ಮುಸ್ಲಿಂ ಖಬರ್ ಸ್ತಾನ್ ಗೆ ಹಿಂದೂ ಕುಟುಂಬದಿಂದ ಭೂಮಿ ದಾನ
ಗುವಾಹತಿ (ಅಸ್ಸಾಂ), ಮೇ 13: ಧರ್ಮ- ಜಾತಿಗಳ ಆಚೆಗೆ ಸಮಾಜದಲ್ಲಿ ಮನುಷ್ಯತ್ವ ಉಸಿರಾಡುತ್ತಲೇ ಇರುತ್ತದೆ. ಅದಕ್ಕೆ ಇಲ್ಲೊಂದು ಉದಾಹರಣೆ ಇದೆ. ಅಸ್ಸಾಂ ರಾಜ್ಯದ ಲಖಿಂಪುರ್ ಜಿಲ್ಲೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಕುಟುಂಬವೊಂದು ಮುಸ್ಲಿಮರ ಸ್ಮಶಾನದ ವಿಸ್ತರಣೆಗೆ ಬೇಕಾಗಿದ್ದ ಜಾಗವನ್ನು ದಾನವಾಗಿ ನೀಡಿದೆ.
ಅಡ್ಡಿಯಾದ ಬಡತನ;ಹಿಂದೂ ಯುವತಿಯ ಮದುವೆಗೆ ಮುಸ್ಲಿಂ ಯುವಕರ ನೇತೃತ್ವ
ದಿವಂಗತ ಕರುಣಕಂಠ ಭುಯಾನ್ ರ ಕುಟುಂಬವು ಉತ್ತರ ಲಖಿಂಪುರ್ ನಲ್ಲಿ ವಾಸವಿದ್ದು, 0.84 ಎಕರೆ ಜಾಗವನ್ನು ನಹಾರ್ ಪುಖುರಿ ಖಬರ್ ಸ್ತಾನ್ (ಸ್ಮಶಾನ)ಗೆ ದಾನ ಮಾಡಿದೆ. ಇದು ಉತ್ತರ ಲಖಿಂಪುರ್ ನ ರೈಲು ನಿಲ್ದಾಣದ ಸಮೀಪದಲ್ಲೇ ಇದೆ. ಇಲ್ಲಿ ಇನ್ನೂ ಒಂದು ಮುಖ್ಯ ಅಂಶ ಹೇಳಬೇಕು ಅಂದರೆ, ಮುಸ್ಲಿಮರ ಖಬರ್ ಸ್ತಾನ್ ಹಿಂದೂಗಳ ಸ್ಮಶಾನಕ್ಕೆ ಹೊಂದಿಕೊಂಡಂತೆಯೇ ಇದೆ.
ಭುಯಾನ್ ಕುಟುಂಬವು ದಾನ ಮಾಡಿದ್ದ್ ಸ್ಥಳದಲ್ಲಿ ಮೇ ನಾಲ್ಕನೇ ತಾರೀಕಿನಂದು ನಹಾರ್ ಪುಖುರಿ ಖಬರ್ ಸ್ತಾನ್ ಸಮಿತಿಯು ಸಭೆ ಕರೆದಿತ್ತು. ಈ ಕುಟುಂಬದ ದಾನವನ್ನು ಕೊಂಡಾಡಿ, ಸನ್ಮಾನ ಕೂಡ ಮಾಡಲಾಯಿತು. ಸಮಿತಿ ಅಧ್ಯಕ್ಷ ಡಾ.ಹಮಿದುರ್ ರೆಹಮಾನ್ ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಈ ಕುಟುಂಬದ ನಿರ್ಧಾರದ ಹಿಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ತಿಳಿಸಿದರು.