ಅಸ್ಸಾಂ ಜನತೆಗೆ ರಾಹುಲ್ ಗಾಂಧಿ ನೀಡಿದ 6ನೇ ಆಫರ್!
ಗುವಾಹಟಿ, ಮಾರ್ಚ್ 31: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಸ್ಸಾಂ ರಾಜ್ಯವನ್ನು ಅಸ್ಸಾಂ ಜನರಿಂದಲೇ ನಡೆಸಲಾಗುತ್ತದೆ ಎಂದು ಸಂಸದ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ಹಳೆ ಮೈತ್ರಿಯನ್ನು ಬಿಜೆಪಿಯು ಧರ್ಮದ ಹೆಸರಿನಲ್ಲಿ ಇಬ್ಭಾಗಗೊಳಿಸಲು ಹೊರಡಿದೆ ಎಂದು ಆರೋಪಿಸಿದರು.
ನನ್ನ ಹೆಸರು ಮೋದಿ ಅಲ್ಲ, ನಾನಂತೂ ಮೋದಿ ಅಲ್ಲವೇ ಅಲ್ಲ; ರಾಹುಲ್
ಅಸ್ಸಾಂ ಜನತೆಗೆ ಈಗಾಗಲೇ ಐದು ಭರವಸೆಗಳನ್ನು ನೀಡಿದ್ದು, ಇದೀಗ ಆರನೇ ಭರವಸೆಯನ್ನು ಘೋಷಿಸುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಮಹಾಮೈತ್ರಿಗೆ ಮತ ಹಾಕಿದರೆ ಅಸ್ಸಾಂ ಜನರಿಂದಲೇ ಅಸ್ಸಾಂನಲ್ಲಿ ಆಡಳಿತ ಯಂತ್ರವನ್ನು ನಡೆಸಲಾಗುತ್ತದೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದರು.
ಅಸ್ಸಾಂ ಮತದಾರರಿಗೆ ರಾಹುಲ್ ಗಾಂಧಿ ಭರವಸೆ:
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಅಸ್ಸಾಂನ ಭಾಷೆ, ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ನಡೆಸುತ್ತಿರುವ ದಾಳಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಹಾ ಕಾರ್ಮಿಕರಿಗೆ ದಿನಕ್ಕೆ 365 ರೂಪಾಯಿ ಕೂಲಿ ನಿಗದಿಗೊಳಿಸಲಾಗುವುದು, 5 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು, ರಾಜ್ಯದ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಹಾಗೂ ಗೃಹಿಣಿಯರಿಗೆ 2000 ರೂಪಾಯಿ ಮಾಶಾಸನ ನೀಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದರು.
ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ
ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್.27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆಯದಿದೆ. ಏಪ್ರಿಲ್.1ರಂದು 39 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ಏಪ್ರಿಲ್ 6ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇ.2ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ