್ನು ಬೋರಾ ದೂಷಿಸಿದರು.
|
42 ಶಾಸಕರು ಗುವಾಹಟಿಯ ಹೋಟೆಲ್ನಲ್ಲಿ ಮೊಕ್ಕಾಂ
MLC ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಏಕನಾಥ್ ಶಿಂಧೆ ಮತ್ತು 26 ಶಾಸಕರು ನಾಪತ್ತೆಯಾಗಿ ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಪ್ರಾರಂಭವಾಯಿತು. ಇದು ಆಡಳಿತಾರೂಢ ಸರ್ಕಾರದ ಕೆಲವು ಶಾಸಕರ ಅಡ್ಡ ಮತದಾನದ ಫಲಿತಾಂಶ ಎಂದು ನಂಬಲಾಗಿದೆ. ಮೂಲಗಳ ಪ್ರಕಾರ, ಸುಮಾರು 42 ಶಾಸಕರು ಗುವಾಹಟಿಯ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ನಂಬಲಾಗಿದೆ. ಜೊತೆಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬುಧವಾರ ತಮ್ಮ ಅಧಿಕೃತ ನಿವಾಸ ವರ್ಷಾದಿಂದ ಕುಟುಂಬದ ಖಾಸಗಿ ಮನೆ ‘ಮಾತೋಶ್ರೀ'ಗೆ ತೆರಳಿದ್ದಾರೆ. ಈ ನಡುವೆ ಸುಮಾರು 20 ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
'ಮಹಿಳೆಯನ್ನು ಅವಮಾನಿಸುವುದಕ್ಕಾಗಿ ಈ ಕರ್ಮ'
ಕಂಗನಾ ರಣಾವತ್ ಅವರ ಈ ಹಳೆಯ ವಿಡಿಯೊಗಳು ವೈರಲ್ ಆಗಿದೆ. ಹಿಂದೆ ಕಂಗನಾ ಕಚೇರಿ ನೆಲಸಮಗೊಳಿಸಿದ್ದಕ್ಕೆ ಉದ್ಧವ್ ಈ ಕರ್ಮ ಎದುರಿಸಬೇಕಾಗಿದೆ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕಿಡಿಕಾರಿದ್ದಾರೆ. ಕಂಗನಾ ಅವರ ಇತ್ತೀಚಿನ ಚಿತ್ರ ಧಾಕಡ್ ವಿಫಲವಾದ ಕಾರಣ ಕಂಗನಾ 'ಕರ್ಮ' ಎದುರಿಸುತ್ತಿದ್ದಾರೆ. ಧಾಕಡ್ ಅನ್ನು ನೋಡಿ ಅದರಲ್ಲಿ ಅವರು ಅನೇಕ ಮಹಿಳೆಯರನ್ನು ಅವಮಾನಿಸಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
'ಹಿಂದುತ್ವದ ವಿಷಯದಲ್ಲಿ ರಾಜಿ ಇಲ್ಲ'
ತಮ್ಮದೇ ಪಕ್ಷದ ಸದಸ್ಯರಿಂದ ಬಂಡಾಯ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಬುಧವಾರ ಸಿಎಂ ನಿವಾಸದಿಂದ ಹೊರಬಂದು ತಮ್ಮ ಕುಟುಂಬದ ನಿವಾಸ ಮಾತೋಶ್ರೀಗೆ ತೆರಳಿದರು. ಬುಧವಾರದ ನೇರ ಭಾಷಣದಲ್ಲಿ ಉದ್ಧವ್, ತಮ್ಮ ಪಕ್ಷವು ಹಿಂದುತ್ವದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಮುಖ್ಯಮಂತ್ರಿ ಹುದ್ದೆಗೆ ಹಾತೊರೆಯುವುದಿಲ್ಲ ಮತ್ತು ಇನ್ನೊಬ್ಬ ಶಿವಸೈನಿಕರಿಗೆ ಸಂತೋಷದಿಂದ ದಾರಿ ಮಾಡಿಕೊಡುವುದಾಗಿ ಹೇಳಿದರು. ಉದ್ಧವ್ ಅವರು ತಮ್ಮ ರಾಜೀನಾಮೆ ಪತ್ರ ಸಿದ್ಧವಾಗಿದೆ ಮತ್ತು ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರಾದ ಆದಿತ್ಯ ಠಾಕ್ರೆ ಮತ್ತು ತೇಜಸ್ ಠಾಕ್ರೆ ಅವರೊಂದಿಗೆ ಸಂಜೆ ಸಿಎಂ ಅಧಿಕೃತ ನಿವಾಸದಿಂದ ತೆರಳುವುದಾಗಿ ಹೇಳಿದರು.
ಸಂಜೆ 5 ಗಂಟೆಗೆ ಸಭೆ
ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿರುವಂತೆಯೇ ಮಹಾ ಆಘಾದಿ ಸರ್ಕಾರದ ಪಾಲುದಾರ ಪಕ್ಷ ಎನ್ ಸಿಪಿ ಇಂದು ಸಂಜೆ 5 ಗಂಟೆಗೆ ಸಭೆ ಆಯೋಜಿಸಿದೆ. ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಿಸಲು ನಮ್ಮ ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಿದ್ದೇನೆ ಎಂದು ಎನ್ಸಿಪಿಯ ಮುಖಂಡ ಜಯಂತ್ ಪಾಟೀಲ್ ಸುದ್ದಿಗಾರರಿಗೆ ಹೇಳಿದರು. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಪಕ್ಷದ ಸಂಸದರು ಸಹ ಸಭೆಯಲ್ಲಿ ಇರುತ್ತಾರೆ.ಈಗಾಗಲೇ ನಾವು ಶರದ್ ಪವಾರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದು, ಕಳೆದ 3-4 ದಿನಗಳಲ್ಲಿ ನಡೆದ ಘಟನೆಗಳ ಮೌಲ್ಯಮಾಪನ ಮಾಡಲಾಗಿದೆ ಎಂದು ಅವರು ತಿಳಿಸಿದರು.
Recommended Video