ಅಸ್ಸಾಂನಲ್ಲಿ ಭಾರೀ ಮಳೆ: ಭೂಕುಸಿತಕ್ಕೆ ನಾಲ್ಕು ಕಾರ್ಮಿಕರು ದುರ್ಮರಣ
ಗುವಾಹಟಿ, ಜೂನ್ 14: ಅಸ್ಸಾಂ ರಾಜಧಾನಿ ಗುವಾಹಟಿಯ ಬೋರಗಾಂವ್ ಬಳಿಯ ನಿಜಾರ್ಪುರದಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಕಾರ್ಮಿಕರಾಗಿದ್ದು, ಭೂಕುಸಿತದಿಂದ ಅವಶೇಷಗಳ ಅಡಿಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ಘಟನೆಯ ನಂತರ ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರತೆಗೆದಿವೆ.
ಪೊಲೀಸರ ಪ್ರಕಾರ, ಸಂತ್ರಸ್ತರು ಈ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಮನೆಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ವಾಸವಿದ್ದು, ರಾತ್ರಿ ಮಲಗಿದ್ದ ವೇಳೆ ಘಟನೆ ನಡೆದಿರುವುದು ಅವರ ಗಮನಕ್ಕೆ ಬಂದಿಲ್ಲ. ರಾತ್ರಿ ಮಳೆಗೆ ಮನೆಯ ಗೋಡೆ ಒಡೆದು ಗುಡ್ಡಗಳ ಮಣ್ಣು ಮನೆಗೆ ನುಗ್ಗಿದೆ ಎಂದು ಸಮೀಪದ ಸ್ಥಳೀಯರಿಂದ ತಿಳಿದು ಬಂದಿದೆ.
'ಇಲ್ಲಿಯವರೆಗೆ ನಾಲ್ವರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ನಮ್ಮ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತ ನಾಲ್ವರಲ್ಲಿ ಮೂವರು ಧುಬ್ರಿಯಿಂದ ಮತ್ತು ಒಬ್ಬರು ಕೊಕ್ರಜಾರ್ನಿಂದ ಬಂದವರಾಗಿದ್ದಾರೆ. ಬಾಡಿಗೆ ಮನೆ ಪಡೆದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು' ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಂದಿನಿ ಕಾಕತಿ ಎಎನ್ಐ ಉಲ್ಲೇಖಿಸಿದ್ದಾರೆ.
ಗುವಾಹಟಿಯ ಹಲವಾರು ಪ್ರದೇಶಗಳು ಜಲಾವೃತ
ಅಸ್ಸಾಂನಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಗುವಾಹಟಿಯ ಹಲವಾರು ಪ್ರದೇಶಗಳು ಜಲಾವೃತವಾಗಿದೆ ಎಂದು ವರದಿಯಾಗಿದೆ ಮತ್ತು ಗುವಾಹಟಿ ರೈಲು ನಿಲ್ದಾಣದ ಭಾಗಗಳು ಸಹ ಜಲಾವೃತವಾಗಿವೆ. ಮಳೆಯಿಂದಾಗಿ ಗುವಾಹಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವೂ ವಿಳಂಬವಾಗಿದೆ.
ಐಎಂಡಿ ರೆಡ್ ಅಲರ್ಟ್
ಭಾರೀ ಮಳೆಯಿಂದಾಗಿ ಅಸ್ಸಾಂ ಸರ್ಕಾರ ಮಂಗಳವಾರ ಗುವಾಹಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ತೀರಾ ಅಗತ್ಯವಿಲ್ಲದೇ ಹೊರಗೆ ಹೋಗಬೇಡಿ ಎಂದು ಸಲಹೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.
ರಕ್ಷಣಾ ಕಾರ್ಯಚರಣೆ
ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ನಬನೀತ್ ಮಹಂತ, 'ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ನಾಲ್ವರು ಕಾರ್ಮಿಕರು ವಾಸವಿದ್ದರು. ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದು, ಮಂಗಳವಾರ ಬೆಳಗಿನ ಜಾವದವರೆಗೂ ಮಳೆ ಮುಂದುವರಿದಿದೆ. ನಮಗೆ ಸುಮಾರು 2:30 ಕ್ಕೆ ಮಾಹಿತಿ ಸಿಕ್ಕಿತು ಮತ್ತು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು' ಎಂದರು.
ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹ ಹಸ್ತಾಂತರ
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಮೃತ ಕಾರ್ಮಿಕರನ್ನು ಮುನ್ವರ್ ಹುಸೇನ್, ಮೊಫಿಜುಲ್ ಹಕ್, ಅಮರುಲ್ ಹಕ್ ಮತ್ತು ಅಸನೂರ್ ಅಲಿ ಎಂದು ಗುರುತಿಸಲಾಗಿದ್ದು, ಇವರು ನಾಶವಾದ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು.ಮೃತ ನಾಲ್ವರಲ್ಲಿ ಮೂವರು ಧುಬ್ರಿಯಿಂದ ಮತ್ತು ಒಬ್ಬರು ಕೊಕ್ರಜಾರ್ನಿಂದ ಬಂದವರಾಗಿದ್ದಾರೆ. ಇವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಾದ ಮಳೆಯಿಂದಾಗಿ ಅಸ್ಸಾಂ ಇನ್ನೂ ಚೇತರಿಸಿಕೊಂಡಿಲ್ಲ. ಮೇಯಲ್ಲಿ ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ರೈಲು ಸಿಕ್ಕಿಹಾಕಿಕೊಂಡು 119 ಪ್ರಯಾಣಿಕರನ್ನು ಐಎಎಫ್ ಪಡೆ ರಕ್ಷಿಸಿತ್ತು. ಸಿಲ್ಚಾರ್-ಗುವಾಹಟಿ ರೈಲು ಕ್ಯಾಚಾರ್ ಪ್ರದೇಶದಲ್ಲಿ ಮಳೆಯಿಂದಾಗಿ ಸಿಲುಕಿಕೊಂಡಿತ್ತು. ಪ್ರವಾಹದ ನೀರಿನಿಂದ ರೈಲು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲು ಸಾಧ್ಯವಾಗಲಿಲ್ಲ. ಹಲವಾರು ಗಂಟೆಗಳ ಕಾಲ ರೈಲು ಸಿಕ್ಕಿಹಾಕಿಕೊಂಡ ಪರಿಣಾಮ ಜಿಲ್ಲಾಡಳಿತ ಭಾರತೀಯ ವಾಯುಪಡೆಯ ಸಹಾಯದಿಂದ 119 ಜನರನ್ನು ರಕ್ಷಿಸಿತ್ತು.
Recommended Video