ಅಸ್ಸಾಂನಲ್ಲಿ ಭುಗಿಲೆದ್ದ ಹಿಂಸಾಚಾರ: 12 ಜಿಲ್ಲೆಗಳಲ್ಲಿ ಕರ್ಫ್ಯೂ
ಗುವಾಹಟಿ, ಡಿಸೆಂಬರ್ 12: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೇಳುತ್ತಿದೆ.
ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ ಪ್ರತಿಭಟನಾಕಾರರ ಹೋರಾಟ ಹಿಂಸಾತ್ಮಕ ರೂಪ ಪಡೆದ ಹಿನ್ನೆಲೆಯಲ್ಲಿ ಗುವಾಹಟಿ ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ; ಅಸ್ಸಾಂನಲ್ಲಿ ಮಗು ಸಾವು
ಹಾಗೆಯೇ ಆಯಾ ಸ್ಥಳಗಳಲ್ಲಿ ಅಂತರ್ಜಾಲ ಸೇವೆಗಳನ್ನು ರದ್ದುಪಡಿಸಲು ಕೂಡ ಸರ್ಕಾರ ನಿರ್ಧರಿಸಿದೆ. ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡುತ್ತಿರುವುದರಿಂದ ಹಿಂಸಾಚಾರಗಳು ಇನ್ನಷ್ಟು ಹೆಚ್ಚುತ್ತಿವೆ ಎನ್ನಲಾಗಿದೆ.ಹೀಗಾಗಿ ನಿಷೇಧಾಜ್ಞೆ ಮೂಲ ಪರಿಸ್ಥಿತಿಯಲ್ಲಿ ಹತೋಟಿಗೆ ತರಲು ನಿಷೇಧಾಜ್ಞೆ ಹೇರಲಾಗಿದೆ.
ಬುಧವಾರ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ನಿವಾಸದ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಇನ್ನೊಂದೆಡೆ ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು.
ಈ ವಿಧೇಯಕವು ಭಾರತದ ಹಾಲಿ ನಾಗರಿಕರಿಗೆ ಅನ್ವಯಿಸುವುದಿಲ್ಲ.ಭಾರತೀಯ ಮುಸ್ಲಿಮರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಯಾವೊಬ್ಬ ಭಾರತೀಯ ಮುಸ್ಲಿಮರ ಮತದಾನದ ಹಕ್ಕು ಕಸಿದುಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಪೌರತ್ವ ತಿದ್ದುಪಡಿ ಮಸೂದೆ ಪಾಸ್; ಯಾರು, ಏನು ಹೇಳಿದರು?
ಮುಸ್ಲಿಂ ಸಂಘಟನೆಗಳ ಹೋರಾಟ ಮುಂದುವರೆದಿದೆ.ಈಗಾಗಲೇ ಮಣಿಪುರ ತ್ರಿಪುರದಲ್ಲಿ 48 ಗಂಟೆಗಳ ಕಾಲ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಭಾನುವಾರದಂದು ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವರೂ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಕೇಂದ್ರ ಸರ್ಕಾರಕ್ಕೆ ಜಮ್ಮು ಕಾಶ್ಮೀರದ ಜೊತೆಗೆ ಹೊಸ ತಲೆನೋವು ಸೇರಿದಂತಾಗಿದೆ.