ಅಸ್ಸಾಂನಲ್ಲಿ ಭಯದ ವಾತಾವರಣ ಮರುಕಳಿಸಿದೆ: ಮನಮೋಹನ್ ಸಿಂಗ್
ಗುವಾಹಟಿ, ಮಾರ್ಚ್ 26: ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ನಡೆಯಲಿದೆ. ಚುನಾವಣೆಗೂ ಮುನ್ನ ಅಸ್ಸಾಂನ ಮತದಾರರಿಗೆ ವಿಡಿಯೋ ಸಂದೇಶ ರವಾನಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಸರ್ಕಾರಕ್ಕಾಗಿ ಜಾಣ್ಮೆಯಿಂದ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
1991ರಿಂದ 2019ರವರೆಗೆ ಅಸ್ಸಾಂನಿಂದ ರಾಜ್ಯಸಭೆ ಸಂಸದರಾಗಿದ್ದ ಮನಮೋಹನ್ ಸಿಂಗ್ ಅವರು, ಪ್ರಸ್ತುತ ರಾಜಸ್ಥಾನದಿಂದ ಮೇಲ್ಮನೆಯನ್ನು ಪ್ರತಿನಿಧಿಸುತ್ತಿದ್ದಾರೆ.
ಅಸ್ಸಾಂಗೆ ಫೋಟೋಶೂಟ್ಗಾಗಿ ಕಾಂಗ್ರೆಸ್ ನಾಯಕರ ಭೇಟಿ: ಅಮಿತ್ ಶಾ
'ಹಲವು ವರ್ಷಗಳಿಂದಲೂ ಅಸ್ಸಾಂ ನನ್ನ ಎರಡನೆಯ ಮನೆಯಾಗಿತ್ತು. ನಾನು ಐದು ವರ್ಷ ಹಣಕಾಸು ಸಚಿವನಾಗಿ ಮತ್ತು ಹತ್ತು ವರ್ಷ ಪ್ರಧಾನಿಯಾಗಿ ದೇಶದ ಸೇವೆ ಸಲ್ಲಿಸಲು ಅಸ್ಸಾಂನ ಜನರು ನನಗೆ ಅನುವು ಮಾಡಿಕೊಟ್ಟಿದ್ದಾರೆ. ಇಂದು ನಾನು ನಿಮ್ಮಲ್ಲಿ ಒಬ್ಬನಾಗಿ ಮಾತನಾಡುತ್ತಿದ್ದೇನೆ. ನೀವು ಮತ್ತೆ ಮತ ಚಲಾಯಿಸುವ ಸಮಯ ಬಂದಿದೆ' ಎಂದು ಸಿಂಗ್ ಹೇಳಿದ್ದಾರೆ.
ದೀರ್ಘಕಾಲದ ಅಶಾಂತಿ ಮತ್ತು ಹಿಂಸಾಚಾರದ ಬಳಿಕ ತರುಣ್ ಗೊಗೊಯ್ ಅವರ ನಾಯಕತ್ವದಲ್ಲಿ 2001-2016ರವರೆಗೆ ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಹೊಸ ಆರಂಭ ನಡೆಯಿತು. ಆದರೆ ಈಗ ಮತ್ತೆ ಬಹಳ ಗಂಭೀರ ಹಿನ್ನಡೆ ಉಂಟಾಗುತ್ತಿದೆ. ಸಮಾಜವನ್ನು ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಆಧಾರದಲ್ಲಿ ವಿಭಜಿಸಲಾಗುತ್ತಿದೆ. ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಎಲ್ಲ ಕಡೆ ಉದ್ವಿಗ್ನತೆ ಮತ್ತಯ ಭಯದ ವಾತಾವರಣ ಮೂಡಿದೆ. ಕೆಟ್ಟ ಉದ್ದೇಶದ ನೋಟು ನಿಷೇಧ ಮತ್ತು ಜಿಎಸ್ಟಿಯ ಅಸಮರ್ಪಕ ಜಾರಿ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ ಎಂದು ಸಿಂಗ್ ವಾಗ್ದಾಳಿ ನಡೆಸಿದ್ದಾರೆ.